ಪ್ರತಿಭಟನೆ, ವಿಫಲ ಮಾತುಕತೆಗಳು, ಹಿಂಸಾಚಾರ, ಸಾವುಗಳ ನಡುವೆ ಕೃಷಿ ಕಾಯ್ದೆಗಳು ಮತ್ತು ರೈತರ ಆಂದೋಲನ ಸಾಗಿಬಂದ ದಾರಿ

Update: 2021-11-19 15:28 GMT
ಸಾಂದರ್ಭಿಕ ಚಿತ್ರ:PTI

2020,ಜೂ.5: ಮೋದಿ ಸರಕಾರದಿಂದ ಬೆಲೆ ಭರವಸೆ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ,2020;ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಸೌಲಭ್ಯ) ಮಸೂದೆ,2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ,2020 ಹೀಗೆ ಮೂರು ನೂತನ ಕೃಷಿ ಮಸೂದೆಗಳ ಪ್ರಕಟಣೆ

14 ಜೂನ್ ನಂತರ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬಿನ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು

ಸೆ.14: ಸಂಸತ್ತಿನಲ್ಲಿ ಸುಗ್ರೀವಾಜ್ಞೆಯನ್ನು ತರಲಾಯಿತು

ಸೆ.17: ಮಸೂದೆಗಳಿಗೆ ಲೋಕಸಭೆಯ ಅಂಗೀಕಾರ,ಅಕಾಲಿ ದಳದ ಹರಸಿಮ್ರತ್ ಕೌರ್ ಅವರಿಂದ ಮೋದಿ ಸಂಪುಟಕ್ಕೆ ರಾಜೀನಾಮೆ

ಸೆ.20: ರಾಜ್ಯಸಭೆಯಲ್ಲಿ ಬೃಹತ್ ಕೋಲಾಹಲದ ನಡುವೆಯೇ ಮಸೂದೆಗಳಿಗೆ ಧ್ವನಿಮತದಿಂದ ಅಂಗೀಕಾರ

ಸೆ.24: ಪಂಜಾಬ್ ರೈತರಿಂದ ಮೂರು ದಿನಗಳ ‘ರೈಲು ತಡೆ’ ಪ್ರತಿಭಟನೆ ಆರಂಭ

ಸೆ.25: ಮೂರು ಪ್ರಸಾವಿತ ಕಾನೂನುಗಳ ವಿರುದ್ಧ ದೇಶಾದ್ಯಂತ ಬೀದಿ ಪ್ರತಿಭಟನೆಗಳಿಗೆ 
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಕರೆ

ಸೆ.26: ಶಿರೋಮಣಿ ಅಕಾಲಿ ದಳದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬೆಂಬಲ ವಾಪಸ್

ಸೆ.27: ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಂಕಿತ

ನ.3:ಪಂಜಾಬ್ ಮತ್ತು ಹರ್ಯಾಣಗಳಲ್ಲಿಯ ರೈತ ಒಕ್ಕೂಟಗಳಿಂದ ದೇಶಾದ್ಯಂತ ರಸ್ತೆ ತಡೆಗೆ ಕರೆ

ನ.25:‘ದಿಲ್ಲಿ ಚಲೋ ’ಆಂದೋಲನಕ್ಕೆ ಪಂಜಾಬ್ ಮತ್ತು ಹರ್ಯಾಣಗಳಲ್ಲಿಯ ರೈತ ಒಕ್ಕೂಟಗಳಿಂದ ಕರೆ,‌ ಕೋವಿಡ್ ಕಾರಣವನ್ನು ಮುಂದಿಟ್ಟು ನಗರ ಪ್ರವೇಶಕ್ಕೆ ದಿಲ್ಲಿ ಪೊಲೀಸರಿಂದ ಅನುಮತಿ ನಿರಾಕರಣೆ

