ಬಿಎಂಟಿಸಿ ನಿರ್ವಾಹಕರಿಗೆ ಆದಾಯ ಗುರಿ ಹೆಚ್ಚಿಸುವಂತೆ ಮೇಲಧಿಕಾರಿಗಳಿಂದ ಕಿರುಕುಳ: ಆರೋಪ
ಬೆಂಗಳೂರು, ಅ.23: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳು ಆದಾಯ ಗುರಿ ಮುಟ್ಟದ ನಿರ್ವಾಹಕರಿಗೆ ಆದಾಯ ಹೆಚ್ಚಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಬಿಎಂಟಿಸಿ ಘಟಕ 34ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಪ್ಪ ಕಾಂಬ್ಳೆಗೆ ಘಟಕದ ವ್ಯವಸ್ಥಾಪಕರು ನೀಡಿದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೋವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಬಾರಿ ಇಳಿಮುಖವಾಗಿದೆ. ಮಾತ್ರವಲ್ಲದೇ ಓಲಾ, ಊಬರ್ ಟ್ಯಾಕ್ಸಿ ಮತ್ತು ಮೆಟ್ರೋ ಸೇವೆ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬಿಎಂಟಿಸಿ ಬಸ್ಗಳು ರಸ್ತೆಗೆ ಇಳಿದರೂ ನಿರೀಕ್ಷೆ ಮಟ್ಟದಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿಲ್ಲ. ಹೀಗಾಗಿ ಬಿಎಂಟಿಸಿ ಆದೇಶ ಸಾರಿಗೆ ನೌಕರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಮೊದಲು ಬಿಎಂಟಿಸಿಯಲ್ಲಿ ಪ್ರತಿನಿತ್ಯ 52 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಇದೀಗ 20 ಲಕ್ಷ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಆದಾಯದ ಗುರಿಯನ್ನು ತಲುಪಲಾಗದೆ ಸಿಬ್ಬಂದಿ ನಾನಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.