ಸರಕಾರದಿಂದ ರಾಜಕೀಯಕ್ಕಾಗಿ ಅವೈಜ್ಞಾನಿಕ ಲಾಕ್‍ಡೌನ್: ಡಿ.ಕೆ.ಶಿವಕುಮಾರ್

Update: 2022-01-07 15:10 GMT

ಬೆಂಗಳೂರು, ಜ.7: ಬಿಜೆಪಿ ಸರಕಾರ ವಿಜ್ಞಾನ, ತಾಂತ್ರಿಕತೆ ಬಗ್ಗೆ ಮಾತಾಡುತ್ತಿಲ್ಲ, ಅವರು ಕೇವಲ ರಾಜಕೀಯದ ಬಗ್ಗೆ ಮಾತಾಡುತ್ತಿದ್ದಾರೆ. ಇಡೀ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳ ಬಂದ್ ಇಲ್ಲ. ಕೇವಲ ರಾಮನಗರದಲ್ಲಿ ಮಾತ್ರ ಬಂದ್ ಮಾಡಿದ್ದಾರೆ. ರಾಜ್ಯದಲ್ಲಿನ ಪಾಸಿಟಿವಿಟಿ ಬಗ್ಗೆ ನಮ್ಮ ಮಾಜಿ ಆರೋಗ್ಯ ಸಚಿವರು ತನಿಖೆ ಮಾಡಿದ್ದು, ಇದು ಕೋವಿಡ್ ಕರ್ಫ್ಯೂಅಲ್ಲ, ಬಿಜೆಪಿ ಕರ್ಫ್ಯೂ. ಎಲ್ಲ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಲಾಕ್‍ಡೌನ್‍ನಿಂದಾಗಿ ಹಿಂದೆ 12 ಕೋಟಿ ಜನ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲಿ 1 ಕೋಟಿ ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ದಾಖಲೆಗಳಿವೆ. ಈ ರೀತಿ ಬಿಜೆಪಿ ಜನವಿರೋಧಿ ನೀತಿ ತೆಗೆದುಕೊಂಡಿದೆ. ಅವೈಜ್ಞಾನಿಕ ಲಾಕ್‍ಡೌನ್‍ನಿಂದ ರಾಜ್ಯದ ಆದಾಯದ ಮೇಲೂ ಇದು ಕೆಟ್ಟ ಪರಿಣಾಮ ಬೀರಿದೆ. ಸುಮಾರು ಶೇ.14.46 ರಷ್ಟು ಅಂದರೆ 78 ಸಾವಿರ ಕೋಟಿಯಷ್ಟು ಹೆಚ್ಚುವರಿ ಸಾಲ ಮಾಡಲಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ ಎಂದರು.

ರಾಜ್ಯದ ಇತಿಹಾಸದಲ್ಲಿ ಇಂತಹ ದ್ವೇಷದ ರಾಜಕಾರಣ ನಾವು ಎಂದೂ ನೋಡಿಲ್ಲ. ರಾಜ್ಯದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಪರಿಸ್ಥಿತಿ ಗಂಭೀರವಾಗಿದ್ದರೆ ಹೇಳಿ ನಾವು ಕೂಡ ಗೌರವದಿಂದ ಕೇಳುತ್ತೇವೆ. ಏನು ಇಲ್ಲದೇ ಈ ರೀತಿ ರಾಜಕಾರಣ ಮಾಡುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ. ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ರಾಮನಗರದಲ್ಲಿ ಒಂದು ಸಾವಾಗಿದೆಯಾ ಬನ್ನಿ ತೋರಿಸಿ. ಯಾರಾದರೂ ಐಸಿಯುನಲ್ಲಿದ್ದರೆ ತೋರಿಸಿ. ನಿನ್ನೆ 76 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಮಾತ್ರ ಸತ್ತಿದ್ದಾರೆ. ನಾವು ಕೂಡ ಆಸ್ಪತ್ರೆಯ ಪರಿಸ್ಥಿತಿ ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದೇವೆ. ಕರ್ನಾಟಕದಲ್ಲಿ ಆರ್ಥಿಕತೆ ಹಾಳಾಗುತ್ತಿದ್ದರೂ ಯಾಕೆ ಈ ರೀತಿ ಮಾಡುತ್ತಿದ್ದಾರೆ, ಇವರಿಗೆ ರಾಜಕೀಯವೇ ಹೆಚ್ಚಾಯ್ತಾ? ಎಂದು ದೇಶದ ಜನ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ನಿರ್ಬಂಧದಿಂದ ತಮಗಾಗುವ ನಷ್ಟವನ್ನು ತೋಡಿಕೊಂಡು ಕಣ್ಣೀರಿಡುವ ವಿಡಿಯೋಗಳು ಬರುತ್ತಿವೆ. ಜನ ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಈ ಸರಕಾರ ಎಲ್ಲ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದೆ. ಇನ್ನು ನಮ್ಮ ಯುವಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವಂತೆ ಆಂದೋಲನ ಮಾಡುವ ಚಿಂತನೆ ನಡೆಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಕೋವಿಡ್ ಪ್ರಕರಣ ಹೆಚ್ಚಳ ವಿಚಾರವಾಗಿ ಸರಕಾರ ನೀಡುತ್ತಿರುವ ಅಂಕಿಅಂಶ ಬೋಗಸ್, ಈ ವಿಚಾರವಾಗಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಕಳೆದ ಬಾರಿ 4 ಲಕ್ಷ ಜನ ಸತ್ತರೂ ಪರಿಹಾರ ನೀಡಬೇಕಾಗುತ್ತದೆ ಎಂದು ಕೇವಲ 40 ಸಾವಿರ ಸಾವು ಎಂದು ಹೇಳಿ 1 ಲಕ್ಷ ಪರಿಹಾರ ಘೋಷಿಸಿದರು. ರಾಜ್ಯದ ಯಾವ ಜಿಲ್ಲೆಯಲ್ಲಿ ಐಸಿಯು, ವೆಂಟಿಲೇಟರ್‍ನಲ್ಲಿ ಜನ ಇದ್ದಾರೆ ತೋರಿಸಿ ಎಂದು ಅವರು ಸವಾಲು ಹಾಕಿದರು.

