ಬುಡಕಟ್ಟು ಜನರನ್ನು ಕ್ರಿಮಿನಲ್ಗಳಾಗಿ ನೋಡುವ ಮನಸ್ಥಿತಿ ಪೊಲೀಸರಲ್ಲಿ ಇನ್ನೂ ಹಾಗೇ ಇದೆ: ನಿವೃತ್ತ ನ್ಯಾ. ಕೆ.ಚಂದ್ರು
ಬೆಂಗಳೂರು, ಡಿ.11: ಮಾನವ ಹಕ್ಕುಗಳ ರಕ್ಷಣೆ ಮತ್ತು ಇದರ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಅಗತ್ಯತೆ ಇದೆ ಎಂದು ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ನುಡಿದರು.
ಶನಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅವರ ಮಾನವ ಹಕ್ಕುಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಎಲ್ಲರಿಗೂ ಸಮಾನ ಹಕ್ಕು ಮತ್ತು ಕರ್ತವ್ಯವನ್ನು ನೀಡಲಾಗಿದೆ. ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸಿದರೆ ಮಾತ್ರ ಸಮಾಜದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯ ಎಂದು ಅವರು ನುಡಿದರು.
ವಿದ್ಯಾರ್ಥಿ ಹೋರಾಟಗಾರನಾಗಿದ್ದ ನಾನು ಕಾರ್ಮಿಕ ಚಳವಳಿಯಲ್ಲಿ ಭಾಗವಹಿಸಿದ್ದೆ ಎಂದ ಅವರು, 1975-77ರ ಅವಧಿಯಲ್ಲಿ ಘೋಷಣೆಯಾದ ರಾಷ್ಟ್ರೀಯ ತುರ್ತು ಪರಿಸ್ಥಿತಿ ನ್ಯಾಯಾಲಯಗಳನ್ನು ದುರ್ಬಲಗೊಳಿಸಿ ಸಂವಿಧಾನ ಒದಗಿಸಿದ್ದ ಮೂಲಭೂತ ಹಕ್ಕುಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ನಮ್ಮಲ್ಲಿ ಹಲವರ ಕಣ್ಣು ತೆರೆಯಿತು. ಆಗ ನಾನು ಕಾನೂನು ವಿದ್ಯಾರ್ಥಿಯಾಗಿದ್ದು ತರಗತಿಯಲ್ಲಿ ಸಂವಿಧಾನ ಕಾನೂನನ್ನು ಕಲಿಯುತ್ತಿದ್ದೆ ಎಂದು ಚಂದ್ರು ನೆನೆದರು.
ಕೆಲ ಸನ್ನಿವೇಶಗಳಿಂದಾಗಿ ಬಡವರು ಮತ್ತು ದೀನದಲಿತರ ರಕ್ಷಣೆಗಾಗಿ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಬೇಕೆಂಬ ಕಲ್ಪನೆ ನನ್ನೊಳಗೆ ಮೂಡಿತು. 1976ರಲ್ಲಿ ನಾನು ವಕೀಲನಾಗಿ ಎನ್ರೋಲ್ ಆದ ಬಳಿಕ ನನ್ನ ಮೊದಲ ಪ್ರಮುಖ ಪ್ರಕರಣವನ್ನು ಜಸ್ಟೀಸ್ ಇಸ್ಮಾಯಿಲ್ ಆಯೋಗದೆದುರು ಮಂಡಿಸಿದೆ ಎಂದ ಅವರು, ‘ಜೈಭೀಮ್ʼ ಸಿನೆಮಾ ಪ್ರೇಕ್ಷಕರಿಗೆ ಹಲವು ಸಂದೇಶಗಳನ್ನು ನೀಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜನರ ಕುಂದುಕೊರತೆ ನಿವಾರಿಸಲು ಕಾನೂನನ್ನು ಅಸ್ತ್ರವಾಗಿ ಬಳಸುವ ಬಗ್ಗೆ ಚಲನಚಿತ್ರ ಮಾತನಾಡಿದೆ ಎಂದರು.
ಸಂತ್ರಸ್ತ ಜನ ಹೇಗೆ ಒಂದು ಆಂದೋಲನವಾಗಿ ಸಂಘಟಿತರಾಗಬೇಕು ಎಂಬುದನ್ನು ಸಿನೆಮಾದಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಸರಕಾರಕ್ಕೆ ತಮ್ಮ ನಿರ್ದಿಷ್ಟ ಬೇಡಿಕೆಗಳನ್ನಿಟ್ಟು ಹೇಗೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂಬುದನ್ನು ಸಹ ತೋರಿಸಲಾಗಿದೆ ಎಂದು ತಿಳಿಸಿದರು.
