ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ; ತೀವ್ರ ಶೋಧ, ನಗದು ಜಪ್ತಿ

Update: 2021-11-19 17:08 GMT

ಬೆಂಗಳೂರು, ನ.19: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ(ಬಿಡಿಎ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ. ಬಿಡಿಎನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವುದಾಗಿ ಎಸಿಬಿ ತಿಳಿಸಿದೆ. 

ಎಸಿಬಿ ಆಡಳಿತ ವಿಭಾಗದ ಎಸ್ಪಿಗಳಾದ ಅಬ್ದುಲ್ ಅಹದ್, ಉಮಾ ಪ್ರಶಾಂತ್, ಯತೀಶ್ ಚಂದ್ರ ನೇತೃತ್ವದಲ್ಲಿ ಬಿಡಿಎ ಕಚೇರಿ ಮೇಲೆ ದಾಳಿ ನಡೆದಿದ್ದು, ಕಚೇರಿಯಿಂದ ಹೊರ ಹೋಗುವ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಯಿತು. ಬಿಡಿಎಯಲ್ಲಿನ ಅವ್ಯವಹಾರದ ಕುರಿತಂತೆ ಮಾಹಿತಿ ಸಂಗ್ರಹಣೆ ಮತ್ತು ದಾಖಲಾತಿಗಳ ಪರಿಶೀಲನಾ ಕಾರ್ಯ ಇನ್ನೂ ಮುಂದುವರೆದಿದೆ.

ದಾಳಿ ನಡೆಸಿದ ಬೆನ್ನಲ್ಲೇ ನೌಕರರ ಮೊಬೈಲ್ ಸ್ವಿಚ್ ಆಫ್ ಮಾಡಿಸಲಾಯಿತು. ಬಳಿಕ ಕಚೇರಿಯ ಒಳಗಿದ್ದ ಎಲ್ಲ ಕಡತಗಳನ್ನ ಒಂದು ಕಡೆ ಇಟ್ಟು ಪರಿಶೀಲನೆ ನಡೆಸಲಾಯಿತು.

ಫಲಾನುಭವಿಗಳಿಗೆ ಸೈಟ್ ಹಂಚಿಕೆ, ಕಾರ್ನರ್ ಸೈಟ್ ಹಂಚಿಕೆ, ಸೈಟ್ ದಾಖಲೆ ನೀಡದೆ ಲಂಚಕ್ಕಾಗಿ ಬೇಡಿಕೆ, ನಿವೇಶನ, ಫ್ಲ್ಯಾಟ್ ಹಂಚಿಕೆಯಲ್ಲೂ ಅವ್ಯವಹಾರ ಆರೋಪ, ಬ್ರೋಕರ್‍ಗಳ ಮೂಲಕ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಸೇರಿ ಒಸಿ, ಅನುಮತಿ ಪತ್ರ, ಇ-ಸಿಡಿ, ಸರ್ಟಿಫಿಕೆಟ್‍ಗಾಗಿ ಲಂಚ ನೀಡದಿದ್ದರೆ ಕೆಲಸ ಮಾಡಿಕೊಡದೆ ಅಲೆಸುತ್ತಿದ್ದರು ಎಂದು ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಭ್ರಷ್ಟಾಚಾರ  ನಿಗ್ರಹ ದಳಕ್ಕೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. 

ಭೂಸ್ವಾಧೀನ ವಿಭಾಗದ ಡಿಎಸ್, ಎಸಿಗಳ ಕಚೇರಿ, ಡಿಎಸ್ 1, 2, 3, 4 ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ.  ಎಸಿಬಿಯ ಐವರು ಡಿವೈಎಸ್ಪಿ, 12 ಇನ್ಸ್‍ಪೆಕ್ಟರ್ ಸೇರಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಕಡತ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ. ಬಿಡಿಎ ಡಿಎಸ್ ನವೀನ್ ಜೋಸೆಫ್ ಕಚೇರಿಯಲ್ಲಿ ಹಣ ಜಪ್ತಿ ಮಾಡಲಾಗಿದೆ. ಬಿಡಿಎ ಕಚೇರಿಯಲ್ಲಿ ಶನಿವಾರವೂ ತನಿಖೆ ಮುಂದುವರೆಯುವ ಸಾಧ್ಯತೆ ಇದೆ. ಎಸಿಬಿ ಅಧಿಕಾರಿಗಳು ದಾಖಲೆ ವಶಕ್ಕೆ ಪಡೆದು ಕಚೇರಿ ಲಾಕ್ ಮಾಡಲಿದ್ದಾರೆ. ಕೆಲವು ಕಚೇರಿಗಳಲ್ಲಿ ನಗದು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News