×
Ad

ಚಿತ್ರಕಲಾ ಪರಿಷತ್ ಅವ್ಯವಹಾರ: ಕ್ರಮ ಕೈಗೊಳ್ಳಲು ಹೈಕೋರ್ಟ್ ನಿರ್ದೇಶನ

Update: 2021-12-22 19:49 IST

ಬೆಂಗಳೂರು, ಡಿ.22: ಚಿತ್ರಕಲಾ ಪರಿಷತ್‍ನಲ್ಲಿ(ಸಿಕೆಪಿ) 2007–2009ರ ಅವಧಿಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ನೋಂದಣಾಧಿಕಾರಿ ಸಲ್ಲಿಸಿರುವ ವರದಿಯನ್ನು 3 ತಿಂಗಳ ಒಳಗಾಗಿ ಜಾರಿಗೊಳಿಸಿ ಎಂದು ಹೈಕೋರ್ಟ್, ಸಹಕಾರ ಸಂಘಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಈ ಸಂಬಂಧ ಡಾ. ಟಿ.ಎನ್.ಲಕ್ಷ್ಮಿಪತಿಬಾಬು ಹಾಗೂ ಟಿ.ಚಂದ್ರಶೇಖರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನಕುಮಾರ್, ‘ಸಿಕೆಪಿ ಅಧ್ಯಕ್ಷ ಟಿ. ಪ್ರಭಾಕರ ಹಾಗೂ ಕಾರ್ಯದರ್ಶಿ ಎಂ.ಜೆ.ಕಮಲಾಕ್ಷಿ 2007ರಿಂದ 2009ರ ತಮ್ಮ ಅಧಿಕಾರಾವಧಿಯಲ್ಲಿ ವ್ಯಾಪಕ ಆರ್ಥಿಕ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಅಂತರ್‍ರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾಬು ಈಶ್ವರ ಪ್ರಸಾದ್ ಮತ್ತು ಎಸ್.ಗೋಪಿನಾಥ್ ಸಹಕಾರ ಸಂಘಗಳ ನೋಂದಾಣಾಧಿಕಾರಿಗೆ ದೂರು ನೀಡಿದ್ದರು' ಎಂದು ತಿಳಿಸಿದರು.

ಅಲ್ಲದೇ, ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಜಿಲ್ಲಾ ನೋಂದಣಾಧಿಕಾರಿ 2015ರ ಅಕ್ಟೋಬರ್ 21ರಂದು ಸರಕಾರಕ್ಕೆ ವರದಿ ನೀಡಿ ಒಟ್ಟು 60,62,648 ರೂಪಾಯಿ ಮೊತ್ತದ ಆರ್ಥಿಕ ಅವ್ಯವಹಾರ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿದ್ದರು. ಆದರೆ, ಸರಕಾರ ರಾಜಕೀಯ ಒತ್ತಡಗಳಿಗೆ ಮಣಿದು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಪ್ರಧಾನ ಕಾರ್ಯದರ್ಶಿ ಮೂರು ತಿಂಗಳೊಳಗೆ ವರದಿ ಜಾರಿಗೊಳಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News