ನ.26: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಾಗಿ ಪಂಜಾಬ್ ಮತ್ತು ಹರ್ಯಾಣ ರೈತರ ಬೃಹತ್ ಗುಂಪುಗಳಿಂದ ದಿಲ್ಲಿಯತ್ತ ಜಾಥಾ. ಅವರನ್ನು ತಡೆಯಲು ವಿವಿಧೆಡೆಗಳಲ್ಲಿ ಪೊಲೀಸರಿಂದ ಜಲಫಿರಂಗಿ ಪ್ರಯೋಗ. ಬಳಿಕ ಉತ್ತರ ದಿಲ್ಲಿಯ ನಿರಂಕಾರಿ ಮೈದಾನವನ್ನು ಪ್ರವೇಶಿಸಲು ಅವಕಾಶ ನೀಡಿದ ಪೊಲೀಸರು

ನ.27: ದಿಲ್ಲಿಯ ವಿವಿಧ ಗಡಿಗಳನ್ನು ತಲುಪಿದ ರೈತರಿಂದ ನಗರಕ್ಕೆ ಮುತ್ತಿಗೆ,ವಸತಿ ಶಿಬಿರಗಳ ಸ್ಥಾಪನೆ
 
ನ.28: ಗೃಹಸಚಿವ ಅಮಿತ್ ಶಾ ಅವರಿಂದ ದಿಲ್ಲಿಯ ಗಡಿಗಳನ್ನು ತೆರವುಗೊಳಿಸಬೇಕು ಮತ್ತು ಬುರಾರಿಯಲ್ಲಿನ ನಿಗದಿತ ಪ್ರತಿಭಟನಾ ಸ್ಥಳಕ್ಕೆ ತೆರಳಬೇಕು ಎಂಬ ಷರತ್ತಿನೊಂದಿಗೆ ಮಾತುಕತೆಗಳ ಕೊಡುಗೆ. ತಿರಸ್ಕರಿಸಿದ ರೈತರಿಂದ ತಮಗೆ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಆಗ್ರಹ

ನ.29: ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಭರವಸೆಗಳನ್ನು ನೀಡುತ್ತಿದ್ದವು,‌ ಆದರೆ ಭರವಸೆಗಳನ್ನು ಈಡೇರಿಸಿದ್ದು ತನ್ನ ಸರಕಾರ ಎಂದು ಮನ್ ಕಿ ಬಾತ್ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ
 
ಡಿ.3-8: ಸರಕಾರ ಮತ್ತು ರೈತರ ನಡುವೆ ಹಲವಾರು ಸುತ್ತುಗಳ ವಿಫಲ ಮಾತುಕತೆ. ರೈತರಿಂದ ಭಾರತ ಬಂದ್ ಗೆ ಕರೆ

ಡಿ.9: ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ತಿದ್ದುಪಡಿ ತರುವ ಮೋದಿ ಸರಕಾರದ ಪ್ರಸ್ತಾವಕ್ಕೆ ರೈತ ನಾಯಕರ ತಿರಸ್ಕಾರ. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಣೆ. ನೂತನ ಕೃಷಿಕಾಯ್ದೆಗಳು ಬೃಹತ್ ಕಾರ್ಪೊರೇಟ್ ಪರ ಎಂದು ಆಪಾದಿಸಿ ರೈತ ಒಕ್ಕೂಟಗಳಿಂದ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಸೇವೆಗಳಿಗೆ ಬಹಿಷ್ಕಾರ

ಡಿ.11: ಕೃಷಿ ಕಾಯ್ದೆಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಭಾರತೀಯ ಕಿಸಾನ್ ಯೂನಿಯನ್

ಡಿ.13: ರೈತರ ಪ್ರತಿಭಟನೆಗಳ ಹಿಂದೆ ‘ತುಕ್ಡೆ ತುಕ್ಡೆ ಗ್ಯಾಂಗ್’ಇದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪ. ಸರಕಾರವು ಮಾತುಕತೆಗಳಿಗೆ ಮುಕ್ತವಾಗಿದೆ ಎಂದು ಹೇಳಿಕೆ

ಡಿ.16: ಬಿಕ್ಕಟ್ಟನ್ನು ಬಗೆಹರಿಸಲು ಸರಕಾರ ಮತ್ತು ರೈತ ಒಕ್ಕೂಟಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ತಾನು ರಚಿಸಬಹುದು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದಿಂದ ನೂತನ ಕಾಯ್ದೆಗಳನ್ನು ತಡೆಹಿಡಿಯುವಂತೆ ಕೇಂದ್ರಕ್ಕೆ ಸಲಹೆ