ಬ್ರಿಟಿಷರ ಕಾಲದಲ್ಲಿ ಸಾರ್ವಜನಿಕರನ್ನು ಅಪರಾಧಿಗಳೆಂದು ಬಿಂಬಿಸುವ ಕಾನೂನುಗಳು ಜಾರಿಯಾದವು. ಅನೇಕ ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್ಗಳು ಎಂದು ಪಟ್ಟಿ ಮಾಡಲಾಯಿತು. ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದರೂ ಬುಡಕಟ್ಟು ಜನರನ್ನು ಕ್ರಿಮಿನಲ್ಗಳಾಗಿ ನೋಡುವ ಮನಸ್ಥಿತಿ ಮಾತ್ರ ಪೊಲೀಸರಲ್ಲಿ ಇನ್ನೂ ಹಾಗೇ ಇದೆ ಎಂದು ವಿಷಾದಿಸಿದರು.
ಜಾತಿಗೊಂದು ಪದ: ಇಂದು ಪೊಲೀಸರು ಒಂದು ಚಾರ್ಜ್ಶೀಟ್ ಅಥವಾ ದೂರು ಬರೆದರೆ ಅದರ ಮೇಲೆ ‘ಕೆಆರ್’, ‘ಐಆರ್’ ಎಂದೇ ಉಲ್ಲೇಖಿಸಿ ಬರೆಯುತ್ತಾರೆ. ಕೆಆರ್ ಎಂದರೆ- ಕೊರಗ, ಐಆರ್ ಎಂದರೆ ಇರುಳಿಗ ಎಂದರ್ಥ.ಪೊಲೀಸರ ಮನಸ್ಸಿನಲ್ಲಿರುವ ಪೂರ್ವಗ್ರಹದಿಂದಾಗಿ ಹೆಸರಿನ ಮುಂದೆ ಹೀಗೆ ಬರೆಯಲಾಗುತ್ತಿದೆ. ಅಲ್ಲದೆ, ಹೆಸರಿನ ಮುಂದಿನ ಇನಿಷಿಯಲ್ ನೋಡಿದ ತಕ್ಷಣ ಅಧಿಕಾರಿಗಳು, ಈ ಜನರನ್ನು ಅಪರಾಧಿಗಳು ಎಂದು ಮೊದಲೇ ತೀರ್ಮಾನಿಸಿ ಅಲ್ಲೇ ತೀರ್ಪು ಕೊಟ್ಟು, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಶಿಕ್ಷೆಗೊಳಪಡಿಸುವುದನ್ನು ನೋಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಚುನಾವಣೆಯಲ್ಲಿ ಜಾತಿ, ಹಣ, ಧರ್ಮದ ಪ್ರಭಾವವನ್ನು ಯಾವ ರೀತಿ ಮುಕ್ತ ಮಾಡಬೇಕು. ಜನಪ್ರತಿನಿಧಿಗಳು ತಮಗೆ ಇಷ್ಟಬಂದಾಗ ರಾಜೀನಾಮೆ ಕೊಟ್ಟು ಉಪಚುನಾವಣೆಯನ್ನು ನಮ್ಮ ಮೇಲೆ ಏರುವಂತಹ ಸಂದರ್ಭದಲ್ಲಿ ಏನು ಮಾಡಬೇಕು. ಇದಕ್ಕೆ ಪರಿಹಾರಗಳೇನು ಎಂಬುದನ್ನು ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಲಲಿತಾ ನಾಯಕ್, ದಸಂಸ ಮುಖಂಡ ಮಾವಳ್ಳಿ ಶಂಕರ್, ಗೋಪಾಲಕೃಷ್ಣ ಹರಳಹಳ್ಳಿ ಸೇರಿದಂತೆ ಪ್ರಮುಖರಿದ್ದರು.
ನ್ಯಾಯಾಂಗ ಏನು ಮಾಡಲು ಸಾಧ್ಯವಾಗುತ್ತದೆ? ಸಮಾಜ ಬದಲಾಗಬೇಕಲ್ಲವೇ ಎಂದು ಅನೇಕರು ನಮ್ಮನ್ನು ಕೇಳುತ್ತಾರೆ. ಆದರೆ, ಒಬ್ಬ ಸರಿಯಾದ ವಕೀಲ, ಒಬ್ಬ ದಿಟ್ಟತನ ಇರುವ ನ್ಯಾಯಾಧೀಶ, ಒಬ್ಬ ಸರಿಯಾದ ಅಧಿಕಾರಿ ಎಂತಹ ಬದಲಾವಣೆಗಳನ್ನಾದರೂ ತರಬಲ್ಲರು.
-ಕೆ.ಚಂದ್ರ, ನಿವೃತ್ತ ನ್ಯಾಯಮೂರ್ತಿ