ಬಿಸಿಯೂಟ: ಶೇ.16ರಷ್ಟು ವಿದ್ಯಾರ್ಥಿಗಳೊಳಗೆ ಜಾತಿ ಗುಂಪುಗಾರಿಕೆ

Update: 2022-01-03 02:36 GMT

ಬೆಂಗಳೂರು, ಜ.2: ಜಾತಿ ತಾರತಮ್ಯವನ್ನು ಹೋಗಲಾಡಿಸಿ ಸಾಮಾಜಿಕವಾಗಿ ಸಮನ್ವಯತೆ ಸಾಧಿಸುವ ಆಶಯ ಹೊಂದಿರುವ ಮಧ್ಯಾಹ್ನ ಬಿಸಿಯೂಟ ಸೇವಿಸುವ ಮಕ್ಕಳ ಪೈಕಿ ಶೇ.16ರಷ್ಟು ಮಕ್ಕಳು ತಮ್ಮ ಜಾತಿ ಸಂಬಂಧ ಗುಂಪುಗಳೊಂದಿಗೆ ಕುಳಿತುಕೊಳ್ಳುತ್ತಿದ್ದಾರೆ ಎಂಬ ಸಂಗತಿಯನ್ನು ಅಧ್ಯಯನ ವರದಿ ಹೊರಗೆಡವಿದೆ. ಕರ್ನಾಟಕದಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯ ಪ್ರಭಾವದ ಕುರಿತು (2016-17) ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಅಧ್ಯಯನ ನಡೆಸಿರುವ ಕಲಬುರಗಿಯಲ್ಲಿರುವ ಹೈದರಾಬಾದ್ ಕರ್ನಾಟಕ ಸೆಂಟರ್ ಫಾರ್ ಅಡ್ವಾನ್ಸ್ಡ್‌ಲರ್ನಿಂಗ್ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ಸರಕಾರಕ್ಕೆ ಸಲ್ಲಿಸಿರುವ ವರದಿಯು ಯೋಜನೆ ಅನುಷ್ಠಾನದ ಮೇಲೆ ಬೆಳಕು ಚೆಲ್ಲಿದೆ. ಈ ವರದಿ ಪ್ರತಿ ‘the-file.in’ಗೆ ಲಭ್ಯವಾಗಿದೆ.

ಈ ಂಸ್ಥೆಯು ಸ್ಥಳ ಸಮೀಕ್ಷೆ ಮೂಲಕ ಸರಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಭಾವದ ಕುರಿತು ಅಧ್ಯಯನ ನಡೆದೆ. ಶೇ.75.2ರಷ್ಟು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಕುಳಿತುಕೊಳ್ಳುತ್ತಾರೆ. ಶೇ.16ರಷ್ಟು ವಿದ್ಯಾರ್ಥಿಗಳು ತಮ್ಮ ಜಾತಿ ಸಂಬಂಧ ಗುಂಪುಗಳೊಂದಿಗೆ ಕುಳಿತುಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳಲ್ಲಿ ಜಾತಿ ತಾರತಮ್ಯವನ್ನು ಗಮನಿಸಲಾಗಿದೆ. ಸರಿಯಾದ ಸಮಾಲೋಚನೆ ಮೂಲಕ ಇದನ್ನು ಪ್ರೋತ್ಸಾಹಿಸದಂತೆ ನೋಡಿಕೊಳ್ಳಬೇಕಿದೆ. ಅವರು ಅದೇ ಪ್ರದೇಶದಿಂದ ಶಾಲೆಗೆ ಪ್ರಯಾಣಿಸಬಹುದು ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬಹುದು. ಯಾವುದೇ ಪ್ರಜ್ಞಾಪೂರ್ವಕ ಜಾತಿ ಆದ್ಯತೆ ಇಲ್ಲದಿರಬಹುದು. ಶೇ.8.8ರಷ್ಟು ವಿದ್ಯಾರ್ಥಿಗಳು ಸ್ವತಂತ್ರರು. ಅವರು ಯಾರೊಂದಿಗಾದರೂ ಕುಳಿತುಕೊಳ್ಳುತ್ತಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಪ್ರಮಾಣ ಹೆಚ್ಚು ಇರುತ್ತದೆ. ಕಲಬುರಗಿ ವಿಭಾಗದ ನಿರ್ದಿಷ್ಟ ವಿದ್ಯಾರ್ಥಿಗಳಲ್ಲಿ ಮತ್ತು ಬೆಂಗಳೂರು, ಬೆಳಗಾವಿ ವಿಭಾಗದ ಶಾಲೆಗಳು ಇದನ್ನು ಗಮನಹರಿಸಬೇಕಾಗಿದೆ ಎಂದು ಮೌಲ್ಯಮಾಪನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸಹಪಾಠಿಗಳೊಂದಿಗೆ ಕುಳಿತುಕೊಳ್ಳುವವರಲ್ಲಿ ಪ್ರತಿ ದಿನ ಒಂದೇ ಸಹಪಾಠಿಗಳೊಂದಿಗೆ ಕುಳಿತುಕೊಳ್ಳುವುದಿಲ್ಲ. ಶೇ.61.9ರಷ್ಟು ಮಂದಿ ಸ್ಥಳಗಳನ್ನು ಬದಲಾಯಿಸುತ್ತಾರೆ. ಸ್ಥಳಗಳನ್ನು ಬದಲಾಯಿಸುವುದು ಬೆಂಗಳೂರಿನಲ್ಲಿ ಹೆಚ್ಚು ಮತ್ತು ಮೈಸೂರು ವಿಭಾಗದಲ್ಲಿ ಕಡಿಮೆ. ರಾಜ್ಯ ಸರಾಸರಿಗಿಂತ ಕಡಿಮೆ ಇದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