ಡಿ.30-ಜ.4,2021: ರೈತರು ಮತ್ತು ಸರಕಾರದ ನಡುವೆ ಹಲವಾರು ಸುತ್ತುಗಳ ಅಪೂರ್ಣ ಮಾತುಕತೆ

ಜ.2: ಗಣತಂತ್ರ ದಿನದಂದು ದಿಲ್ಲಿಯ ವರ್ತುಲ ರಸ್ತೆಯಲ್ಲಿ ಟ್ರಾಕ್ಟರ್ ರ‍್ಯಾಲಿ ನಡೆಸುವುದಾಗಿ ರೈತರ ಪ್ರಕಟಣೆ

ಜ.4: ತಾನೆಂದೂ ಗುತ್ತಿಗೆ ಕೃಷಿಗೆ ಕೈಹಾಕುವುದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆ

ಜ.11: ರೈತರ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ತರಾಟೆ

ಜ.12: ಮೂರು ಕೃಷಿ ಕಾನೂನಗಳ ಅನುಷ್ಠಾನಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆ,ಎರಡು ತಿಂಗಳುಗಳ ಗಡುವಿನೊಳಗೆ ಕಾಯ್ದೆಗಳಲ್ಲಿ ಯಾವುದೇ ಬದಲಾವಣೆಗಳ ಮೌಲ್ಯಮಾಪನಕ್ಕೆ ನಾಲ್ವರು ಸದಸ್ಯರ ಸಮಿತಿ ರಚನೆ

ಜ.20: ಹೊಸ ಮಾತುಕತೆ ಸುತ್ತಿನಲ್ಲಿ ಸರಕಾರದಿಂದ ಒಂದೂವರೆ ವರ್ಷ ಕೃಷಿಕಾಯ್ದೆಗಳನ್ನು ಅಮಾನತುಗೊಳಿಸುವ ಮತ್ತು ಅವುಗಳ ಬಗ್ಗೆ ಚರ್ಚೆಗೆ ಜಂಟಿ ಸಮಿತಿಯ ರಚನೆಯ ಪ್ರಸ್ತಾವ. ಇದನ್ನು ತಿರಸ್ಕರಿಸಿದ ರೈತರಿಂದ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆ ಮುಂದುವರಿಕೆ

ಜ.24: ತಮ್ಮ ಪ್ರತಿಭಟನೆಗೆ ಎರಡು ತಿಂಗಳು ತುಂಬಿದ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಿಗದಿತ ಮಾರ್ಗಕ್ಕೆ ಸೀಮಿತವಾಗಿ ಟ್ರಾಕ್ಟರ್ ರ‍್ಯಾಲಿ ನಡೆಸಲು ರೈತರಿಗೆ ದಿಲ್ಲಿ ಪೊಲೀಸರ ಅನುಮತಿ
 
ಜ.26: ಹಲವಾರು ಪ್ರತಿಭಟನಾಕಾರರು ನಿಗದಿತವಲ್ಲದ ಮಾರ್ಗದಲ್ಲಿ ಸಾಗಿದಾಗ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೋಲಾಹಲ,ಹಿಂಸಾಚಾರ. ಪೊಲೀಸರಿಂದ ಅಶ್ರುವಾಯು ಪ್ರಯೋಗ ಮತ್ತು ಲಾಠಿ ಪ್ರಹಾರ. ಕೆಂಪುಕೋಟೆಯಲ್ಲಿ ಕೆಲವು ಪ್ರತಿಭಟನಾಕಾರರಿಂದ ಸಿಖ್ ಧ್ವಜ ‘ನಿಶಾನ್ ಸಾಹಿಬ್’ಆರೋಹಣ. ಕೋಲಾಹಲದಲ್ಲಿ ಓರ್ವ ಪ್ರತಿಭಟನಾಕಾರನ ಮೃತ್ಯು. ಹಿಂಸಾಚಾರದಿಂದ ಅಂತರ ಕಾಯ್ದುಕೊಂಡ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ)ದಿಂದ ಸಮಾಜ ವಿರೋಧಿ ಶಕ್ತಿಗಳು ರ‍್ಯಾಲಿಯಲ್ಲಿ ನುಸುಳಿದ್ದವು ಎಂದು ಆರೋಪ