ಪೂರ್ವನಿಗದಿಯಂತೆ ಪಾದಯಾತ್ರೆ ನಡೆಯುತ್ತದೆಯೇ ಎಂಬ ಪ್ರಶ್ನೆಗೆ, ‘ಈ ಪಾದಯಾತ್ರೆಗೆ ನಾವು ನಿಮಗೆ ಆಹ್ವಾನ ಕಳುಹಿಸುತ್ತೇವೆ, ಬಂದು ನಿಮ್ಮ ಕಣ್ಣಾರೆ ನೋಡಿ. ನಾವು ಕಾನೂನು ಬದ್ಧವಾಗಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಪಾದಯಾತ್ರೆ ಮಾಡುತ್ತೇವೆ’ ಎಂದರು.

ನಮ್ಮ ಮಾಜಿ ಆರೋಗ್ಯ ಸಚಿವರು ಹಾಗೂ ವೈದ್ಯರ ತಂಡದ ಮೂಲಕ ಬೆಂಗಳೂರು, ರಾಮನಗರ, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರಿಯಾಲಿಟಿ ಚೆಕ್ ಮಾಡಿಸಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಕೋವಿಡ್ ಸೋಂಕಿತರು ಇದ್ದಾರೆ, ಅವರಲ್ಲಿ ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ ಎಷ್ಟು ಮಂದಿ ವೆಂಟಿಲೇಟರ್ ಹಾಗೂ ಐಸಿಯುನಲ್ಲಿ ಇದ್ದಾರೆ ಎಂಬ ಮಾಹಿತಿ ಕಲೆ ಹಾಕಿದ್ದೇವೆ ಎಂದು ಅವರು ಹೇಳಿದರು.

2ನೇ ಅಲೆಯಲ್ಲಿ ಆಕ್ಸಿಜನ್ ಬೇಡಿಕೆ 800 ಮೆಟ್ರಿಕ್ ಟನ್ ಇತ್ತು, ಶೇ.40 ರಷ್ಟು ಆಸ್ಪತ್ರೆ ಬೆಡ್ ತುಂಬಿದ್ದವು. ಈಗ ವೀಕೆಂಡ್ ಕರ್ಫ್ಯೂಹೇರಿದ್ದಾರೆ. ಈ ಹಿಂದೆ ಈ ಪ್ರಮಾಣ ಶೇ.5 ಆದರೆ ಲಾಕ್‍ಡೌನ್ ಮಾಡುವುದಾಗಿ ಹೇಳಿದ್ದರು. ಕಳೆದ ವರ್ಷ ಯಡಿಯೂರಪ್ಪ ಸರಕಾರ ಲಾಕ್‍ಡೌನ್ ಮಾಡಿದಾಗ ಶೇ.33ರಷ್ಟು ಇತ್ತು. ಅಂದರೆ ಈಗಿನ ದರಕ್ಕಿಂತ 10 ಪಟ್ಟು ಹೆಚ್ಚಿತ್ತು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯದ್ದು ಲಾಜಿಕ್ ಇಲ್ಲದ, ರಾಜಕೀಯ ಪ್ರೇರಿತ ಕಫ್ರ್ಯೂ: ಒಮೈಕ್ರಾನ್ ಸಂಬಂಧಿಸಿದಂತೆ ಸರಕಾರ ಸದುದ್ದೇಶದಿಂದ ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಬೆಂಬಲಿಸುತ್ತಾರೆ. ಆದರೆ ದುರುದ್ದೇಶದ ತೀರ್ಮಾನಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಸರಕಾರ ಈಗ ತೆಗೆದುಕೊಂಡಿರುವ ನೈಟ್ ಕರ್ಫ್ಯೂಹಾಗೂ ವೀಕೆಂಡ್ ಲಾಕ್‍ಡೌನ್ ಜನವಿರೋಧಿ ತೀರ್ಮಾನ ಎಂದು ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಕೋವಿಡ್ ಸಂಬಂಧಿಸಿದಂತೆ ಸರಕಾರ ವಿಜ್ಞಾನದ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು, ರಾಜಕೀಯ ಮಾಡಬಾರದು. ಯಾವುದೇ ಲಾಕ್‍ಡೌನ್ ಅಥವಾ ಕರ್ಫ್ಯೂತೀರ್ಮಾನ ತೆಗೆದುಕೊಳ್ಳುವಾಗ ಎಷ್ಟು ಪಾಸಿಟಿವ್ ಪ್ರಕರಣ ಬರುತ್ತದೆ, ಅದರಲ್ಲಿ ಶೇ.ರಷ್ಟು ಜನ ಆಕ್ಸಿಜನ್ ಬೆಡ್ ಅಥವಾ ಐಸಿಯುಗೆ ದಾಖಲಾದರೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾನದಂಡವಿದೆ ಎಂದು ಅವರು ಹೇಳಿದರು.

