ರೈತರ ನೆಮ್ಮದಿಗೆ ಕೇಂದ್ರದ ಕೃಷಿ ವಿರೋಧಿ ಕಾಯ್ದೆಗಳಿಗೆ ಕಡಿವಾಣ ಅಗತ್ಯ: ರೈತ ಮುಖಂಡ ಹರ್ನೇಕ್ ಸಿಂಗ್

Update: 2021-11-07 14:23 GMT

ಬೆಂಗಳೂರು, ನ. 7: `ರೈತರು ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಈಗಿನಿಂದಲೇ ವಿರೋಧಿಸಬೇಕು' ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಹರ್ನೇಕ್ ಸಿಂಗ್ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜನಶಕ್ತಿ ಆಯೋಜಿಸಿದ್ದ ಐತಿಹಾಸಿಕ ರೈತಾಂದೋಲನ ಮಂಥನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಕೇಂದ್ರ ಸರಕಾರ ರೈತರನ್ನು ತುಳಿಯುವ ಕೆಲಸ ಮಾಡುತ್ತಿದೆ. ಇದಕ್ಕೆ ನಾವುಗಳು ಆಸ್ಪದವನ್ನು ನೀಡಬಾರದು. ಈಗಿನಿಂದಲೇ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದರೆ, ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಹಿಂಪಡೆಯುವಂತೆ ಮಾಡಬಹುದು' ಎಂದು ಹೇಳಿದರು.

`ನಮ್ಮ ಹಿರಿಯ ರೈತ ಮುಖಂಡರುಗಳು ಮುಂದೊಂದು ದಿನ ರೈತರು ಹಲವು ಸಂಕಷ್ಟಗಳಿಗೆ ಈಡಾಗುತ್ತಾರೆ. ಹೀಗಾಗಿ, ಈಗಿನಿಂದಲೇ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ಕೊಟ್ಟಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಿಂದಲೇ ಹೊಸದಿಲ್ಲಿಯ ಗಡಿಭಾಗದಲ್ಲಿ ಇಂದು ಸಾವಿರಾರು ಸಂಖ್ಯೆಯ ರೈತರು ಹೋರಾಟ ನಡೆಸಲು ಸಾಧ್ಯವಾಗಿದೆ' ಎಂದು ಅವರು ತಿಳಿಸಿದರು.
`ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಾರಣಕ್ಕೆ ದಿನವನ್ನು ದೂಡುತ್ತಿದ್ದಾರೆ. ಆದರೆ, ಅವರಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಸರಕಾರಗಳು ರೈತರ ಸಾಲವನ್ನು ಮನ್ನಾ ಮಾಡದೇ, ರೈತರನ್ನು ಇನ್ನಷ್ಟು ಬಡತನಕ್ಕೆ ನೂಕಲು ಪ್ರಯತ್ನ ಮಾಡುತ್ತಿವೆ' ಎಂದು ಆರೋಪಿಸಿದರು. 

ವಿಶ್ವದ ಎಲ್ಲ ಧರ್ಮಗಳು ಎಲ್ಲರೂ ಒಟ್ಟಾಗಿ ಶಾಂತಿಯಿಂದ ಬದುಕಬೇಕೆಂಬ ಸಂದೇಶವನ್ನು ಸಾರುತ್ತವೆ. ಆದರೆ, ಫ್ಯಾಸಿಸ್ಟ್ ಮನೋಭಾವವುಳ್ಳ ಜನರು ದಲಿತರು, ರೈತರು, ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿಗಳನ್ನು ನಾವುಗಳು ವಿರೋಧಿಸಬೇಕಾಗಿದೆ ಎಂದು ಹೇಳಿದರು. 

