ಹಿರಿಯ ನಟ ಶಂಕರ್​ ರಾವ್​ ನಿಧನ

Update: 2021-10-18 16:42 GMT

ಬೆಂಗಳೂರು, ಅ.18: ಸಿನೆಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಿರಿಯ ನಟ ಶಂಕರ್‍ರಾವ್ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 

84 ವರ್ಷ ವಯಸ್ಸಾಗಿದ್ದ ಇವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಅರಕೆರೆಯಲ್ಲಿರುವ ತಮ್ಮ ಮನೆಯಲ್ಲಿ ಶಂಕರ್‍ರಾವ್ ಅವರು ಕೊನೆಯುಸಿರೆಳೆದಿದ್ದಾರೆ.  

ಪಾಪ ಪಾಂಡು ಧಾರಾವಾಹಿಯಲ್ಲಿ ಶಂಕರ್‍ರಾವ್ ವಹಿಸಿದ್ದ ಬಾಸ್ ಬಾಲರಾಜ್ ಪಾತ್ರ ಜನಪ್ರಿಯತೆ ಗಳಿಸಿತ್ತು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದವರು, ಕಾಕನ ಕೋಟೆ, ಸಿಂಹಾಸನ, ಮಾವನಿಗೆ ತಕ್ಕ ಅಳಿಯ, ಧ್ರುವ, ಅಪ್ಪು, ಬಿಸಿಬಿಸಿ ಮುಂತಾದ ಚಿತ್ರಗಳಲ್ಲಿ ಪೋಷಕ ನಟನ ಪಾತ್ರ ನಿರ್ವಹಿಸಿದ್ದರು.

ಶಂಕರ್‍ರಾವ್ ಅವರು ಇಬ್ಬರು ಮಕ್ಕಳು, ಪತ್ನಿ ಉಮಾರನ್ನು ಅಗಲಿದ್ದು, ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಹಾಸ್ಯ ಪ್ರವೃತ್ತಿಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಸದಾ ಸುತ್ತಲು ಇದ್ದವರನ್ನು ಮಾತನಾಡಿಸುತ್ತಾ ನಗಿಸುತ್ತಿದ್ದರು. 

ಹಿರಿಯ ನಟ ಶಂಕರ್‍ರಾವ್ ನಿಧನಕ್ಕೆ ಸ್ಯಾಂಡಲ್‍ವುಡ್ ನಟರು ಹಾಗೂ ರಂಗಭೂಮಿ ಕಲಾವಿದರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟನ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News