×
Ad

ನ.17ರಿಂದ 'ಬೆಂಗಳೂರು ತಂತ್ರಜ್ಞಾನ ಶೃಂಗಮೇಳ’; 30ಕ್ಕೂ ಹೆಚ್ಚು ದೇಶಗಳು ಭಾಗಿ; ಸಚಿವ ಡಾ. ಅಶ್ವತ್ಥ ನಾರಾಯಣ

Update: 2021-11-09 18:53 IST

ಬೆಂಗಳೂರು, ನ. 9: `ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ನ.17ರಿಂದ 19ರವರೆಗೆ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ ಬೆಂಗಳೂರು ತಂತ್ರಜ್ಞಾನ ಶೃಂಗಮೇಳವನ್ನು (ಬಿಟಿಎಸ್-2021), ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಖಾಸಗಿ ಹೊಟೇಲ್‌ನಲ್ಲಿ (ದ ತಾಜ್ ವೆಸ್ಟ್ ಎಂಡ್) ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್‌ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

`ಸುಧಾರಣೆ-ಪರಿವರ್ತನೆ-ಸಾಧನೆ’ಯ ಪರಿಕಲ್ಪನೆಯಲ್ಲಿ ನಡೆಯುತ್ತಾ ಬಂದಿರುವ ಬಿಟಿಎಸ್‌ನ 24ನೆ ಆವೃತ್ತಿಯ ಶೃಂಗದಲ್ಲಿ 75ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ. 300ಕ್ಕೂ ಹೆಚ್ಚು ಮುಂಚೂಣಿ ಕಂಪೆನಿಗಳು ಈ ಶೃಂಗಮೇಳದಲ್ಲಿ ಭಾಗವಹಿಸಲಿದ್ದು, 5 ಸಾವಿರಕ್ಕೂ ಅಧಿಕ ನವೋದ್ಯಮಗಳು ಪಾಲ್ಗೊಳ್ಳಲಿವೆ, 20 ಸಾವಿರಕ್ಕೂ ಹೆಚ್ಚು ವಾಣಿಜ್ಯ ಪ್ರತಿನಿಧಿಗಳು ಸಕ್ರಿಯರಾಗಿ ಭಾಗವಹಿಸಲಿದ್ದು, ಒಟ್ಟಿನಲ್ಲಿ 5 ಲಕ್ಷ ತಾಂತ್ರಿಕೋದ್ಯಮ ಆಸಕ್ತರನ್ನು ತಲುಪಲಿದೆ ಎಂದು ಅವರು ವಿವರಿಸಿದರು.

ಐಟಿ, ಬಿಟಿ, ಸ್ಟಾರ್ಟಪ್ ಮತ್ತು ಜಿಐಎ (ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್) ವಿಭಾಗಗಳ ಅಡಿಯಲ್ಲಿ ಬಿಟಿಎಸ್-2021 ಕಾರ್ಯಕ್ರಮಗಳು ನಡೆಯಲಿದೆ. ಈ ವಿಭಾಗಗಳಡಿಯಲ್ಲಿ ಕ್ರಮವಾಗಿ ಡಿಜಿಟಲ್ ತಂತ್ರಜ್ಞಾನ, ಹೈಬ್ರಿಡ್ ಮಲ್ಟಿಕ್ಲೌಡ್ ಜಗತ್ತು, ಮಹಿಳಾ ಉದ್ಯಮಿಗಳು, ಸೆಲ್ ಥೆರಪಿ ಮತ್ತು ಜೀನ್ ಎಡಿಟಿಂಗ್ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಿಗೆ ಸಂಬAಧಿಸಿದAತೆ ಚರ್ಚೆ-ಸಂವಾದಗಳು ನಡೆಯಲಿವೆ ಎಂದರು.

ಭಾರತ-ಅಮೆರಿಕ ತಂತ್ರಜ್ಞಾನ ಸಭೆ: ಬೆಂಗಳೂರು ತಂತ್ರಜ್ಞಾನ ಶೃಂಗಮೇಳದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾರತ-ಅಮೆರಿಕ ತಂತ್ರಜ್ಞಾನ ಸಮಾಲೋಚನೆಯು ಬಹುಮುಖ್ಯ. ಇದರಲ್ಲಿ ಮುಖ್ಯವಾಗಿ ಆ ದೇಶದ ಪೂರ್ವ ಕರಾವಳಿಯಲ್ಲಿ ಜೀವ ವಿಜ್ಞಾನ, ಪಶ್ಚಿಮ ತೀರದಲ್ಲಿ ಸ್ಟಾರ್ಟಪ್ ಮತ್ತು ಮಧ್ಯಭಾಗದಲ್ಲಿ ಐಟಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಸಾಧಾರಣ ಬೆಳವಣಿಗೆಗಳನ್ನು ಉಪನ್ಯಾಸಕರು ತಿಳಿಸಲಿದ್ದಾರೆ. ಇದರ ಜೊತೆಗೆ ಇಸ್ರೇಲ್, ಜಪಾನ್, ಸ್ವೀಡನ್, ಜರ್ಮನಿ, ಕೆನಡಾ, ನೆದರ್ಲೆಂಡ್, ತೈವಾನ್ ಮುಂತಾದ ದೇಶಗಳೊಂದಿಗೆ ಜಿಐಎ ಅಂಗವಾಗಿ ಒಡಂಬಡಿಕೆಗಳಿಗೆ ಇದು ವೇದಿಕೆಯಾಗಲಿದೆ ಎಂದು ಸಚಿವ ಡಾ. ಅಶ್ವತ್ಥನಾರಾಯಣ ಭರವಸೆ ವ್ಯಕ್ತಪಡಿಸಿದರು.