34 ಶೈಕ್ಷಣಿಕ ಜಿಲ್ಲೆಗಳ 102 ತಾಲೂಕುಗಳನ್ನು ಒಳಗೊಂಡ 510 ಶಾಲೆಗಳ 5,158 ವಿದ್ಯಾರ್ಥಿ ಗಳು, 2,621 ಪೋಷಕರು, 76 ಶಿಕ್ಷಣಾಧಿ ಕಾರಿಗಳು, 10 ಸರಕಾರೇತರ ಸಂಸ್ಥೆಗಳನ್ನು ಒಳಗೊಂಡಿರುವ ಈ ಅಧ್ಯಯನವು ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ಶಿಕ್ಷಣ ಇಲಾಖೆಯು ವರದಿಯಲ್ಲಿನ ಪ್ರಮುಖ ಶಿಫಾರಸುಗಳನ್ನು ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ ಎಂದು ತಿಳಿದುಬಂದಿದೆ. ವಿಶೇಷವಾಗಿ ಹೆಚ್ಚಿನ ಮಟ್ಟದ ಬಡತನ ಹೊಂದಿರುವಂತಹ ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳಿಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಉಪಾಹಾರ ಒದಗಿಸಬೇಕು ಮತ್ತು ಗ್ರಾಮ ಪಂಚಾಯತ್ ಮಟ್ಟದ ಶಾಲೆಗಳೊಂದಿಗೆ ಎಲ್ಲಾ ಅಂಗನವಾಡಿಗಳನ್ನು ಶಿಕ್ಷಣದ ಸಮಗ್ರೀಕರಣಕ್ಕಾಗಿ ಸೇರಿಸಬೇಕು, ಏಕದಳ ಬೆಳೆ ಆಧರಿತ ಆಹಾರ ಒದಗಿಸಬೇಕು, ರಾಗಿ ಮುದ್ದೆ, ಜೋಳದ ರೊಟ್ಟಿ, ನವಣೆ, ಬಿಸಿ ಬೇಳೆಬಾತು ವಾರದಲ್ಲಿ 2ರಿಂದ 3 ದಿನಗಳವರೆಗೆ ಒದಗಿಸಬೇಕು ಎಂದು ಶಿಫಾರಸು ಮಾಡಿದೆ.

 ಪ್ರಾದೇಶಿಕ ಆಹಾರ ಪದ್ಧತಿಗಳನ್ನು ರೂಢಿಗತ ಮಾಡಬೇಕು ಹಾಗೂ ತಾಲೂಕು ಮಟ್ಟದ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಸ್ಪರ್ಧೆಗಳನ್ನು ಸಂಘಟಿಸಬೇಕು ಎಂದೂ ಶಿಫಾರಸು ಮಾಡಿದೆ.

