ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಮನೆಯಲ್ಲಿ ಕಳವು ಪ್ರಕರಣ; ಮಹಿಳೆಯ ಬಂಧನ

Update: 2021-12-08 12:22 GMT
 ಬಿ.ಆರ್.ರವಿಕಾಂತೇಗೌಡ

ಬೆಂಗಳೂರು, ಡಿ.8: ನಗರದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಅವರ ಮನೆಯಲ್ಲಿ ಮೊಬೈಲ್ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ ಕೆಲಸದಾಕೆಯನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೊಬೈಲ್ ಸೇರಿದಂತೆ ಇನ್ನಿತರೆ ವಸ್ತುಗಳು ಕಳವಾಗಿದ್ದು, ಇದಕ್ಕೆ ಮನೆ ಕೆಲಸದಾಕೆ ಕಾರಣ ಎಂದು ಆರೋಪಿಸಿ ರವಿಕಾಂತೇಗೌಡ ಮನೆಯ ಕಾರು ಚಾಲಕ ಜಗದೀಶ್ ದೂರು ನೀಡಿದ್ದರು.

ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಂಜಯನಗರ ಪೊಲೀಸರು ಕಳೆದೆರಡು ವರ್ಷಗಳಿಂದ ರವಿಕಾಂತೇಗೌಡ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಅಂಕಿತಾ ಎಂಬಾಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಸಂತ್‍ರಾವ್ ಪಾಟೀಲ್ ತಿಳಿಸಿದ್ದಾರೆ.

ಮೊಬೈಲ್ ಇನ್ನಿತರ ಬೆಲೆಬಾಳುವ ವಸ್ತುಗಳೊಂದಿಗೆ ಅಂಕಿತಾ ಪರಾರಿಯಾಗಿದ್ದು ಆಕೆ ಹಾವೇರಿಯಲ್ಲಿರುವ ಸುಳಿವು ಆಧರಿಸಿ ಅಲ್ಲಿಗೆ ತೆರಳಿ ಕರೆತಂದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News