'ಜನಸೇವಕ’ ಯೋಜನೆ: ಜನವರಿ 26ರಿಂದ ಗ್ರಾಮೀಣ ಭಾಗಕ್ಕೂ ವಿಸ್ತರಣೆ; ಸಿಎಂ ಬೊಮ್ಮಾಯಿ

Update: 2021-11-01 15:43 GMT

ಬೆಂಗಳೂರು, ನ. 1: `ಆಧಾರ್ ಕಾರ್ಡ್, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ `ಜನಸೇವಕ’ ನೂತನ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಲ್ಲೇಶ್ವರನಲ್ಲಿ ಚಾಲನೆ ನೀಡಿದರು.

ಸೋಮವಾರ ಇಲ್ಲಿನ ಪ್ಯಾಲೇಸ್ ಗುಟ್ಟಹಳ್ಳಿಯ 4 ಮತ್ತು 5ನೆ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಜತೆ ತೆರಳಿದ ಸಿಎಂ ಬೊಮ್ಮಾಯಿ ಅವರು ವಿವಿಧ ಸೇವೆಗಳನ್ನು ಸಂಬಂಧಪಟ್ಟ ಫಲಾನುಭವಿಗಳ ಮನೆಯೊಳಗೆ ಹೋಗಿ ತಲುಪಿಸಿದರು. ಇದರಿಂದ ಸ್ಥಳೀಯ ಜನರು ಹರ್ಷಚಿತ್ತರಾದರು. ಸಿಎಂ ಮತ್ತು ಸಚಿವರಿಗೆ ಪುಷ್ಪವೃಷ್ಟಿ ಮಾಡಿ ಸಂಭ್ರಮಿಸಿದರು.

ಪ್ರತಿ ಮನೆಯ ಒಳಗೆ ಹೋಗಿ, ಅವರಿಗೆ ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಎಪಿಎಲ್ ಕಾರ್ಡ್ ನೀಡಿದರು. ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿ ಅಲ್ಲಿದ್ದ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೀಡಿದರು. ತಳ್ಳುವ ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಗೆ ಆರೋಗ್ಯ ಕಾರ್ಡ್ ನೀಡಿದರು. ಮುಖ್ಯಮಂತ್ರಿಯೇ ಬಂದು ಈ ರೀತಿ ಸೇವೆ ಒದಗಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಯನ್ನು ಇಡೀ ಬೆಂಗಳೂರು ನಗರದ 28 ಕ್ಷೇತ್ರಗಳನ್ನು ಅನುಷ್ಠಾನ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮಲ್ಲೇಶ್ವರದಲ್ಲಿ ಆಗಿದೆ. 2022ರ ಜನವರಿ 26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿ ಬಸವರಾಜ ಬೊಮ್ಮಾಯಿ, ಜನರ ಮನೆ ಬಾಗಿಲಿಗೆ ಸರಕಾರಿ ಸೇವೆ ಒದಗಿಸುವುದರ ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಕಾಲ್ ಸೆಂಟರ್ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರ ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ನಡೆದುಕೊಂಡೇ ಹೋದ ಸಿಎಂ: ಜನಪ್ರತಿನಿಧಿಗಳು, ತಮ್ಮನ್ನು ಆರಿಸಿದ ಜನರ ಬಳಿಗೆ ತಾವೇ ಹೋಗಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ `ಜನಸೇವಕ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದ ಅವರು, ಜನಸೇವಕರಂತೆ ಸ್ಕೂಟರಿನಲ್ಲಿ ಹೋಗಿಯೇ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಭಾರೀ ಜನ ಸೇರಿದ್ದ ಕಾರಣ, ಸಿಎಂ, ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