ಅಲ್ಲದೆ ಮಧ್ಯಾಹ್ನ ಬಿಸಿಯೂಟದ ಉಸ್ತುವಾರಿ ಮತ್ತು ಮೌಲ್ಯಮಾಪನ ಅಧಿಕಾರಿಗಳಿಗೆ ತರಬೇತಿಯ ಪ್ರಸ್ತುತ ವಿಷಯಗಳಲ್ಲಿ ಆಹಾರದ ಕ್ಯಾಲೊರಿ ಶಕ್ತಿ, ಪೋಷಣೆಯ ಸಾಮರ್ಥ್ಯ ಮತ್ತು ಖನಿಜಾಂಶಗಳ ಜೊತೆಗೆ ಅವಧಿ ಮುಗಿಯುವುದರೊಳಗೆ ಪದಾರ್ಥಗಳನ್ನು ಮೊದಲಿಗೆ ಬಳಸುವ ಆರೋಗ್ಯ ರಕ್ಷಣೆಯ ವೈವಿಧ್ಯ ಆಹಾರ ಪಟ್ಟಿ ಇವುಗಳ ಕುರಿತು ಸೇರಿಸಬೇಕು ಎಂದಿದೆ.

  ರಾಜ್ಯದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೊಳಗೊಂಡಂತೆ 54,839 ಸರಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 53.48 ಲಕ್ಷ (2018-19 ಸಾಲಿನ ದತ್ತಾಂಶ) ಮಕ್ಕಳಿಗೆ ಬಿಸಿ ತಾಜಾ ಅಡುಗೆ ಮಾಡಿದ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಈ ಅಂಕಿ ಅಂಶವು ಒಟ್ಟು ದಾಖಲಾತಿಯಲ್ಲಿ ಶೇ.92ರಷ್ಟಿದೆ. ಈ ಅಧ್ಯಯನದ ವ್ಯಾಪ್ತಿಯಿಂದ ಹೊರಗಿರುವ 64,000 ಅಂಗನವಾಡಿ ಮಕ್ಕಳು ಮತ್ತು ಮದ್ರಸಗಳನ್ನೂ ಒಳಗೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

 ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು 60:40ರ ಅನುಪಾತದಲ್ಲಿ ಅನುದಾನ ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರಾಜ್ಯ ಸರಕಾರವು 2018-19ರ ಅವಧಿಯಲ್ಲಿ 1,465 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ರಕ್ತಹೀನತೆ ನಿರ್ಮೂಲನೆ, ಅಪೌಷ್ಟಿಕತೆಯ ನಿರ್ಬಂಧನೆ, ಆರೋಗ್ಯ ಮತ್ತು ಪೌಷ್ಟಿಕಾಂಶವನ್ನು ಉತ್ತೇಜಿಸುವುದು, ದಾಖಲಾತಿ ಹಾಗೂ ಉಳಿಸಿಕೊಳ್ಳುವಿಕೆ, ಅಧ್ಯಯನದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಲು ಪ್ರೋತ್ಸಾಹ ನೀಡುವುದು, ಕಲಿಕೆಯ ಸಾಧನ ಮಟ್ಟವನ್ನು ಉತ್ತೇಜಿಸುವುದು ಹಾಗೂ ಆಹಾರ ಭದ್ರತೆಯನ್ನು ಪೋಷಿಸುವುದು ಸಹ ಯೋಜನೆಯ ಮೂಲ ಉದ್ದೇಶವಾಗಿದೆ.

ಉಪಾಹಾರ ಒದಗಿಸುವುದಕ್ಕೆ ಶಿಫಾರಸು

ಬರ ಪೀಡಿತ ತಾಲೂಕುಗಳು ಸೇರಿದಂತೆ ರಾಜ್ಯಾದ್ಯಂತ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳೆಲ್ಲರಿಗೂ ಬೆಳಗಿನ ಉಪಾಹಾರ ಒದಗಿಸಬೇಕು ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಮಧ್ಯಾಹ್ನ ಬಿಸಿಯೂಟ ಯೋಜನೆ ಕುರಿತು ಮೌಲ್ಯಮಾಪನ ಮಾಡಿರುವ ಅಧ್ಯಯನ ಸಂಸ್ಥೆುು ಸರಕಾರಕ್ಕೆ ಶಿಫಾರಸು ಮಾಡಿದೆ.

ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಶಿರಸಿ, ಬಳ್ಳಾರಿ, ಕೊಪ್ಪಳ, ಹಾಸನ ಜಿಲ್ಲೆಗಳಲ್ಲಿನ ಮಕ್ಕಳಿಗೆ ಬೆಳಗಿನ ಉಪಾಹಾರ ದೊರಕುತ್ತಿಲ್ಲ. ಹೀಗಾಗಿ ಈ ಜಿಲ್ಲೆಗಳ ಮಕ್ಕಳೂ ಸೇರಿದಂತೆ ರಾಜ್ಯದ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳೆಲ್ಲರಿಗೂ ಬೆಳಗಿನ ಉಪಾಹಾರ ಒದಗಿಸಬೇಕು. ಇದನ್ನು ಬರಪೀಡಿತ ತಾಲೂಕುಗಳಿಂದಲೇ ಆರಂಭಿಸಬೇಕು ಎಂದು ಶಿಫಾರಸು ಮಾಡಿದೆ.

