ದ್ವೇಷಭಾಷಣ ಹಾಗೂ ಕೋಮುವಾದದ ಪ್ರಚಾರವನ್ನು ಕಂಡೂ ಕಾಣದಂತೆ ವರ್ತಿಸಿದ ಫೇಸ್‌ಬುಕ್

Update: 2021-10-24 17:14 GMT

ನ್ಯೂಯಾರ್ಕ್,ಅ.24: ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನ ಸಂಶೋಧಕರು ಭಾರತದಲ್ಲಿ ಫೇಸ್‌ಬುಕ್ ನ ಪೇಜ್‌ಗಳಲ್ಲಿ  ಕಳೆದ ಎರಡು ವರ್ಷಗಳಿಂದ ಅದರಲ್ಲೂ ವಿಶೇಷವಾಗಿ 2019ರ ಸಿಎಎ ವಿರೋಧಿ ಆಂದೋಲನದ ಬಳಿಕ ಮುಸ್ಲಿಂ ವಿರೋಧಿ ದ್ವೇಷ ಭಾಷಣ ನಿರಂತರವಾಗಿ ಹಾಗೂ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಗುರುತಿಸಿದ್ದಾರೆಂದು ವಾಲ್‌ ಸ್ಟ್ರೀಟ್ ಜರ್ನಲ್ ಪತ್ರಿಕೆಯು ಶನಿವಾರ ವರದಿ ಮಾಡಿದೆ. 

ಆದಾಗ್ಯೂ ಫೇಸ್‌ಬುಕ್ ಈ ಸಂಶೋಧನೆಗಳನ್ನು ಬಹುತೇಕವಾಗಿ ಕಡೆಗಣಿಸಿತ್ತು ಹಾಗೂ ತನ್ನ ಪ್ಲಾಟ್ಫಾರಂನಲ್ಲಿ ಕೋಮುವಾದಿ ಗುಂಪುಗಳು ಮತ್ತು ವ್ಯಕ್ತಿಗಳು ದ್ವೇಷ ಭಾಷಣ ಹರಡುತ್ತಿರುವುದನ್ನು ಮುಂದುವರಿಸಲು ಆಸ್ಪದ ನೀಡಿತು ಎಂದು ವಾಲ್‌ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.

►  ಸಿಎಎ ಪ್ರತಿಭಟನೆ ಬಳಿಕ ದ್ವೇಷಭಾಷಣದಲ್ಲಿ ಶೇ.300ರಷ್ಟು ಹೆಚ್ಚಳ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ದೇಶಾದ್ಯಂತ ತೀವ್ರ ರೂಪ ಪಡೆದುಕೊಂಡಿದ್ದ 2019ರ ಡಿಸೆಂಬರ್ ಆನಂತರ ತಿಂಗಳುಗಳಲ್ಲಿ ಫೇಸ್‌ಬುಕ್ ನಲ್ಲಿ ಪ್ರಚೋದನಕಾರಿ ವಿಷಯಗಳ ಪ್ರಮಾಣದಲ್ಲಿ ಶೇ.300ರಷ್ಟು ಹೆಚ್ಚಳವನ್ನು ಕಂಡಿತ್ತೆಂದು ಫೇಸ್‌ಬುಕ್ ಸಂಶೋಧಕರು 2020ರ ಜುಲೈನಲ್ಲಿ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು. ಸಂಸ್ಥೆಯ ದ್ವೇಷ ಭಾಷಣ ವಿರೋಧಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಘಟನೆಯೊಂದನ್ನು ಫೇಸ್‌ಬುಕ್  ಪುಟದಿಂದ ನಿಷೇಧಿಸಬೇಕೆಂದು ಶಿಫಾರಸು ಮಾಡಿದ್ದರು. ಆದಾಗ್ಯೂ ಆ ಗುಂಪು ಫೇಸ್‌ಬುಕ್ ಪುಟದಲ್ಲಿ ಸಕ್ರಿಯವಾಗಿಯೇ ಉಳಿದುಕೊಂಡಿತ್ತು’’ ಎಂದು ವಾಲ್‌ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.

ವಾಲ್‌ ಸ್ಟ್ರೀಟ್ ವರದಿಯ ಬಗ್ಗೆ ಫೇಸ್ಬುಕ್ ಸ್ಪಷ್ಟವಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ದ್ವೇಷಭಾಷಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ನಡೆಸುವ ಬಗ್ಗೆ ತಾನು ಬದ್ಧತೆಯನ್ನು ಹೊಂದಿರುವುದಾಗಿ ಕಂಪೆನಿಯು ತಿಳಿಸಿದೆ. ಹಿಂದಿ ಹಾಗೂ ಬಂಗಾಳಿ ಸೇರಿದಂತೆ ಫೇಸ್ಬುಕ್ನಲ್ಲಿ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವ ದ್ವೇಷಭಾಷಣವನ್ನು ಪತ್ತೆಹಚ್ಚಲು ನಾವು ತಂತ್ರಜ್ಞಾನವನ್ನು ರೂಪಿಸಲು ಗಣನೀಯವಾದ ಹಣವನ್ನು ಹೂಡಿಕೆ ಮಾಡಿದ್ದೆವು.

