ಕ್ರೈಸ್ತರ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿರುವ ಘಟನೆ ಖಂಡನೀಯ: ಸಾಲಿಡಾರಿಟಿ ಯೂತ್ ಮೂವ್‍ಮೆಂಟ್

Update: 2021-12-13 16:26 GMT

ಬೆಂಗಳೂರು, ಡಿ.13: ಕೋಲಾರದ ಶ್ರೀನಿವಾಸಪುರದಲ್ಲಿ ಕ್ರೈಸ್ತರ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿರುವ ಘಟನೆಯನ್ನು ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕ ಬಲವಾಗಿ ಖಂಡಿಸಿದೆ.

ಕಳೆದ 12 ತಿಂಗಳಲ್ಲಿ ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸತತ 38 ದಾಳಿಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಯೂತ್ ಮೂವ್‍ಮೆಂಟ್ ಆರೋಪಿಸಿದೆ.

ಪ್ರತಿಯೊಬ್ಬ ವ್ಯಕ್ತಿಗೆ ತಾನು ನಂಬಿರುವ ಧರ್ಮವನ್ನು ಪ್ರಚಾರ, ಪ್ರಸಾರ, ಬೋಧನೆ ಮಾಡುವುದರ ಜತೆಗೆ ಅವುಗಳನ್ನು ಅನುಸರಿಸುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯ ಅಗತ್ಯವು ಈ ರಾಜ್ಯಕ್ಕೆ ಖಂಡಿತವಾಗಿಯೂ ಇಲ್ಲವಾಗಿದೆ ಎಂದು ಸಾಲಿಡಾರಿಟಿ ತಿಳಿಸಿದೆ.  

ಬಲವಂತದ ಧಾರ್ಮಿಕ ಮತಾಂತರವಾಗಿದೆ ಎಂಬುವುದಕ್ಕೆ ಸರಕಾರದ ಬಳಿ ಯಾವ ಅಧಿಕೃತ ದಾಖಲೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಪ್ರಸ್ತುತ ಮಸೂದೆಯು ರಾಜ್ಯದ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿಗಳ ಮಧ್ಯೆ ಇರುವ ಸಾಮರಸ್ಯವನ್ನು ಬುಡಮೇಲುಗೊಳಿಸುವುದಲ್ಲದೆ ಈ ರಾಜ್ಯದ ಸೌಹಾರ್ದ ಪರಂಪರೆಗೂ ಅಪಾಯಕಾರಿ ಎಂದು ಹೇಳಿದೆ. 

ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಮುಕ್ತ ಪರವಾನಿಗೆ ನೀಡಿದಂತಾಗುತ್ತದೆ. ಅಭಿವೃಧಿಯನ್ನು ಬಿಟ್ಟು ಕೇವಲ ದ್ವೇಷದ ರಾಜಕಾರಣ ಮಾಡುತ್ತಿರುವ ಉತ್ತರ ಪ್ರದೇಶ ಸರಕಾರದ ಮಾದರಿ ನಮಗೆ ಬೇಡ. ಹೀಗಾಗಿ, ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಸರಕಾರವು ಕೈಬಿಡಬೇಕು. ಆದುದರಿಂದ ಈ ನಿಟ್ಟಿನಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾಲಿಡಾರಿಟಿ ಕರ್ನಾಟಕ ಬಲವಾಗಿ ವಿನಂತಿಸುತ್ತದೆ.

ಬೇಡಿಕೆಗಳು: ಸರಕಾರವು ಸಂವಿಧಾನ ವಿರೋಧಿಯಾದ ಮತಾಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಕೈಬಿಡಬೇಕು.

ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಎಲ್ಲ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು

ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದ್ದು ಸರಕಾರವು ಸೂಕ್ತ ಪರಿಹಾರವನ್ನು ಬಿಡುಗಡೆಗೊಳಿಸಬೇಕು.

ದಾಳಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭರವಸೆಯನ್ನು ಕೊಡಬೇಕು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News