ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್‍ನಿಂದ ಬಿದ್ದು ಸಾವು

Update: 2021-12-20 15:05 GMT

ಬೆಂಗಳೂರು, ಡಿ.20:ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ ಮೂತ್ರ ವಿಸರ್ಜನೆಗೆ ಎಂದು ಹೇಳಿ ಹೋಗಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್‍ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್.ಪುರಂ ಠಾಣಾ ವ್ಯಾಪ್ತಿಯ ವಿಜಿನಾಪುರ ನಿವಾಸಿ ಶಕ್ತಿವೇಲು ಸಾವನ್ನಪ್ಪಿದ್ದ ಆರೋಪಿ. ಇತ್ತೀಚೆಗೆ ಶಕ್ತಿವೇಲು ಪತ್ನಿ ಸಂಗೀತಾ ಈತನ ಕಿರುಕುಳ ತಾಳಲಾರದೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರೀತಿಸಿ ಮದುವೆಯಾಗಿದ್ದ ಸಂಗೀತಾ ಹಾಗೂ ಶಕ್ತಿವೇಲು ದಾಂಪತ್ಯ ಜೀವನ ಆರಂಭದಲ್ಲಿ ಚೆನ್ನಾಗಿತ್ತು. 

ಆದರೆ ಕಾಲ ಕಳೆದಂತೆ ಗಂಡ ಹೆಂಡತಿ ನಡುವೆ ಕಲಹ ಶುರುವಾಗಿತ್ತು. ಇದು ಪದೇ ಪದೆ ಮರುಕಳಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಸಂಗೀತ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಸಂಗೀತಾ ಪೋಷಕರು ಕೆ.ಆರ್ ಪುರಂ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಡಿ.19ರ ಸಂಜೆ ಪೊಲೀಸರು ಈತನನ್ನ ಬಂಧಿಸಿದ್ದರು. ಡಿ.20ರ ಬೆಳಗ್ಗೆ ಶಕ್ತಿವೇಲು ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಈ ವೇಳೆ ಹಳೆ ಮದ್ರಾಸು ರಸ್ತೆಯ ಐಟಿಐ ಗೇಟ್ ಬಳಿಯ ಸ್ಕೈವಾಕ್ ಮೇಲಿಂದ ಹಾರಿದ್ದಾನೆ. ಇದೇ ವೇಳೆಗೆ ವೇಗವಾಗಿ ಹೋಗುತ್ತಿದ್ದ ಕಾರೊಂದು ಶಕ್ತಿವೇಲು ಮೇಲೆ ಹರಿದು ಶಕ್ತಿವೇಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸದ್ಯ ಅಪಘಾತ ಸಂಬಂಧ ಕೆ.ಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಕಸ್ಟಡಿಯಿಂದ ಆರೋಪಿ ಎಸ್ಕೇಪ್ ಆದ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News