ಮಗು ಜೊತೆಯಲ್ಲಿರುವಂತೆಯೇ ವ್ಯಕ್ತಿಗೆ ಲಾಠಿಯಿಂದ ನಿರ್ದಯವಾಗಿ ಥಳಿಸಿದ ಪೊಲೀಸರು: ಸಿಬ್ಬಂದಿ ಅಮಾನತು

Update: 2021-12-10 09:32 GMT

ಲಕ್ನೋ: ಕೈಯ್ಯಲ್ಲಿ ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ನಿರ್ದಯವಾಗಿ ಲಾಠಿಯೇಟು ನೀಡುತ್ತಿರುವ ದೃಶ್ಯದ ವೀಡಿಯೋವೊಂದು ದೇಶಾದ್ಯಂತ ಆಕ್ರೋಶ ಮೂಡಿಸಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನ ದೇಹತ್ ಎಂಬಲ್ಲಿ ಗುರುವಾರ ನಡೆದಿದೆ. ಈ ವೀಡಿಯೋದಲ್ಲಿ ಅಮಾನವೀಯವಾಗಿ ವರ್ತಿಸಿದ್ದ ಪೊಲಿಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸುಮಾರು ಒಂದು ನಿಮಿಷ ಅವಧಿಯ ಈ ವೀಡಿಯೋದಲ್ಲಿ ಸ್ಥಳೀಯ ಠಾಣೆಯ ಇನ್‍ಸ್ಪೆಕ್ಟರ್ ಮೊದಲು ಆ ವ್ಯಕ್ತಿಗೆ ಕೋಲಿನಿಂದ ಬಾರಿಸಿದ್ದಾರೆ. ನಂತರ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯ ಕೈಯ್ಯಲ್ಲಿದ್ದ ಅಳುತ್ತಿರುವ ಮಗುವನ್ನು ಸೆಳೆಯಲು ಯತ್ನಿಸುವುದು ಕಾಣಿಸುತ್ತದೆ.

ದೇಹತ್‍ನ ಅಕ್ಬರ್‌ ಪುರ್ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯ ಸಮೀಪ ಈ ಘಟನೆ ನಡೆದಿದ್ದು ಆ ವ್ಯಕ್ತಿ ಮಗುವಿಗೆ ಏನೂ ಮಾಡಬೇಡಿ ಎಂದು ಅಂಗಲಾಚುತ್ತಿರುವುದು ಕೇಳಿಸುತ್ತದೆ. ಪೊಲೀಸರು ಬಲವಂತವಾಗಿ ಮಗುವನ್ನು ಸೆಳೆದಾಗ "ಮಗುವಿಗೆ ತಾಯಿ ಕೂಡ ಇಲ್ಲ" ಎಂದು ಆ ವ್ಯಕ್ತಿ ಹೇಳುತ್ತಾನೆ.

ಆದರೆ ಘಟನೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಸ್ವಲ್ಪ ಬಲಪ್ರಯೋಗ ನಡೆಸಲಾಗಿದೆ ಹಾಗೂ ಮಗುವನ್ನು ರಕ್ಷಿಸಲು ಪೊಲೀಸರು ಯತ್ನಿಸಿದ್ದಾರೆ ಎಂಬ ಸಬೂಬು ನೀಡಿದ್ದಾರೆ.

"ಕೆಲ ಜನರುಅರಾಜಕತೆ ಸೃಷ್ಟಿಸಲು ಯತ್ನಿಸಿ ಆಸ್ಪತ್ರೆಯ ಒಪಿಡಿ ಅನ್ನು ಮುಚ್ಚಿಸಲು ಹಾಗೂ ರೋಗಿಗಳಿಗೆ ಭೀತಿ ಹುಟ್ಟಿಸಲು ಯತ್ನಿಸಿದ್ದಾರೆ. ಆ ವ್ಯಕ್ತಿಯ ಸಹೋದರ ಈ ಆಸ್ಪತ್ರೆಯ ಉದ್ಯೋಗಿಯಾಗಿದ್ದು ಸದಾ ಉಪಟಳ ನಡೆಸುತ್ತಿದ್ದ ಹಾಗೂ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರ ಬೆರಳಿಗೆ ಕಚ್ಚಿದ್ದಾನೆ," ಎಂದು ಕಾನ್ಪುರ್ ದೇಹತ್‍ನ ಎಎಸ್‍ಪಿ ಘನಶ್ಯಾಮ್ ಚೌರಾಸಿಯಾ ಹೇಳಿದ್ದಾರೆ.

ನಂತರ ಪೊಲೀಸ್ ಇಲಾಖೆ ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News