×
Ad

ರಫೇಲ್ ಹಗರಣದ ಒಳಸಂಚನ್ನು ಮುಚ್ಚಿ ಹಾಕಲು ಮೋದಿ ಸರಕಾರ ಪ್ರಯತ್ನ: ಎಐಸಿಸಿ ವಕ್ತಾರ ಪವನ್ ಖೇರಾ

Update: 2021-11-13 18:27 IST
 ಎಐಸಿಸಿ ವಕ್ತಾರ ಪವನ್ ಖೇರಾ (photo: twitter)

ಬೆಂಗಳೂರು, ನ.13: ರಫೇಲ್ ಹಗರದಲ್ಲಿ ನಡೆದಿರುವ ಭ್ರಷ್ಟಾಚಾರ, ಲಂಚ ಹಾಗೂ ಒಳಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪದೇ ಪದೇ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರ ಮೇಲೆ ದಾಳಿ ಮಾಡುವ ಈ.ಡಿ, ಸಿಬಿಐ ಇಲಾಖೆಗಳು ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಯಾಕೆ? ಈ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಿಲ್ಲವೇ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಕೇಂದ್ರ ಸರಕಾರ ರಫೇಲ್ ಒಪ್ಪಂದಕ್ಕೆ ಮುಂದಾಗಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕಿದೆ ಎಂದು ಕಾಂಗ್ರೆಸ್ ಮತ್ತೊಮ್ಮೆ ಆಗ್ರಹಿಸುತ್ತದೆ ಎಂದು ಪವನ್ ಖೇರಾ ಹೇಳಿದರು.

ಮಧ್ಯವರ್ತಿ ಸುಶೇನ್ ಗುಪ್ತಾ ಯುಪಿಎ ಅವಧಿಯಲ್ಲಿಯೂ ಇದ್ದರೂ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸುಶೇನ್ ಗುಪ್ತಾ ಅವರನ್ನು ಡಸ್ಸಾಲ್ಟ್ ಸಂಸ್ಥೆ 2000ನೇ ಇಸವಿಯಲ್ಲಿ ನೇಮಕ ಮಾಡಿಕೊಂಡಿತ್ತು. ಆಗ ಯಾರ ಸರಕಾರವಿತ್ತು? ಅಟಲ್ ಬಿಹಾರ್ ವಾಜಪೇಯಿ ಸರಕಾರವಿತ್ತು ಎಂದರು.

2000ದಿಂದ 2005ರವರೆಗೆ ಸುಶೇನ್ ಗುಪ್ತಾ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂದಾಯ ಮಾಡಲಾಗಿತ್ತು. ಆದರೆ ನಾವು ಅಟಲ್ ಬಿಹಾರಿ ವಾಜಪೇಯಿ ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪ ಮಾಡುವುದಿಲ್ಲ. ಕಾರಣ ಆ ಅವಧಿಯಲ್ಲಿ ಸರಕಾರ ಡಸ್ಸಾಲ್ಟ್ ಜತೆ ಯಾವುದೇ ಒಪ್ಪಂದವನ್ನೇ ಮಾಡಿಕೊಂಡಿಲ್ಲ. ಜತೆಗೆ ಅಟಲ್ ಅವರ ಸರಕಾರ ಹಾಗೂ ಸುಶೇನ್ ಗುಪ್ತಾ ನಡುವೆ ಯಾವುದೇ ಹಣಕಾಸಿನ ವ್ಯವಹಾರವೂ ನಡೆದಿಲ್ಲ. ಅದೇ ರೀತಿ ಯುಪಿಎ ಅವಧಿಯಲ್ಲೂ ಯಾವುದೇ ಒಪ್ಪಂದಗಳು ನಡೆದಿಲ್ಲ, ಹಣಕಾಸಿನ ವ್ಯವಹಾರವೂ ನಡೆದಿಲ್ಲ ಎಂದು ಅವರು ಹೇಳಿದರು.

ಆದರೆ, ಮೋದಿ ಅವರ ಸರಕಾರದಲ್ಲಿ ಒಪ್ಪಂದ ಆಗಿದ್ದು, ಪ್ರತಿ ಹಂತದಲ್ಲೂ ಮೋದಿ ಅವರು ಹಸ್ತಕ್ಷೇಪ ಮಾಡಿ ಡಸ್ಸಾಲ್ಟ್‍ಗೆ ನೆರವು ನೀಡಿದ್ದಾರೆ. ಸುಶೇನ್ ಗುಪ್ತಾ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು 2015ರ ದಿನಾಂಕವನ್ನು ಹೊಂದಿದೆ. ಆಗ ಮೋದಿ ಅವರ ಸರಕಾರ ಅಧಿಕಾರದಲ್ಲಿತ್ತು ಎಂದು ಅವರು ಉತ್ತರಿಸಿದರು.

ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದ ನಡೆದಿರಲಿಲ್ಲ. ನಾವು ಆಗ ಟೆಂಡರ್ ಕರೆದಿದ್ದೆವು, ಡಸ್ಸಾಲ್ಟ್ ಎಲ್1 ಆಗಿ ಆಯ್ಕೆಯಾಗಿತ್ತು. ನಾವು ಯುದ್ಧವಿಮಾನ ಖರೀದಿ ದರವನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೆವು. ಯುದ್ಧವಿಮಾನದ ತಂತ್ರಾಂಶ ಹಸ್ತಾಂತರಕ್ಕೆ ಒಪ್ಪಿಸಿದ್ದೆವು. ಭಾರತೀಯ ಸಹಭಾಗಿಯಾಗಿ ಎಚ್‍ಎಎಲ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ಎಲ್ಲ ಅಂಶಗಳಿಂದಾಗಿ ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ನಾವು ಚುನಾವಣೆಯಲ್ಲಿ ಸೋತೆವು ಎಂದು ಅವರು ಹೇಳಿದರು.

ಇನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಎಂಬ ಕಂಪೆನಿ ವಿರುದ್ಧ ಒಂದು ದೂರು ಬಂದ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಆ ಒಪ್ಪಂದ ರದ್ದುಗೊಳಿಸಿದ್ದು ಮಾತ್ರವಲ್ಲ, ಜತೆಗೆ ಆ ದೂರಿನ ಮೇಲೆ ತನಿಖೆಗೂ ಆಗ್ರಹಿಸಿದರು. ಒಂದು ಕಂಪನಿ ಮಧ್ಯವರ್ತಿಗೆ ಹಣ ಪಾವತಿಸುತ್ತಿದೆ ಎಂದರೆ, ಮಧ್ಯವರ್ತಿಗೆ ಕೇಂದ್ರ ಸರಕಾರ ಪ್ರೋತ್ಸಾಹ ನೀಡಿದೆ ಎಂದರೆ ಆ ಮಧ್ಯವರ್ತಿಗೆ ಸರಕಾರದಲ್ಲಿರುವವರ ಜತೆ ನಿಕಟ ಸಂಪರ್ಕವಿದೆ ಎಂದರ್ಥ. ಈ ರೀತಿ ಸಂಪರ್ಕ ಇಲ್ಲದಿದ್ದರೆ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಇಲಾಖೆಯ ಗೌಪ್ಯ ದಾಖಲೆಗಳು ಮಧ್ಯವರ್ತಿಯ ಮನೆಯಲ್ಲಿ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದಾದರೆ, ನಾವು ತನಿಖೆಗೆ ಆಗ್ರಹಿಸುತ್ತಿರುವಾಗ ಸರಕಾರ ಪಲಾಯನ ಮಾಡುತ್ತಿರುವುದೇಕೆ? ನಾವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಓಡಿ ಹೋಗುತ್ತಿರುವುದೇಕೆ? ನಾವು ತಪ್ಪು ಮಾಡಿದ್ದರೆ ನಾವು ಹೆದರಬೇಕಿತ್ತಲ್ಲವೇ? ನಾವು ಯಾವುದೇ ತನಿಖೆಗೆ ಹೆದರುತ್ತಿಲ್ಲ. ಹಾಗಾದರೆ ಇಲ್ಲಿ ತಪ್ಪಿತಸ್ಥರು ಯಾರು? ಎಂದು ಪವನ್ ಖೇರಾ ಪ್ರಶ್ನಿಸಿದರು.

ಯಾವುದೇ ಜನಸಾಮಾನ್ಯನ ಕೈಗೆ ಸಿಗಬಾರದಂತಹ ಸೂಕ್ಷ್ಮ ದಾಖಲೆಗಳು ಮಧ್ಯವರ್ತಿಗೆ ಸಿಕ್ಕಿದ್ದಾದರೂ ಹೇಗೆ? ಭಾರತದ ಪರವಾಗಿ ಮಾತುಕತೆಗೆ ನೇಮಕವಾಗಿದ್ದ ತಂಡವು ಪ್ರಧಾನಿ ಈ ಒಪ್ಪಂದದ ಸಂಧಾನದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ ಎಂದು ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ. ಇದರಿಂದ ಪ್ರಧಾನಮಂತ್ರಿ ಈ ಒಪ್ಪಂದದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂಬುದು ಸಾಬೀತಾಗುತ್ತದೆ. ಡಸ್ಸಾಲ್ಟ್ ಸಂಸ್ಥೆ ಯುದ್ಧ ವಿಮಾನ ದರವನ್ನು ಹೆಚ್ಚಿಸಲು ಸುಶೇನ್ ಗುಪ್ತಾ ನೆರವಾಗಿದ್ದ ಎಂಬುದು ದಾಖಲೆಗಳ ಮೂಲಕ ಸ್ಪಷ್ಟವಾಗಿದೆ. ಪ್ರಧಾನಿ ಇದಕ್ಕೆ ನೆರವಾಗಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಅವರು ದೂರಿದರು.