 ಇದರ ಪರಿಣಾಮವಾಗಿ ಈ ವರ್ಷ ಫೇಸ್ಬುಕ್ನಲ್ಲಿ ಹರಿದಾಡುವ ದ್ವೇಷ ಭಾಷಣದ ಪ್ರಮಾಣವು ಹಿಂದೆ ಇದ್ದುದಕ್ಕಿಂತ ಅರ್ಧಾಂಶದಷ್ಟು ಇಳಿದಿದೆ. ಮುಸ್ಲಿಮರು ಸೇರಿದಂತೆ ದುರ್ಬಲ ಸಮುದಾಯಗಳ ವಿರುದ್ಧ ದ್ವೇಷಭಾಷಣವು ಜಾಗತಿಕ ಮಟ್ಟಲ್ಲಿ ಹೆಚ್ಚಾಗುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಪ್ರಸಾರವಾಗುವ ದ್ವೇಷಭಾಷಣವನ್ನು ನಿಯಂತ್ರಿಸಲು ನಮ್ಮ ನೀತಿಗಳನ್ನು ಅಪ್ಡೇಟ್ ಮಾಡಲು ಬದ್ಧವಾಗಿದ್ದೇವೆ ಎಂದು ಫೇಸ್‌ಬುಕ್  ವಕ್ತಾರರು ತಿಳಿಸಿದ್ದಾರೆ.


 ಭಾರತದಲ್ಲಿ ಕೋಮು ಉದ್ವಿಗ್ನತಯನ್ನು ಸೃಷ್ಟಿಸಲು ಕೆಲವು ಗುಂಪುಗಳು ಹಾಗೂ ಜನರು ಹೇಗೆ ತನ್ನ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆಂಬುದು ಫೇಸ್‌ಬುಕ್  ಅರಿವಿತ್ತು ಎಂಬುಗಾಗಿ ವಾಲ್‌ ಸ್ಟ್ರೀಟ್ ವರದಿ ಮಾಡಿದೆ. ‘‘ ತನ್ನ ಸೇವೆಗಳಿಗೂ, ಕೋಮು ಸಂಘರ್ಷಗಳಿಗೂ ನಂಟಿರುವ ಬಗ್ಗೆ ಫೇಸ್‌ಬುಕ್ ಆತಂಕಗಳನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ ಅದು ತನ್ನ ಹಲವಾರು ಬಳಕೆದಾರರನ್ನು ಸಂದರ್ಶಿಸಲು ಅದು ಸಂಶೋಧಕರನ್ನು ಕಳುಹಿಸಿತ್ತು’’ ಎಂದು ವರದಿ ತಿಳಿಸಿದೆ.


 2020ರ ದಿಲ್ಲಿ ಗಲಭೆಯ ಬಳಿಕ ಭಾರತದಲ್ಲಿನ ಫೇಸ್‌ಬುಕ್ ಇಂಡಿಯಾ ಆಡಳಿತ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ತನ್ನ ಮುಂದೆ ಹಾಜರಾಗುವಂತೆ ದಿಲ್ಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಸಮನ್ಸ್ ನೀಡಿತ್ತು. ಈ ಗಲಭೆಗೆ ಕಾರಣವಾದ ಸನ್ನಿವೇಶಗಳನ್ನು ಖಾತರಿಪಡಿಸಿಕೊಳ್ಳಲು ಸಮಿತಿಯು ಪರಿಶೀಲನೆ ನಡೆಸುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಸಮಿತಿಗೆ ನೆರವಾಗುವ ಬದಲು ಫೇಸ್‌ಬುಕ್ ತನಗೆ ದಿಲ್ಲಿ ವಿಧಾನಸಭಾ ಸಮಿತಿಯು ಸಮನ್ಸ್ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿತ್ತು.

ಭಾರತದಲ್ಲಿನ ಫೇಸ್‌ಬುಕ್ ನ ಅತ್ಯುನ್ನತ ಕಾರ್ಯನಿರ್ವಹಣಾಧಿಕಾರಿಯಿಂದ ಮಾಹಿತಿಗಳನ್ನು ಕೋರಲು ಸಮಿತಿಗೆ ಅಧಿಕಾರವಿಲ್ಲವೆಂದು ಫೇಸ್ಬುಕ್ ವಾದಿಸಿತ್ತು. ಅಂತಿಮವಾಗಿ ಫೇಸ್‌ಬುಕ್ ನ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಮನ್ಸ್ ನೀಡಲು ಸಮಿತಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು. ಆದರೆ ಕಾನೂನು, ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಗೆ ಸಂಬಂಧಿಸಿ ತಾನು ಕೇಳುವ ಯಾವುದೇ ಪ್ರಶ್ನೆಗೆ ಉತ್ತರಿಸುವಂತೆ ಫೇಸ್ಬುಕ್ ಅನ್ನು ಒತ್ತಾಯಿಸುವ ಹಕ್ಕು ಸಮಿತಿಗಿರುವುದಿಲ್ಲವೆಂದು ನ್ಯಾಯಾಲಯ ತೀರ್ಪು ನೀಡಿತ್ತು.

ಭಾರತದಲ್ಲಿ ಫೇಸ್‌ಬುಕ್ ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದ ಅಂಕಿತ್‌ದಾಸ್ ಅವರು ವಿದ್ವೇಷದ ಸಂದೇಶಗಳನ್ನು ಹರಡುತ್ತಿದ್ದ ಸಂಘಟನೆಗಳನ್ನು ರಕ್ಷಿಸುತ್ತಿದ್ದರೆಂದು ವಾಲ್‌ ಸ್ಟ್ರೀಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News