ಭದ್ರತಾ ಲೋಪ ವಿವಾದ: ಉನ್ನತ ಮಟ್ಟದ ಸಮಿತಿ ರಚಿಸಿದ ಪಂಜಾಬ್ ಸರಕಾರ; ಸುಪ್ರೀಂನಲ್ಲಿ ನಾಳೆ ವಿಚಾರಣೆ
Update: 2022-01-06 06:18 GMT
ಹೊಸದಿಲ್ಲಿ: ಪಂಜಾಬ್ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಉಂಟಾದ ಭದ್ರತ ಲೋಪ ಕುರಿತಾದ ವಿವಾದ ಇದೀಗ ಸುಪ್ರೀಂ ಕೋರ್ಟ್ ತಲುಪಿದ್ದು ನಾಳೆ ಅದರ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇನ್ನೊಂದೆಡೆ ಘಟನೆಯ ತನಿಖೆ ನಡೆಸಲು ಪಂಜಾಬ್ ಸರಕಾರ ಉನ್ನತ ಮಟ್ಟದ ತಂಡವನ್ನು ರಚಿಸಿದ್ದು ಮೂರು ದಿನಗಳೊಳಗಾಗಿ ಸಮಿತಿ ತನ್ನ ವರದಿ ನೀಡುವ ನಿರೀಕ್ಷೆಯಿದೆ.
ಪಂಜಾಬ್ ಸರಕಾರದ ದ್ವಿಸದಸ್ಯ ಸಮಿತಿಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನಿವೃತ್ತ ಜಸ್ಟಿಸ್ ಮೆಹ್ತಾಬ್ ಗಿಲ್ ಹಾಗೂ ಗೃಹ ವ್ಯವಹಾರಗಳ ಮತ್ತು ನ್ಯಾಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅನುರಾಗ್ ವರ್ಮ ಇದ್ದಾರೆ.
ಪ್ರಧಾನಿ ಕಾರು ಫ್ಲೈಓವರಿನಲ್ಲಿ 20 ರಿಂದ 30 ನಿಮಿಷಗಳ ಕಾಲ ಸಿಲುಕಿಕೊಂಡು ಉಂಟಾದ 'ಭದ್ರತಾ ಲೋಪ' ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.