ಸಲ್ಮಾನ್ ಖುರ್ಶಿದ್ ಹೇಳಿಕೆ ವಿಚಾರವಾಗಿ ಕೇಳಿದ ವಿಚಾರವಾಗಿ ಉತ್ತರಿಸಿದ ಅವರು, ‘ಸಲ್ಮಾನ್ ಖುರ್ಶಿದ್ ನಮ್ಮೆಲ್ಲರ ವಾದವನ್ನೇ ಪುನರುಚ್ಛರಿಸಿದ್ದಾರೆ. ಈ ಸರಕಾರದ ಆಡಳಿತದಲ್ಲಿ ಕೇವಲ ದೇಶದ ಸಂವಿಧಾನ ಮಾತ್ರ ಅಪಾಯಕ್ಕೆ ಸಿಲುಕಿಲ್ಲ. ಭವ್ಯ ಹಿಂದೂ ಸಂಸ್ಕøತಿ, ಭಾರತೀಯ ಪರಂಪರೆ ಕೂಡ ಅಪಾಯಕ್ಕೆ ಸಿಲುಕಿದೆ. ನಮ್ಮ ನಾಗರಿಕತೆಯ ಮೌಲ್ಯಗಳನ್ನು ನಾವು ರಕ್ಷಿಸಿಕೊಳ್ಳಬೇಕಿದೆ’ ಎಂದರು.

ಇನ್ನು ಬಾಟ್ಲ ಹೌಸ್ ಎನ್‍ಕೌಂಟರ್ ವಿಚಾರವಾಗಿ ಖುರ್ಶಿದ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆ ಹೇಳಿಕೆಯನ್ನು ನಾನು ನೋಡಿಲ್ಲ. ಆಗ ನಾವು ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದೆವು. ಬಾಟ್ಲಾ ಹೌಸ್‍ನಲ್ಲಿ ಏನೆಲ್ಲಾ ನಡೆಯಿತು ಎಂದು ನಾವು ನೋಡಿದ್ದೇವೆ. ಆ ಸಮಯದಲ್ಲಿ ನಾವು ನಮ್ಮ ಅತ್ಯಂತ ಧೈರ್ಯಶಾಲಿ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡೆವು. ನಾವು ಆ ಪೊಲೀಸ್ ಅಧಿಕಾರಿಗಳ ಜತೆ ನಿಂತಿದ್ದೇವೆ’ ಎಂದರು.

ಗಣರಾಜ್ಯೋತ್ಸವದ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರಿಗೆ ಪಂಜಾಬ್ ಸರಕಾರ ಪರಿಹಾರ ಘೋಷಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವನ್ ಖೇರ, ‘ಈ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಯಾರು ಭಾಗಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ಆ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲಾಗಿದೆ. ಹೀಗಾಗಿ ಈ ಸರಕಾರದಿಂದ ದಬ್ಬಾಳಿಕೆಗೆ ಒಳಗಾಗಿರುವ ಎಲ್ಲ ಮುಗ್ಧ ರೈತರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಕೇವಲ ರೈತರು ಮಾತ್ರವಲ್ಲ, ರೋಹಿತ್ ವೇಮುಲಾರಂತಹ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವರ್ಗದವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ’ ಎಂದು ಉತ್ತರಿಸಿದರು.

ದಿಲ್ಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ 2 ದಿನಗಳ ಲಾಕ್ ಡೌನ್ ಸಲಹೆ ನೀಡಿ ದಿಲ್ಲಿ ಹಾಗೂ ಕೇಂದ್ರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದಿಲ್ಲಿ ಸರಕಾರ ಹಾಗೂ ಕೇಂದ್ರ ಸರಕಾರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಅರವಿಂದ ಕೇಜ್ರಿವಾಲ್ ಪಂಜಾಬ್‍ನಲ್ಲಿ ಮತ ಕೇಳುವಾಗ ಪಟಾಕಿ ಸುಡುವ ಬಗ್ಗೆ ಮಾತನಾಡುತ್ತಾರೆ. ದಿಲ್ಲಿಯಲ್ಲಿ ಮತ ಕೇಳುವಾಗ ಪಂಜಾಬ್ ರೈತರು ತಮ್ಮ ಕೃಷಿತ್ಯಾಜ್ಯಗಳಿಗೆ ಹಚ್ಚುವ ಬೆಂಕಿ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿರುವುದು ಸ್ವಾಗತಾರ್ಹ ಎಂದರು.

ಅವರಿಗೆ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದರೆ ಅವರು ಬಗೆಹರಿಸಬಹುದು. ನಾವು ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ತೆರವುಗೊಳಿಸಿ, ಸಿಎನ್‍ಜಿ ಜಾರಿಗೊಳಿಸಿದ್ದೆವು. ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ತೆರವುಗೊಳಿಸಿದ್ದೆವು. ಆಗ ನಮ್ಮ ಕ್ರಮಕ್ಕೆ ಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಕಳೆದ ಆರೇಳು ವರ್ಷಗಳಲ್ಲಿ ಸರಕಾರ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ’ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News