ಜ.27: ಗಣತಂತ್ರ ದಿನದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತನಾಯಕ ರಾಕೇಶ್ ಟಿಕಾಯತ್ ಮತ್ತು ಇತರರ ವಿರುದ್ಧ ದಿಲ್ಲಿ ಪೊಲೀಸರಿಂದ 22 ಎಫ್ಐಆರ್ಗಳು ದಾಖಲು

ಜ.28: ಫೆ.1ರಂದು ಸಂಸತ್ತಿಗೆ ಜಾಥಾದ ತನ್ನ ಕರೆಯನ್ನು ವಾಪಸ್ ಪಡೆದ ಎಸ್ಕೆಎಂ. ಪ್ರತಿಭಟನೆಯನ್ನು ಅಂತ್ಯಗೊಳಿಸಿದ ಎರಡು ರೈತ ಸಂಘಟನೆಗಳಿಂದ ಮುಷ್ಕರದಿಂದ ದೂರವುಳಿಯಲು ನಿರ್ಧಾರ. ನೆರೆಯ ಉತ್ತರ ಪ್ರದೇಶದ ಘಾಝಿಯಾಬಾದ್ ಆಡಳಿತವು ರಾತ್ರಿಯೊಳಗೆ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸುವಂತೆ ಆದೇಶಿಸಿದ ಬಳಿಕ ದಿಲ್ಲಿಯ ಗಾಝಿಪುರ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ. ಆದೇಶಕ್ಕೆ ಮಣಿಯಲು ಟಿಕಾಯತ್ ಮತ್ತು ಅವರ ಬೆಂಬಲಿಗರ ನಿರಾಕರಣೆ

ಫೆ.4: ರೈತರ ಪರವಾಗಿ ಮಾತನಾಡಿದ ಪಾಪ್ ತಾರೆ ರಿಹಾನ್ನಾ, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ನ್ಯಾಯವಾದಿ-ಲೇಖಕಿ ಮೀನಾ ಹ್ಯಾರಿಸ್

ಫೆ.5: ಥನ್‌ಬರ್ಗ್ ಶೇರ್ ಮಾಡಿಕೊಂಡಿದ್ದ ಟೂಲ್ಕಿಟ್ ನ ಸೃಷ್ಟಿಕರ್ತರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಒಳಸಂಚು ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ದಿಲ್ಲಿ ಪೊಲೀಸ್ ನ ಸೈಬರ್ ಅಪರಾಧಗಳ ಘಟಕದಿಂದ ಎಫ್ಐಆರ್ ದಾಖಲು

ಫೆ.9: ದಿಲ್ಲಿ ಪೊಲೀಸ್ ವಿಶೇಷ ಘಟಕದಿಂದ ಗಣತಂತ್ರ ದಿನದ ಹಿಂಸಾಚಾರ ಪ್ರಕರಣದಲ್ಲಿಯ ಆರೋಪಿ ಪಂಜಾಬಿ ನಟ-ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಬಂಧನ

ಫೆ.14: ಥನ್‌ಬರ್ಗ್ ಶೇರ್ ಮಾಡಿಕೊಂಡಿದ್ದ ಟೂಲ್ಕಿಟ್ ಅನ್ನು ಎಡಿಟ್ ಮಾಡಿದ್ದ ಆರೋಪದಲ್ಲಿ ದಿಲ್ಲಿ ಪೊಲೀಸರಿಂದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ
 
ಮಾ.5: ರೈತರು ಮತ್ತು ಪಂಜಾಬಿನ ಹಿತಾಸಕ್ತಿಯಿಂದ ಬೇಷರತ್ತಾಗಿ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಮತ್ತು ಕನಿಷ್ಠ ಬೆಂಬಲ ಬೆಲೆ ಆಧಾರಿತ ಆಹಾರ ಧಾನ್ಯಗಳ ಸರಕಾರಿ ಖರೀದಿಯ ಹಾಲಿ ವ್ಯವಸ್ಥೆಯನ್ನು ಮುಂದುವರಿಸಲು ಪಂಜಾಬ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮಾ.6: ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗಳಿಗೆ ನೂರು ದಿನ

