ಭ್ರಷ್ಟಾಚಾರ ಪ್ರಕರಣ: ನ್ಯಾಯಾಂಗ ತನಿಖೆಗೆ ಸಿಪಿಎಂ ಆಗ್ರಹ

Update: 2021-11-29 15:40 GMT

ಬೆಂಗಳೂರು, ನ. 29: `ಸರಕಾರಿ ಕಾಮಗಾರಿ ಗುತ್ತಿಗೆ ಕೆಲಸದಲ್ಲಿ ಗುತ್ತಿಗೆದಾರರಿಂದ ಇವರು ಲಂಚ ಪಡೆಯುತ್ತಿರುವುದು ಹೊಸದೇನಲ್ಲಾ. ಆದರೆ, ಗುತ್ತಿಗೆದಾರರೇ ದೂರು ನೀಡುವಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಮನಿಸಿದರೆ, ಅಧಿಕಾರಿಗಳು, ಶಾಸಕರು ಮತ್ತು ಮಂತ್ರಿಗಳು ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಕೈಗೊಳ್ಳಬೇಕೆಂದು ಸಿಪಿಎಂ ಆಗ್ರಹಿಸಿದೆ.

ಗುತ್ತಿಗೆದಾರರ ಬಳಿ ಶೇ.40ಕ್ಕೂ ಅಧಿಕ ಪ್ರಮಾಣದಲ್ಲಿ ಕಮಿಷನ್ ಸಂಬಂಧಿಸಿದ ತಡೆಯುವಂತೆ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ದೂರು ನೀಡಿದ್ದು, ರಾಜ್ಯದ ರಸ್ತೆ, ಕಟ್ಟಡ ಮತ್ತಿತರೇ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡು ಬರುತ್ತದೆ. ಸರಕಾರಗಳ ಇಂತಹ ದೌರ್ಬಲ್ಯಗಳಿಂದಾಗಿಯೇ ಸಾರ್ವಜನಿಕ ಸಂಪನ್ಮೂಲಗಳು ಲೂಟಿ ನಡೆಯುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ದೂರಿದ್ದಾರೆ.

ಸರಕಾರದ ವಿವಿಧ ಇಲಾಖೆಗಳು ಮತ್ತು ಅಭಿವೃದ್ದಿ ನಿಗಮಗಳಲ್ಲಿಯೂ ಇದೆ ಸ್ಥಿತಿ ಕಾಣಬಹುದು. ಬಹುತೇಕ ಇವುಗಳ ಫಲಾನುಭವಿಗಳು ಶಾಸಕರುಗಳ ಹಿಂಬಾಲಕರು ಮತ್ತು ಹಣ ಅಥವಾ ಪ್ರಮಾಣದ ಲಂಚ ನೀಡುವವರಾಗಿದ್ದಾರೆ. ನಿಜ ಫಲಾನುಭವಿಗಳು ಶಾಸಕರುಗಳ ಕೃಪೆಯಿಲ್ಲದೆ, ಲಂಚ ನೀಡಲಾಗದೆ ಕಚೇರಿಗಳ ಸುತ್ತ ಗಿರಕಿ ಹೊಡೆದು ಬೇಸ್ತು ಬೀಳುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿನ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿ ಬಹಿರಂಗ ಪಡಿಸಿದೆ' ಎಂದು ಅವರು ಟೀಕಿಸಿದ್ದಾರೆ.

ಕಂದಾಯ ಇಲಾಖೆಯು ಗಬ್ಬೆದ್ದು ನಾರುತ್ತಿದೆ. ಪೊಲೀಸ್ ಇಲಾಖೆಯು ಸೇರಿದಂತೆ ಇತರೆಲ್ಲಾ ಇಲಾಖೆಗಳು ಇದರಿಂದ ಹೊರತಲ್ಲ. ಈ ಎಲ್ಲವೂ ದೇಶದ ಮುಂದೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿವೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿವೆ. ಈ ಎಲ್ಲ ಅನುಚಿತ ಬೆಳವಣಿಗೆಗಳಿಗೆ ಕಾರಣವಾದ ತಮ್ಮ ಸರಕಾರದ ದುರ್ನಡೆಗಳನ್ನು ಸಿಪಿಎಂ ಬಲವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದರಿ ಭ್ರಷ್ಟಾಚಾರದ ನಿಯಂತ್ರಣಕ್ಕೆ ಸರಕಾರ ಘೋಷಿಸಿದ ಮುಖ್ಯ ಕಾರ್ಯದರ್ಶಿಗಳ ಮೂಲಕ ತನಿಖೆ ನಿರರ್ಥಕವಾದುದು. ಈ ಕೂಡಲೇ ಸದರಿ ಭ್ರಷ್ಟಾಚಾರದ ವಿಚಾರಗಳನ್ನು ನ್ಯಾಯಾಂಗದ ಸುಪರ್ದಿಯಲ್ಲಿ ಉನ್ನತ ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕು. ಈ ಎಲ್ಲದಕ್ಕೂ ತಮ್ಮದೇ ಸರಕಾರ ಮತ್ತು ಮಂತ್ರಿ ಮಂಡಲವೇ ನೇರ ಹೊಣೆಗಾರನಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ ಜನರಿಂದ ಮರಳಿ ಜನಾದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕು ಎಂದು ಬಸವರಾಜು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News