ದೇಶದಲ್ಲಿ ಕೋವಿಡ್ ಸೋಂಕು ಏರಿಕೆ ; ಒಮೈಕ್ರಾನ್‌ಗೆ ಮೊದಲ ಬಲಿ

Update: 2021-12-31 01:40 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಒಮೈಕ್ರಾನ್ ಪ್ರಬೇಧದ ಸೋಂಕು ಮೊದಲ ಬಲಿ ಪಡೆದಿದೆ. ಸೋಂಕು ಗುರುವಾರ ಪಂಜಾಬ್ ಮತ್ತು ಬಿಹಾರಕ್ಕೆ ಹರಡಿದ್ದು, ಸತತ ಎರಡನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದೇಶಾದ್ಯಂತ ಹೊಸ ಪ್ರಬೇಧದ 1200ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಮೂರೇ ದಿನದಲ್ಲಿ ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ್‌ನಲ್ಲಿ 52 ವರ್ಷ ವಯಸ್ಸಿನ ಒಮೈಕ್ರಾನ್ ಸೋಂಕಿತ ಮೃತಪಟ್ಟಿರುವುದನ್ನು ಸರ್ಕಾರ ಪ್ರಕಟಿಸಿದೆ. ಆದರೆ ಇದು ಒಮೈಕ್ರಾನ್‌ನ ಮೊದಲ ಬಲಿ ಎಂದು ಇನ್ನೂ ದೃಢಪಡಿಸಿಲ್ಲ. ಏಕೆಂದರೆ ಈ ವ್ಯಕ್ತಿ ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದರು ಎನ್ನಲಾಗಿದೆ.

ದೇಶದಲ್ಲಿ ಗುರುವಾರ 16,700 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಬುಧವಾರ ದೃಢಪಟ್ಟ ಪ್ರಕರಣಗಳಿಗಿಂತ ಶೇಕಡ 27ರಷ್ಟು ಅಧಿಕ. ಸೋಮವಾರದ ಬಳಿಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ. ಗುರುವಾರ ತಡರಾತ್ರಿವರೆಗೆ 16695 ಪ್ರಕರಣಗಳು ವರದಿಯಾಗಿದ್ದು, ಇನ್ನೂ ಕೆಲವು ರಾಜ್ಯಗಳ ವರದಿಗಳು ಬಂದಿಲ್ಲ. ಇದು 71 ದಿನಗಳಲ್ಲೇ ಗರಿಷ್ಠ ಸಂಖ್ಯೆಯಾಗಿದ್ದು, ಅಕ್ಟೋಬರ್ 20ರಂದು 18,388 ಪ್ರಕರಣಗಳು ವರದಿಯಾಗಿದ್ದವು.

ಸೋಮವಾರ ಕೇವಲ 6242 ಪ್ರಕರಣ ದೇಶದಲ್ಲಿ ಪತ್ತೆಯಾಗಿದ್ದು, ಆ ಬಳಿಕ ಗಣನೀಯವಾಗಿ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಮತ್ತಿತರ ಮೆಟ್ರೊ ನಗರಗಳಲ್ಲಿ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದೆ. ಈಶಾನ್ಯ ರಾಜ್ಯಗಳು ಮತ್ತು ಕೇರಳ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ಹೊಸ ಪ್ರಕರಣಗಳ ಪ್ರಮಾಣ ಶೇಕಡ 40ರಷ್ಟು ಹೆಚ್ಚಿದ್ದು, 5368 ಪ್ರಕರಣಗಳು ಬೆಳಕಿಗೆ ಬಂದಿವೆ. ಬುಧವಾರ 1089 ಪ್ರಕರಣಗಳು ದಾಖಲಾಗಿದ್ದ ಬಂಗಾಳದಲ್ಲಿ ಗುರುವಾರ 2128 ಪ್ರಕರಗಳು ಪತ್ತೆಯಾಗಿವೆ. ಕೊಲ್ಕತ್ತಾದಲ್ಲಿ ಶೇಕಡ 102ರಷ್ಟು ಏರಿಕೆ ಉಂಟಾಗಿದೆ. ದೆಹಲಿಯಲ್ಲಿ 1313 ಪ್ರಕರಣಗಳು ವರದಿಯಾಗಿವೆ.

2423 ಪ್ರಕರಣಗಳು ಬೆಳಕಿಗೆ ಬಂದಿರುವ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ನೆರೆಯ ತಮಿಳುನಾಡಿನಲ್ಲಿ 890 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಕರ್ನಾಟಕದಲ್ಲಿ 707 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಸೆಪ್ಟೆಂಬರ್ 26ರ ಬಳಿಕ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.

ರಾಜಸ್ಥಾನ (ಶೇಕಡ 92ರಷ್ಟು ಹೆಚ್ಚಳ), ಬಿಹಾರ (71%), ಪಂಜಾಬ್ (67%), ಉತ್ತರಪ್ರದೇಶ (64%), ಗೋವಾ (54%), ಮಧ್ಯಪ್ರದೇಶ (50%), ಛತ್ತೀಸ್‌ಗಢ (42%), ಜಾರ್ಖಂಡ್ (40%) ಮತ್ತು ಹರ್ಯಾಣ (38%) ರಾಜ್ಯಗಳಲ್ಲೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News