58 ಸೇವೆಗಳು ಲಭ್ಯ: `ಜನಸೇವಕ’ ಯೋಜನೆಯಡಿ ಸದ್ಯಕ್ಕೆ ರಾಜ್ಯ ಸರಕಾರದ 8 ಇಲಾಖೆಗಳ 58 ಸೇವೆಗಳು ಮನೆ ಬಾಗಿಲಿಗೇ ಬರಲಿವೆ. ಈ ಇಲಾಖೆಗಳಲ್ಲಿ ಕಂದಾಯ, ಆರೋಗ್ಯ, ಪೊಲೀಸ್, ವಸತಿ, ಶಿಕ್ಷಣ, ಜಲಮಂಡಲಿ, ಇಂಧನ, ಸಾರಿಗೆ, ಆಹಾರ ಇಲಾಖೆ ಸೇರಿವೆ. ಇದರ ವ್ಯಾಪ್ತಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಲಾಖೆಯ ಸೇವೆಗಳನ್ನು ಸೇರಿಸಲಾಗುವುದು. ವಿವರಗಳಿಗೆ www.janasevakakarnataka.gov.in ನೋಡಬಹುದು. ಅಥವಾ ದೂರವಾಣಿ ಸಂಖ್ಯೆ- 080-44554455ನ್ನು ಸಂಪರ್ಕಿಸಬಹುದು. ಮಲ್ಲೇಶ್ವರಂ ಕ್ಷೇತ್ರದ ನಾಗರಿಕರು ಸಂಪರ್ಕಿಸಬಹುದಾದ ಸಂಖ್ಯೆ 080-23563943. 

`ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ-ಆರೋಗ್ಯ, ಕರ್ನಾಟಕ ಐಡಿ ಕಾರ್ಡ್(ಹೆಲ್ತ್ ಕಾರ್ಡ್), ಮತದಾರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ಕ್ಷಿಪ್ರ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್‍ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ. 

`ಜನಸೇವಕ’ ಯೋಜನೆಯಡಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬಹುದು. ಅಂದರೆ, ಆಗಬೇಕಾದ ಕೆಲಸಗಳಿಗಾಗಿ ಹತ್ತಾರು ಸಲ ಸುತ್ತುವುದು, ಟ್ರಾಫಿಕ್ ಜಾಮ್‍ನ ಕಿರಿಕಿರಿ, ವ್ಯರ್ಥ ಕಾಲಹರಣ ಏನೂ ಇಲ್ಲ. ಸರಕಾರವು ಇದರಡಿಯಲ್ಲಿ ಕೇವಲ 115 ರೂ.ಶುಲ್ಕ ನಿಗದಿಪಡಿಸಿದ್ದು, ಇದರ ಮೇಲೊಂದಿಷ್ಟು ಸೇವಾಶುಲ್ಕ ಸೇರಿಸಲಾಗಿದೆ ಅಷ್ಟೇ. 

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಬಸವರಾಜು, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ, ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್ ರೆಡ್ಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ರಸ್ತೆ ಗುಂಡಿ ಮುಚ್ಚಲು ವಾರದ ಗಡುವು: `ನಿರಂತರ ಮಳೆಯಿಂದ ರಸ್ತೆ ಗುಂಡಿ ಮುಚ್ಚಲಾಗುತ್ತಿಲ್ಲ. ಇದಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ಈ ಸಂಬಂಧ ವರದಿಯನ್ನೂ ತರಿಸಿಕೊಳ್ಳಲಾಗಿದೆ. ನಂತರ ನಾನೇ ಖುದ್ದಾಗಿ ವೀಕ್ಷಣೆಗೆ ತೆರಳಲಿದ್ದೇನೆ. ಮಳೆ ಬಿಡುವು ನೀಡಿದರೆ ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚಲು ಕ್ರಮ ವಹಿಸಲಾಗುವುದು'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

`ಜನಸೇವಕ ಯೋಜನೆಗೆ ನನ್ನ ಮಲ್ಲೇಶ್ವರ ಕ್ಷೇತ್ರದ ಮೂಲಕ ಉದ್ಘಾಟಿಸಿದ್ದು ಸಂತಸ ತಂದಿದೆ. ಇಂದಿನಿಂದಲೆ ಸರಕಾರಿ ಸೇವೆ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಾಗುವುದು. ಈ ವಿಷಯದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿ ಇರುತ್ತೆ ಎನ್ನುವ ವಿಶ್ವಾಸ ಇದೆ'

-ಡಾ.ಸಿ.ಎನ್.ಆಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News