ಬೆಂಗಳೂರು: ಅರ್ಚನಾರೆಡ್ಡಿ ಕೊಲೆ ಪ್ರಕರಣ; ಪುತ್ರಿ ಸೇರಿ 7 ಮಂದಿ ಬಂಧನ
ಬೆಂಗಳೂರು, ಡಿ.30: ಹೊಸೂರು ರಸ್ತೆಯ ಸಿಗ್ನಲ್ ಬಳಿ ನಡುರಸ್ತೆಯಲ್ಲೇ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ 2ನೆ ಪತಿ ಮತ್ತು ಮಗಳು ಯುವಿಕಾರೆಡ್ಡಿ ಸೇರಿ 7 ಮಂದಿ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಜಿಗಣಿ ಮೂಲದ ಬೆಳ್ಳಂದೂರಿನಲ್ಲಿ ವಾಸವಿದ್ದ ಅರ್ಚನಾ ರೆಡ್ಡಿ(42)ಯನ್ನು ಕಳೆದ ಡಿ.27ರಂದು ರಾತ್ರಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅರ್ಚನಾ ಅವರ 2ನೆ ಪತಿ ನವೀನ್ಕುಮಾರ್, ಮಗಳು ಯುವಿಕಾರೆಡ್ಡಿ ಮತ್ತು ಸಂತೋಷ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ.
ಉಳಿದ ಆರೋಪಿಗಳಾದ ಬಂಧಿತ ಅನೂಪ್, ಆನಂದ್, ನರೇಂದ್ರ ಹಾಗೂ ದೀಪುರನ್ನು ಬಂಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಹೊಸೂರು ರಸ್ತೆ ಸಿಗ್ನಲ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾ ರೆಡ್ಡಿಯನ್ನು ಡಿ.27ರಂದು ರಾತ್ರಿ 10.30ರ ವೇಳೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಿಸಿಟಿವಿ ಆಧಾರದ ಮೇಲೆ ಈ ಕೊಲೆ ಪ್ರಕರಣ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ತನಿಖೆಯಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಇದೀಗ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಆಸ್ತಿಯನ್ನ ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.
ಮೊದಲ ಆರೋಪಿ ಹಾಗೂ ಕೊಲೆಯಾದ ಅರ್ಚನಾ ಪತಿ-ಪತ್ನಿಯರಾಗಿದ್ದರು. ಕೊಲೆ ಪ್ರಕರಣದಲ್ಲಿ ಕೊಲೆಯಾದಾಕೆಯ ಮಗಳೂ ಕೂಡ ಆರೋಪಿಯಾಗಿದ್ದಾಳೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದಿದ್ದಾರೆ.