ಉಳಿದ ರಾಜ್ಯಗಳೊಂದಿಗೆ ಸಹಯೋಗಕ್ಕೂ ಒತ್ತು: ಬಿಟಿಎಸ್-2021 ಬರೀ ವಿದೇಶಗಳಷ್ಟೆ ಅಲ್ಲದೆ, ನಮ್ಮದೆ ದೇಶದ ಉಳಿದ ರಾಜ್ಯಗಳೊಂದಿಗೂ ಸಹಯೋಗವನ್ನು ಹೊಂದುವ ಆಶಯ ಇಟ್ಟುಕೊಂಡಿದೆ. ಈ ಉದ್ದೇಶದಿಂದ `ಇಂಡಿಯಾ ಇನ್ನೋವೇಶನ್ ಅಲೈಯನ್ಸ್’ ಎನ್ನುವ ಹೊಸ ಉಪಕ್ರಮವನ್ನು ಆರಂಭಿಸುತ್ತಿದ್ದು, ಇದರ ಭಾಗವಾಗಿ ಪುಣೆ, ಹೈದರಾಬಾದ್, ದೆಹಲಿ, ಮುಂಬೈ, ಕಾನ್ಪುರ, ಭುವನೇಶ್ವರ ಮತ್ತು ಪಣಜಿಯಲ್ಲಿರುವ ಅನುಶೋಧನಾ ಕೇಂದ್ರಗಳು ಪಾಲ್ಗೊಳ್ಳುತ್ತಿವೆ ಎಂದು ಅವರು ಹೇಳಿದರು. ಅಲ್ಲದೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಮುಂಚೂಣಿಯನ್ನು ಮುಂದುವರಿಸಿಕೊಂಡು ಹೋಗುವ ಗುರಿಯೊಂದಿಗೆ `ಬೆಂಗಳೂರು ನೆಕ್ಸ್ಟ್’ ನಾಯಕತ್ವ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜೊತೆಗೆ, ಯೂನಿಕಾರ್ನ್ ಸ್ಥಾನಮಾನ ಹೊಂದಿರುವ 22 ಕಂಪೆನಿಗಳನ್ನು ಪುರಸ್ಕರಿಸಲಾಗುವುದು ಎಂದರು.

ಬಿಟಿಎಸ್-2021 ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನ್ ವೈಷ್ಣವ್, ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಪಾಲ್ಗೊಳ್ಳಲಿದ್ದಾರೆ. ಶೃಂಗದಲ್ಲಿ ರಾಷ್ಟ್ರ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜ್ ಮ್ತು ವಿಜ್ಞಾನ ಗ್ಯಾಲರಿ ಕೂಡ ಇರಲಿವೆ.

ಸರಕಾರದ ಐಟಿ ವಿಷನ್ ಗ್ರೂಪಿನ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಐಟಿಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಉದ್ಯಮಿಗಳಾದ ಜಿತೇಂದ್ರ ಛಡ್ಡಾ, ಗಣೇಶ್ ಕೃಷ್ಣನ್, ಬೀರೇನ್ ಘೋಷ್, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

`ಬೆಂಗಳೂರು ತಂತ್ರಜ್ಞಾನ ಶೃಂಗವು ಕರ್ನಾಟಕದ ಶಕ್ತಿ ಮತ್ತು ಸ್ವಾಭಿಮಾನದ ಪ್ರದರ್ಶನವಾಗಿರಲಿದೆ. ಇದು ರಾಜ್ಯಕ್ಕೆ ಮಾತ್ರ ಸೀಮಿತವಲ್ಲ; ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಪೂರಕವಾಗಿ ‘ಆತ್ಮನಿರ್ಭರ ಭಾರತ’ ನಿರ್ಮಾಣದತ್ತ ಒಂದು ದೊಡ್ಡ ಹೆಜ್ಜೆ'
-ಡಾ.ಸಿ.ಎನ್.ಅಶ್ವತ್ಥನಾರಾಯಣ ಐಟಿ-ಬಿಟಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News