ಲಾಕ್‍ಡೌನ್, ಕರ್ಫ್ಯೂ ನಿಂದ ಒಮೈಕ್ರಾನ್ ನಿಯಂತ್ರಣ ಆಗುವುದಿಲ್ಲ, ಅದು ಕೇವಲ ಪೂರ್ವಸಿದ್ಧತೆಗೆ ಸಮಯ ಕಲ್ಪಿಸುತ್ತದೆ. ಈಗ ಪಾಸಿಟಿವ್ ದರ ಶೇ.3ರಷ್ಟಿದೆ. ಇದರಲ್ಲಿ ಆಕ್ಸಿಜನ್ ಹಾಗೂ ಐಸಿಯು ಬೆಡ್‍ನಲ್ಲಿ ಹೆಚ್ಚಿನ ಜನ ಇಲ್ಲ. ಇಂದು ಶೇ.95ರಷ್ಟು ಜನ ಪಾಸಿಟಿವ್ ಬಂದರೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬರುವ ಅಗತ್ಯವೇ ಇಲ್ಲವಾಗಿದೆ ಎಂದು ಅವರು ಹೇಳಿದರು.

ಈ ಸಮಯದಲ್ಲಿ ಲಾಕ್‍ಡೌನ್, ಕರ್ಫ್ಯೂತಂದು ಜನರ ಮೇಲೆ ಕಷ್ಟ ಹೇರುವ ಸರಕಾರದ ಉದ್ದೇಶ ಎಂತಹದ್ದು? ಎಂದು ಜನರಿಗೆ ತಿಳಿಸಬೇಕು. ನಾನು ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗುವುದಾದರೆ, ನೀವು ಈ ನಿಬರ್ಂಧ ಹಾಕುವ ಉದ್ದೇಶವೇನು? ಇದರಿಂದಾಗುವ ಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮಕ್ಕೆ ಸರಕಾರವೇ ಹೊಣೆ ಹೊರಬೇಕು ಎಂದು ಖಾದರ್ ಹೇಳಿದರು.

ಸರಕಾರದ ಕರ್ಫ್ಯೂನಿರ್ಧಾರ ಲಾಜಿಕ್ ಹಾಗೂ ವಿಜ್ಞಾನದ ನಿರ್ಧಾರವಲ್ಲ, ಕೇವಲ ರಾಜಕೀಯ ಪ್ರೇರಿತ ನಿರ್ಧಾರ. ಜನ ಇದ್ಯಾವುದನ್ನೂ ಮರೆಯುವುದಿಲ್ಲ. ಕೆಲವು ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಯಾರೂ ದಾಖಲಾಗಿಲ್ಲವಾದರೂ ಆ ಜಿಲ್ಲೆಯಲ್ಲಿ ನಿರ್ಬಂಧ ಹಾಕುವುದರಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿ ಏನಾಗಬೇಕು? ಅದಕ್ಕಾಗಿ ಹೀಗಾಗಿ ಯಾವುದೇ ಸರಕಾರದ ತೀರ್ಮಾನ ಪರಿಸ್ಥಿತಿ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಆದರೆ ರಾಜ್ಯ ಸರಕಾರ ಜನ ವಿರೋಧಿ ನೀತಿಯಾಗಿದೆ ಎಂದು ಅವರು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಎಐಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ವಿಧಾನಸಭೆ ಮುಖ್ಯ ಸಚೇತಕ ಅಜಯ್ ಸಿಂಗ್, ಮಾಜಿ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಶಾಸಕ ಶರತ್ ಬಚ್ಚೇಗೌಡ, ಕೆಪಿಸಿಸಿ ಕಾನೂನು ಘಟಕ ಮುಖ್ಯಸ್ಥ ಪೊನ್ನಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News