ಈ ಹಿಂದೆ ಕೃಷಿ ಬೆಳೆ ಬಂದರೆ ರೈತರು ಖುಷಿಪಡುತ್ತಿದ್ದರು. ಆದರೆ, ಈಗ ಆ ಪರಿಸ್ಥಿತಿ ಇಲ್ಲವಾಗಿದ್ದು, ಬರೀ ಸಾಲ ತೀರಿಸಲು ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಅದಾನಿ, ಅಂಬಾನಿ ಅಂತಹ ಉದ್ಯಮಿದಾರರಿಗೆ ಲಾಭ ಮಾಡಿಕೊಡಲು ನಾವುಗಳು ದುಡಿಯಬೇಕಾಗಿದೆ ಎಂದು ಕಿಡಿಕಾರಿದರು.

ಪಂಜಾಬ್‍ನಲ್ಲಿ ಒಂದು ಗ್ರಾಮಕ್ಕೆ ಒಬ್ಬ ರಾಜಕೀಯ ನಾಯಕ ಬರಬೇಕೆಂದರೂ ಅಲ್ಲಿಯ ರೈತ ಮುಖಂಡನ ಅನುಮತಿಯನ್ನು ಪಡೆಯಬೇಕು. ಈ ರೀತಿಯ ಬದಲಾವಣೆಗೆ ರೈತರ ಹೋರಾಟವೇ ಪ್ರಮುಖ ಕಾರಣವಾಗಿದೆ. ನಾವುಗಳು ಕನಿಷ್ಠ ಬೆಂಬಲ ಬೆಲೆಗಾಗಿ ಕಾಯುವಂತಾಗಬಾರದು ನಮ್ಮ ಬೆಳೆಗೆ ನಾವೇ ದರವನ್ನು ನಿಗದಿಪಡಿಸವಂತಾಗಬೇಕೆಂದು ಕರೆ ನೀಡಿದರು.                           
ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡೆ ಕವಿತಾ ಕುರುಗಂಟಿ ಮಾತನಾಡಿ, ಎಪಿಎಂಸಿ ಕಾಯ್ದೆಗೆ 2020ರ ಆಗಸ್ಟ್‍ನಲ್ಲಿ ತಿದ್ದುಪಡಿ ಮಾಡಿ, ಮಾರುಕಟ್ಟೆ ಪ್ರಾಂಗಣದ ಹೊರಗೆ ಮುಕ್ತ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಅವುಗಳ ನಿರ್ವಹಣಾ ವೆಚ್ಚಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

100ಕ್ಕೆ 1.60 ಇದ್ದ ಸೆಸ್ ಅನ್ನು ಈಗ 60 ಪೈಸೆಗೆ ಇಳಿಸಿರುವುದು ಎಪಿಎಂಸಿಗಳ ಆದಾಯಕ್ಕೆ ತೊಂದರೆಯಾಗಿದೆ. ಅದನ್ನೆ ನಂಬಿಕೊಂಡಿದ್ದ ರೈತರ, ಎಪಿಎಂಸಿ ಹಮಾಲಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.       

ಹೊಸದಿಲ್ಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಭಾಗವಹಿಸಬೇಕು. ಇದರಿಂದ, ಚಳವಳಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡೆ ಕವಿತಾ ಕುರುಗಂಟಿ, ಕರ್ನಾಟಕ ಜನಶಕ್ತಿ ಮುಖಂಡ ಕುಮಾರ್ ಸಮತಳ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ, ಡಾ.ಬಿ.ಸಿ.ಬಸವರಾಜು, ವಿ.ಗಾಯತ್ರಿ, ಟಿ.ಯಶವಂತ್ ಉಪಸ್ಥಿತರಿದ್ದರು. 

`ಇಂದಿನ ಸಂದರ್ಭದಲ್ಲಿ ಮೂರ್ಖರು ಮಾತ್ರ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ, ಬುದ್ಧಿಯುಳ್ಳವರು ಸುಮ್ಮನಿರಲಾರರು. ಕೃಷಿ ಕಾಯ್ದೆಗಳನ್ನು ವಿರೋಧಿಸದಿರುವವರು ಮೂರ್ಖರ ಪಟ್ಟಿಗೆ ಬರುತ್ತಾರೆ'

-ಹರ್ನೇಕ್ ಸಿಂಗ್, ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News