ಬೆಂಗಳೂರು ದಕ್ಷಿಣ, ಚಿಕ್ಕೋಡಿ, ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲಾ ಮಕ್ಕ ು ಮನೆಗಳಲ್ಲಿ ಬೆಳಗಿನ ಉಪಾಹಾರ ಪಡೆಯುತ್ತಾರೆ. ಎಂಬುದು ವರದಿಯಿಂದ ಗೊತ್ತಾಗಿದೆ.

ಬಹುಪಾಲು ಬಡ ಹಾಗೂ ಅನುಕೂಲರಹಿತ ಕುಟುಂಬ ಗಳು ಒಂದು ದಿನಕ್ಕೆ ಎರಡು ಹೊತ್ತಿನ ಸಂಪೂರ್ಣ ಊಟ ಕೊಡುತ್ತಿಲ್ಲ. ಪ್ರಮುಖವಾಗಿ ಕೃಷಿ ಕಾರ್ಮಿಕರು, ಕೌಶಲ್ಯರಹಿತ ಕಟ್ಟಡ ಕಾರ್ಮಿಕರು, ಕೂಲಿಗಳು, ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾಜಿಕ ಗುಂಪುಗಳ ಒಂದು ಭಾಗವಾಗಿರುವ ಕೆಳ ಮಟ್ಟದ ರೈತರು ಈ ವರ್ಗದಲ್ಲಿ ಸೇರಿದ್ದಾರೆ ಎಂದು ಮೌಲ್ಯಮಾಪನ ತಂಡ ಸರಕಾರಕೆ್ಕ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.

ಹಲವು ಕುಟುಂಬಗಳು ಮಕ್ಕಳಿಗೆ ಸಮರ್ಪಕ ಆಹಾರ ಒದಗಿಸಲು ಅನುಕೂಲತೆಗಳನ್ನು ಹೊಂದಿಲ್ಲ. ಇದು ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ಆಹಾರ ಭದ್ರತೆ ಒದಗಿಸುವಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯು ಅತ್ಯಂತ ಪ್ರಮುಖವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇ.7.7ರಷ್ಟು ಅಡುಗೆಯವರು ಚರ್ಮದ ಸಮಸ್ಯೆಯನ್ನು ಹೊಂದಿದ್ದಾರೆ. ಶೇ. 21.36 ಶಾಲೆಗಳಲ್ಲಿ ಅಡುಗೆಯವರ ವೈದ್ಯಕೀಯ ತಪಾಸಣೆ ನಡೆಸಿರುವುದಿಲ್ಲ. ಶೇ. 33.83 ಶಾಲೆಗಳು ಅಡುಗೆಯವರ ಆರೋಗ್ಯ ದಾಖಲೆ ಪುಸ್ತಕ ನಿರ್ವಹಿಸಿರುವುದಿಲ್ಲ ಎಂದು ವರದಿಯು ಬೆಳಕು ಚೆಲ್ಲಿದೆ.

ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಗದಗ, ಚಾಮರಾಜ ನಗರ ಜಿಲ್ಲೆಗಳಲ್ಲಿನ ಶಾಲೆಗಳ ಅಡುಗೆ ಕೋಣೆಗಳು ಸ್ವಚ್ಛತೆ ಯಿಂದ ಕೂಡಿಲ್ಲ. ಹಲ್ಲಿಗಳು ಮತ್ತು ಜಿರಳೆಗಳನ್ನು ಗಮನಿ ಸಲಾಗಿದೆ. ಈ ಜಿಲ್ಲೆಗಳಲ್ಲಿ ಸ್ವಚ್ಛತೆಯ ಕಾಳಜಿ ಇಲ್ಲ. ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಮಧುಗಿರಿ, ಧಾರವಾಡ, ಉತ್ತರ ಕನ್ನಡ, ವಿಜಯಪುರ, ಬಳ್ಳಾರಿ, ಕಲಬುರಗಿ, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲೆಗಳಲ್ಲಿ ಅಡುಗೆ ಮಾಡಿದ ನಂತರ ಕೋಣೆ ಗಳನ್ನು ಸ್ವಚ್ಛಗೊಳಿಸುವುದಿಲ್ಲ ಎಂದು ವಿವರಿಸಲಾಗಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News