×
Ad

ತರಾತುರಿಯಲ್ಲಿ ಎನ್‍ಇಪಿ ಪಠ್ಯಕ್ರಮ ಸಿದ್ಧಪಡಿಸಿರುವುದು ಅವೈಜ್ಞಾನಿಕ: ಪ್ರೊ.ಸೋಮಶೇಖರಪ್ಪ

Update: 2021-12-08 22:26 IST

ಬೆಂಗಳೂರು, ಡಿ. 8: ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ(ಎನ್‍ಇಪಿ) ಹೆಸರಿನಲ್ಲಿ ಹೇರಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕೆಟ್ರಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್(ಎಐಡಿಎಸ್‍ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಧರಣಿ ಸತ್ಯಾಗ್ರಹ ನಡೆಸಿದರು.

ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯಲ್ಲಿ ಪದವಿ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಜನಸಾಮಾನ್ಯರು, ತರಾತುರಿಯಲ್ಲಿ ಎನ್‍ಇಪಿ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರಕ್ಕೆ ತಳ್ಳುವ 4 ವರ್ಷದ ಪದವಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನ್ಯತೆ ಇದೆಯೇ?: ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ.ನಿವೃತ್ತ ಪ್ರಾಧ್ಯಾಪಕ ಪ್ರೊ.ಸೋಮಶೇಖರಪ್ಪ, ‘ರಾಜ್ಯ ಸರಕಾರ ಏಕಾಏಕಿ ಎನ್‍ಇಪಿ ಜಾರಿ ಮಾಡಿದೆ. ಕೇವಲ 15 ದಿನಗಳ ಕಾಲಾವಕಾಶದಲ್ಲಿ ಒಂದು ಹೊಸ ಶೈಕ್ಷಣಿಕ ನೀತಿಯಡಿ ನೂತನ ಪಠ್ಯಕ್ರಮ ರಚಿಸಲು ನನಗೆ ಕರೆ ಬಂದಿತ್ತು. ನಾನು ಅದನ್ನು ತಿರಸ್ಕರಿಸಿದ್ದೆ. ಕಾರಣ, ಕೇವಲ 15 ದಿನಗಳಲ್ಲಿ ಒಂದು ಪಠ್ಯಕ್ರಮ ತಯಾರಿ ಮಾಡಲು ಅಸಾಧ್ಯ. ಅಷ್ಟೇ ಅಲ್ಲ ಆ ಪ್ರಕ್ರಿಯೆ ಅವೈಜ್ಞಾನಿಕ ಎನಿಸಿಕೊಳ್ಳುತ್ತದೆ' ಎಂದು ದೂರಿದರು.

‘ಎನ್‍ಇಪಿ-2020 ಕಲಿಕಾ ಮಾದರಿಯು ಕೌಶಲ್ಯ ಆಧಾರಿತವಾಗಿ ಇರುತ್ತದೆ. ಇಲ್ಲಿ ನಮಗೆ ಬರುವ ಪ್ರಶ್ನೆ ಎಂದರೆ, ಈ ಮಾದರಿಯ ಶಿಕ್ಷಣಕ್ಕೆ ಮಾನ್ಯತೆ ಇದೆಯೇ? ಮುಂದುವರೆದು, ಕೌಶಲ್ಯ ಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮ, ಪಠ್ಯಪುಸ್ತಕ ಸಿದ್ಧತೆ ಆಗಿದೆಯೇ? ಈ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗಿದೆಯೇ? ಕೌಶಲ್ಯದ ಹೆಸರಿನಲ್ಲಿ ನೃತ್ಯ, ಸಂಗೀತ ಮುಂತಾದವನ್ನು ಕಲಿಯುವ ವಿದ್ಯಾರ್ಥಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿ ಇದೆಯೇ? ಇವಕ್ಕೆ ಸರಕಾರದ ಬಳಿ ಉತ್ತರ ಇಲ್ಲ. ಇಷ್ಟು ಲೋಪ-ದೋಷಗಳು, ಪೂರ್ವ ತಯಾರಿ ಇಲ್ಲದೆ ಇರುವ ನೀತಿಯನ್ನು ಕ್ರಾಂತಿಕಾರಕ ಎಂದು ಕರೆಯಲು ಹೇಗೆ ಸಾಧ್ಯ? ಎಂದು ಅವರು ವಾಗ್ದಾಳಿ ನಡೆಸಿದರು.

