ಬೆಂಗಳೂರು: ಹೂಡಿಕೆ ನೆಪದಲ್ಲಿ ವಂಚನೆ; ಪ್ರಕರಣ ದಾಖಲು

Update: 2022-01-03 18:03 GMT

ಬೆಂಗಳೂರು, ಜ.3: ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್, ಟ್ರಾವೆಲ್ ಪ್ಯಾಕೇಜಿಂಗ್‍ನಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ.ಗಳ ಲಾಭ ಕೊಡುವುದಾಗಿ ನಂಬಿಸಿ ಖಾಸಗಿ ಕಂಪೆನಿಯ ನೌಕರನಿಗೆ 12.59 ಲಕ್ಷ ರೂ.ಗಳ ವಂಚನೆ ನಡೆಸಿರುವ ಘಟನೆ ಯಲಹಂಕದಲ್ಲಿ ನಡೆದಿದೆ. 

ವಂಚನೆಗೊಳಗಾದ ಯಲಹಂಕದ ನಿವಾಸಿ ಮಲ್ಲೇಶ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪ್ರಮೋದ್ ವಿರುದ್ಧ ಯಲಹಂಕ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಮಲ್ಲೇಶ್ ಖಾಸಗಿ ಕಂಪೆನಿ ನೌಕರನಾಗಿದ್ದು, ಕೆಲ ವರ್ಷಗಳ ಹಿಂದೆ ಇವರಿಗೆ ಆರೋಪಿ ಪ್ರಮೋದ್ ಪರಿಚಯವಾಗಿತ್ತು. ಆಗ ತಾನು ಎಂಟರ್‍ಪ್ರೈಸಸ್ ಹೆಸರಿನ ಟ್ರಾವೆಲ್ಸ್ ಕಚೇರಿ ನಡೆಸುತ್ತಿದ್ದು, ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್ ಮಾರಾಟ, ಟ್ರಾವೆಲ್ ಪ್ಯಾಕೇಜಿಂಗ್ ಮಾಡಿಕೊಂಡಿದ್ದೇನೆ.

ಇದರಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಪಡೆದುಕೊಳ್ಳಬಹುದು ಎಂದು ನಂಬಿಸಿ ಆತನಿಂದ 1.32 ಲಕ್ಷ ರೂ. ಪಡೆದುಕೊಂಡಿದ್ದ. ಇದಾದ ಸ್ವಲ್ಪ ದಿನಗಳ ಬಳಿಕ ಮಲ್ಲೇಶ್‍ಗೆ ಕರೆ ಮಾಡಿದ ಪ್ರಮೋದ್, ಈಗಾಗಲೇ ಹೂಡಿಕೆ ಮಾಡಿರುವ ಹಣದ ಲಾಭಾಂಶ ಬರುತ್ತದೆ. ಮತ್ತೊಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಪಡೆಯಬಹುದು ಎಂದು ನಂಬಿಸಿ ಹಂತ-ಹಂತವಾಗಿ ಮಲ್ಲೇಶ್‍ನಿಂದ 12.59 ಲಕ್ಷ ರೂ.ನ್ನು ಹೂಡಿಕೆ ಮಾಡಿಸಿದ್ದ.

ನಂತರ ಯಾವುದೇ ಲಾಭಾಂಶ ಕೊಡದೇ ಇದ್ದಾಗ ತಾನು ಕೊಟ್ಟ ಹಣ ಹಿಂತಿರುಗಿಸುವಂತೆ ಮಲ್ಲೇಶ್ ಹೇಳಿದ್ದ. ಇದಾದ ಬಳಿಕ ಆರೋಪಿ ಪ್ರಮೋದ್ ಮೊಬೈಲ್ ಸಂಕರ್ಪ ಕಡಿತಗೊಳಿಸಿ ಪರಾರಿಯಾಗಿದ್ದಾನೆ. ಅಸಲನ್ನೂ ನೀಡದೆ, ಲಾಭಾಂಶವನ್ನೂ ಕೊಡದೆ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಪ್ರಮೋದ್ ಇದೇ ಮಾದರಿಯಲ್ಲಿ ಧನಂಜಯ್, ಪ್ರಿಯಾಂಕ ಮಿಶ್ರಾ ಹಾಗೂ ಭುವನೇಶ್ವರಿ ಎಂಬುವವರಿಗೂ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ಸಂತ್ರಸ್ತ ಮಲ್ಲೇಶ ದೂರಿನಲ್ಲಿ ಆರೋಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News