×
Ad

ಪ್ರತಿಭಟನಾನಿರತ ರೈತರನ್ನು 'ನಿರುದ್ಯೋಗಿ ಕುಡುಕರು' ಎಂದಿದ್ದ ಬಿಜೆಪಿ ಸಂಸದನಿಗೆ ಕರಿಪತಾಕೆ ಪ್ರದರ್ಶಿಸಿದ ರೈತರು

Update: 2021-11-05 15:57 IST
Photo: Twitter/@ndtv

ಹಿಸಾರ್: ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಪ್ರತಿಭಟನಾನಿರತ ರೈತರನ್ನು 'ನಿರುದ್ಯೋಗಿ ಮದ್ಯವ್ಯಸನಿಗಳು' ಎಂದಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ಇಂದು ಹರ್ಯಾಣಾದ ಹಿಸಾರ್ ಜಿಲ್ಲೆಯ ನಮೌಂದ್ ನಗರಕ್ಕೆ ಧರ್ಮಶಾಲೆಯೊಂದರ ಉದ್ಘಾಟನೆಗೆ ಆಗಮಿಸಿದಾಗ ರೈತರ ಗುಂಪೊಂದರಿಂದ ಕರಿಪತಾಕೆ ಮತ್ತು ಘೋಷಣೆಗಳನ್ನು ಎದುರಿಸಬೇಕಾಯಿತು.  ನಂತರ ಪೊಲೀಸರು ಮತ್ತು ರೈತರ ನಡುವಿನ ಜಟಾಪಟಿಯಲ್ಲಿ ರಾಮ್ ಚಂದರ್ ಅವರ ಕಾರಿನ ಗಾಜು ಪುಡಿಯಾಗಿದೆ.

ಬಿಜೆಪಿ ನಾಯಕ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದ ರೈತರು ಕರಿಪತಾಕೆ ಪ್ರದರ್ಶಿಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದ್ದರು. ಸ್ಥಳಕ್ಕೆ ಪೊಲೀಸರು ಬ್ಯಾರಿಕೇಡುಗಳನ್ನು ಅಳವಡಿಸಿದ್ದರೂ ರೈತರ ಸಂಖ್ಯೆ ದೊಡ್ಡದಿದ್ದುದರಿಂದ ಅವರಿಗೇನೂ ಮಾಡಲು ಸಾಧ್ಯವಾಗಿರಲಿಲ್ಲ. ರೈತರು ಘೋಷಣೆ ಕೂಗುತ್ತಿದ್ದ ಹಾಗೆಯೇ ಬಿಜೆಪಿ ನಾಯಕನ ಬೆಂಬಲಿಗರು ಸರಕಾರ ಪರ ಘೋಷಣೆಗಳನ್ನು ಕೂಗಿದರು ಎಂದು ndtv.com ವರದಿ ಮಾಡಿದೆ.

ಗುರುವಾರ ರೋಹ್ಟಕ್‌ನಲ್ಲಿ ಗೋಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಮ್ ಚಂದರ್ ಅಲ್ಲಿಯೂ ರೈತರ ಪ್ರತಿಭಟನೆ ಎದುರಿಸಿದಾಗ ಪ್ರತಿಭಟನಾಕಾರರನ್ನು 'ನಿರುದ್ಯೋಗಿ ಮದ್ಯವ್ಯಸನಿಗಳು' ಎಂದು ಅವರು ಟೀಕಿಸಿದ್ದರಲ್ಲದೆ ಪ್ರತಿಭಟಿಸುತ್ತಿರುವವರಲ್ಲಿ ಯಾರೂ ರೈತರಲ್ಲ, ಇವರೆಲ್ಲಾ ಕೆಟ್ಟ ಶಕ್ತಿಗಳು ಅವರನ್ನು ಜನರೂ ವಿರೋಧಿಸುತ್ತಿದ್ದಾರೆ, ದಿಲ್ಲಿಯಲ್ಲಿ ನೋಡಿದಾಗ ಪ್ರತಿಭಟನಾ ಸ್ಥಳದಲ್ಲಿನ ಟೆಂಟುಗಳು ಖಾಲಿಯಾಗಿವೆ, ಈ ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳಲಿದೆ,'' ಎಂದು ಅವರು ಹೇಳಿದ್ದರು.

ಅವರ ಈ ಹೇಳಿಕೆಗಳೇ ಇಂದಿನ ಪ್ರತಿಭಟನೆಗೆ ಕಾರಣವಾಗಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News