ಎ.15: ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಆಗ್ರಹಿಸಿ ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ ಚೌತಾಲಾ ಅವರಿಂದ ಪ್ರಧಾನಿಗೆ ಪತ್ರ

ಮೇ 27:ರೈತರ ಪ್ರತಿಭಟನೆಗೆ ಆರು ತಿಂಗಳು, ಕರಾಳ ದಿನಾಚರಣೆ

ಜೂ.5: ಕೃಷಿ ಕಾನೂನುಗಳ ಪ್ರಕಟಣೆಯ ಮೊದಲ ವರ್ಷದ ಅಂಗವಾಗಿ ರೈತರಿಂದ ಸಂಪೂರ್ಣ ಕ್ರಾಂತಿಕಾರಿ ದಿವಸ್ ಆಚರಣೆ

ಜುಲೈ: ರೈತರಿಂದ ಸಂಸತ್ ಭವನಕ್ಕೆ ಸಮೀಪ ‘ಕಿಸಾನ್ ಸಂಸದ್’ ಹೆಸರಿನಲ್ಲಿ ಸಮಾನಾಂತರ ‘ಮಳೆಗಾಲದ ಅಧಿವೇಶನ ’ಆರಂಭ

ಆ.7: ಸಂಸತ್ ಭವನದಲ್ಲಿ ಸಭೆ ಸೇರಿದ 14 ಪ್ರತಿಪಕ್ಷಗಳ ನಾಯಕರಿಂದ ದಿಲ್ಲಿಯ ಜಂತರ್ಮಂತರ್ನ ಕಿಸಾನ್ ಸಂಸದ್ ಗೆ ಭೇಟಿ ನೀಡಲು ನಿರ್ಧಾರ

ಆ.28: ಕರ್ನಾಲ್ ನಲ್ಲಿ ಮುಖ್ಯಮಂತ್ರಿ ಎಂ.ಎಲ್ ಖಟ್ಟರ್ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಭೆಯಲ್ಲಿ ರೈತರ ಮೇಲೆ ಹರ್ಯಾಣ ಪೊಲೀಸರಿಂದ ಹಿಂಸಾತ್ಮಕ ದಾಳಿ,ಲಾಠಿ ಪ್ರಹಾರದಿಂದ ಹಲವರಿಗೆ ಗಾಯ. ಭದ್ರತಾ ತಡೆಯನ್ನು ಉಲ್ಲಂಘಿಸುವ ರೈತರ ತಲೆ ಒಡೆಯಿರಿ ಎಂದು ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಪೊಲೀಸರಿಗೆ ಆದೇಶಿಸಿದ್ದ ದೃಶ್ಯ ವೀಡಿಯೊದಲ್ಲಿ ಸೆರೆ

ಸೆ.5: ಮುಝಫ್ಫರ್‌ನಗರದಲ್ಲಿ ರೈತ ನಾಯಕ ಟಿಕಾಯತ್ ಅವರ ತವರೂರಿನಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸಿದ ರೈತರು

ಸೆ.17: ಕೃಷಿಕಾಯ್ದೆಗಳ ಅಂಗೀಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳಿಂದ ಭಾರತ ಬಂದ್

ಅ.3: ಉ.ಪ್ರದೇಶದ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ. ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವು

ಅ.9: ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಹಾಯಕ ಗೃಹಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಬಂಧನ

ಅ.22: ಪ್ರತಿಭಟನಾಕಾರರು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟವಾಗಿ ಬಂದ್ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯ

ಅ.29: ರೈತರ ಪ್ರತಿಭಟನೆ ಮುಂದುವರಿದಿದ್ದರೂ ದಿಲ್ಲಿಯ ವಿವಿಧ ಗಡಿಗಳಲ್ಲಿ ಬ್ಯಾರಿಕೇಡ್ಗಳು ಮತ್ತು ಇತರ ತಡೆಗಳನ್ನು ತೆಗೆಯಲು ಆರಂಭಿಸಿದ ದಿಲ್ಲಿ ಪೊಲೀಸರು

ನ.19: ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News