ಎಐಡಿಎಸ್‍ಓ ಜಿಲ್ಲಾಧ್ಯಕ್ಷೆ ಅಭಯಾ ದಿವಾಕರ್ ಮಾತನಾಡಿ, ‘ಈಗಾಗಲೆ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಆದರೂ, ಪಠ್ಯಕ್ರಮ ತಯಾರಾಗಿಲ್ಲ. ಎಂದರೆ, ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳು ಇಲ್ಲ. ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ 2 ತಿಂಗಳಿನಿಂದ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ' ಎಂದು ಟೀಕಿಸಿದರು.

ಇದರೊಂದಿಗೆ, ಎನ್‍ಇಪಿಯ ನಾಲ್ಕು ವರ್ಷದ ಪದವಿ ಕೋರ್ಸ್ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲ ವಿಷಯದ ಜೊತೆಗೆ ಸಿಬಿಸಿಎಸ್(ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಡಿಯಲ್ಲಿ ಮತ್ತೊಂದು ವಿಭಾಗದ ವಿಷಯ ಓದಬೇಕು ಎಂಬುದನ್ನು ಹೇಳುತ್ತದೆ. ಎಂದರೆ, ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ವಾಣಿಜ್ಯ/ಕಲಾ ವಿಭಾಗದ ಒಂದು ವಿಷಯ ಓದಲೇಬೇಕು. ಓದುವುವು ನಮ್ಮ ಆಯ್ಕೆಯ ವಿಷಯಕ್ಕೆ ಬದಲಾಗಿ, ಹೇರಿಕೆಯಾಗಿ ಎನ್‍ಇಪಿಯಲ್ಲಿ ಮಾರ್ಪಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣ ಶೇ.50 ರಷ್ಟು ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಎರಡುವರೆ ಲಕ್ಷದಷ್ಟು ಅಧಿಕ ವಿದ್ಯಾರ್ಥಿಗಳು ಪದವಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. ಈ ವೇಳೆ, ಸರಕಾರವು ಶೇ.50ಕ್ಕೂ ಅಧಿಕ ಉಪನ್ಯಾಸಕರನ್ನು ನೇಮಕ ಮಾಡಬೇಕು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು, ತರಗತಿಗಳ ಸಂಖ್ಯೆಯನ್ನು ಏರಿಸಬೇಕು, ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಖಾಲಿಯಿರುವ ಶೇ.70ರಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. 14 ಸಾವಿರ ಅಥಿತಿ ಉಪನ್ಯಾಸಕರನ್ನು ಖಾಯಂ ಮಾಡುವಲ್ಲಿ ಯೋಚನೆ ನಡೆಸಬೇಕಿತ್ತು. ಆದರೆ, ಸರಕಾರ ಇದರ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಏಕಾಏಕಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿ ಉಪನ್ಯಾಸಕರ ಮೇಲೆ ಹೇರಿದೆ. ಇದನ್ನು ರಾಜ್ಯದ ವಿದ್ಯಾರ್ಥಿಗಳು ಅತ್ಯಂತ ತೀವ್ರವಾಗಿ ಖಂಡಿಸಬೇಕು. ಮುಂದಿನ ದಿನಗಳಲ್ಲಿ ಈ ನೀತಿ ವಾಪಸ್ ಆಗದಿದ್ದರೆ ಒಂದು ಬಲಿಷ್ಠ ಹೋರಾಟಕ್ಕೆ ಸಜ್ಜಾಗಬೇಕು' ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News