ಮಾಧ್ಯಮಗಳ ಮೇಲಿನ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ: ಮೌಲಾನಾ ಜಲಾಲುದ್ದೀನ್ ಉಮರಿ

Update: 2021-11-26 14:54 GMT

ಬೆಂಗಳೂರು, ನ.26: ದೇಶದ ಇಂದಿನ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವ ರೀತಿಯಿಂದ ಮಾಧ್ಯಮಗಳ ಮೇಲಿನ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಜಮಾಅತೆ ಇಸಾಮಿ ಹಿಂದ್‍ನ ಮಾಜಿ ಅಧ್ಯಕ್ಷ ಮೌಲಾನಾ ಸೈಯ್ಯದ್ ಜಲಾಲುದ್ದೀನ್ ಉಮರಿ ಆತಂಕ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿನ ಆರ್.ಟಿ.ನಗರದಲ್ಲಿರುವ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಕಚೇರಿ ‘ಶಾಂತಿ ಸದನ’ದಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಪರಿಸ್ಥಿತಿ ಮತ್ತು ಜನರು ಎದುರಿಸುತ್ತಿರುವ ತೊಂದರೆಗಳನ್ನು ವ್ಯಕ್ತಪಡಿಸುವ ವಿಶ್ವಾಸಾರ್ಹ ಮತ್ತು ವಾಸ್ತವಿಕ ಮಾಧ್ಯಮದ ತುರ್ತು ಅಗತ್ಯವಿದೆ ಎಂದರು.

ಜಾಗತಿಕ ಮಟ್ಟದಲ್ಲಿ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಯುತವಾದ ಮಾಧ್ಯಮಗಳು ಜನರ ಸಮಸ್ಯೆಗಳ ಬಗ್ಗೆ ಮತ್ತು ದುರ್ಬಲ ವರ್ಗಗಳ ಧ್ವನಿಯಾಗಿ ಕೆಲಸ ಮಾಡಿದರೆ ಸ್ವಾಗತಾರ್ಹ. ಸರಿಯಾದ ಸುದ್ದಿಯನ್ನು ಜನರಿಗೆ ತಲುಪಿಸುವುದು ಮತ್ತು ಸರಿಯಾದ ಮಾಹಿತಿಯನ್ನು ತಿಳಿಸುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಜಲಾಲುದ್ದೀನ್ ಉಮರಿ ತಿಳಿಸಿದರು.

ದೇಶದೆಲ್ಲೆಡೆ ಮುಸ್ಲಿಮರು ಮತ್ತು ಇಸ್ಲಾಮ್ ಧರ್ಮದ ವಿರುದ್ಧ ದ್ವೇಷದ ವಾತಾವರಣವನ್ನು ಹರಡುವ ಯತ್ನ ನಡೆಯುತ್ತಿದ್ದು, ಮಾಧ್ಯಮದ ದೊಡ್ಡ ವರ್ಗವೂ ಈ ಪ್ರಯತ್ನದ ಭಾಗವಾಗಿದೆ. ಮುಸ್ಲಿಮರು ನಾನಾ ವಿಚಾರಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆದರೆ ದುಃಖಕರವೆಂದರೆ, ಈ ಮಾಧ್ಯಮಗಳ ದಾಳಿಗೆ ಪ್ರತಿಕ್ರಿಯಿಸಲು ಸಮರ್ಥ ಮುಸ್ಲಿಮರ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ದೇಶದ ಇತರ ಸಮುದಾಯಗಳೊಂದಿಗೆ ಮುಸ್ಲಿಮ್ ಬಾಂಧವರ ಸೌಹಾರ್ದತೆಯನ್ನು ಹೆಚ್ಚಿಸುವಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಪಾತ್ರವೇನು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಜಲಾಲುದ್ದೀನ್ ಉಮ್ರಿ, ಜಮಾಅತೆ ಇಸ್ಲಾಮಿ ಹಿಂದ್ ಸೇವೆ ಈ ಕ್ಷೇತ್ರದಲ್ಲಿ ಮುಂದುವರಿದಿದೆ. ಕಳೆದ ಕೆಲವು ವರ್ಷಗಳಿಂದ ಈ ಸೇವೆಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ವಿವಿಧ ವರ್ಗಗಳ ಬುದ್ಧಿಜೀವಿಗಳ ನಡುವೆ ಸಾಮರಸ್ಯ ಬೆಳೆದರೆ ಪರಸ್ಪರ ವಿಶ್ವಾಸದ ವಾತಾವರಣ ಬೆಳೆಸಲು ಖಂಡಿತ ಸಹಕಾರಿಯಾಗುತ್ತದೆ ಎಂದರು. 

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡ ರೀತಿಯಲ್ಲಿಯೇ ಸಿಎಎ ಮತ್ತು ಎನ್‍ಆರ್‍ಸಿಯನ್ನು ಹಿಂಪಡೆಯಲು ಸರಕಾರವನ್ನು ಒತ್ತಾಯಿಸಲು ಸಾಧ್ಯ. ಆದರೆ, ಅದಕ್ಕಾಗಿ ನಡೆಯುವ ಚಳವಳಿಯನ್ನು ಜನಾಂದೋಲನವಾಗಿ ರೂಪಿಸಬೇಕು. ಇದನ್ನು ಕೇವಲ ಮುಸ್ಲಿಮರ ಚಳವಳಿ ಎಂದು ಸೀಮಿತಗೊಳಿಸದರೆ ಅದರಲ್ಲಿನ ಯಶಸ್ಸಿನ ಭರವಸೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. 

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಅದ್ ಬೆಳಗಾಮಿ ಸ್ವಾಗತ ಭಾಷಣ ಮಾಡಿದರು. ಮುಖಂಡರಾದ ಅಥರುಲ್ಲಾ ಶರೀಫ್, ಮುಹಮ್ಮದ್ ಯೂಸುಫ್ ಕನ್ಹಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News