ಬೆಂಗಳೂರಿನಲ್ಲಿ ಉರುಳಿದ ಮನೆ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ
Update: 2021-10-17 15:58 GMT
ಬೆಂಗಳೂರು, ಅ.17: ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರವಿವಾರವೂ ಮನೆಯೊಂದು ಉರುಳಿ ಬಿದ್ದಿದ್ದು, ಸೂಕ್ತ ರಕ್ಷಣೆ ನೀಡದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿನ ರಾಜಾಜಿನಗರದ ಆರ್ಜಿಐ ಕಾಲನಿಯ ದಯಾನಂದನಗರದಲ್ಲಿ ಎಂಟು ದಶಕಗಳ ಕಾಲದ ಮನೆಯೊಂದು ಕುಸಿದು ನೆಲಕ್ಕೆ ಉರುಳಿದೆ. ಅಲ್ಲದೆ, ಎರಡು ದಿನಗಳ ಹಿಂದೆಯಷ್ಟೇ ಮನೆಯ ಒಂದು ಭಾಗ ಉರುಳಿಬಿದ್ದಿದೆ.
ಇದೀಗ ಅಕ್ಕಪಕ್ಕದಲೇ ಇರುವ ಎರಡು ಹೆಂಚಿನ ಮನೆಯ ಗೋಡೆ ಕುಸಿದಿದೆ. ಕುಸಿದ ಮನೆಯಲ್ಲಿ 7 ಜನರು ವಾಸವಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮನೆಯ ಸದಸ್ಯರು, ಎರಡು ದಿನಗಳಿಂದ ಊಟ, ನಿದ್ರೆಯಿಲ್ಲದೆ ಬೀದಿಯಲ್ಲೇ ಪರದಾಡುತ್ತಿದ್ದೇವೆ. ರಾತ್ರಿಯೇ ದುರ್ಘಟನೆ ನಡೆದಿದ್ದರೂ ಯಾವ ಅಧಿಕಾರಿಯೂ ಇದುವರೆಗೂ ಭೇಟಿ ನೀಡಿಲ್ಲ. ಶಾಸಕ ಹಾಗೂ ಬಿಬಿಎಂಪಿ ಅಧಿಕಾರಿಗಳು ಇಲ್ಲಿಯವರೆಗೂ ಮನೆಯ ಸುತ್ತ ಸುಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.