×
Ad

ಸಂವಿಧಾನ ಉಳಿವಿಗೆ ಜಾಗೃತಿ ಅಭಿಯಾನ ಅಗತ್ಯ: ರಾಜರತ್ನ ಅಂಬೇಡ್ಕರ್

Update: 2022-01-13 18:53 IST

ಬೆಂಗಳೂರು, ಜ.13: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಉಳಿವಿಗೆ ಪ್ರತಿ ಹಳ್ಳಿಯಲ್ಲೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು  ಸಂವಿಧಾನ ಸುರಕ್ಷಾ ಆಂದೋಲನದ ನೇತಾರ, ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ.

ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಸಂವಿಧಾನ ಸುರಕ್ಷಾ ಆಂದೋಲನದ ಕರ್ನಾಟಕ ಘಟಕವನ್ನು ರಚಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ರೀತಿಯ ಸ್ವರೂಪದಲ್ಲಿ ಸಂವಿಧಾನಕ್ಕೆ ಕುಂದುಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನದ ಪ್ರಸ್ತಾವನೆಯನ್ನೂ ಬದಲಿಸುವಂತಹ ಪ್ರಯತ್ನಗಳು ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿವೆ. ಗ್ರಾಮ ಗ್ರಾಮಗಳಲ್ಲೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

ಅಹಿಂದ ಅಸ್ತಿತ್ವವೇ ಸಂವಿಧಾನದ ಮೇಲೆ ನಿಂತಿದೆ. ಸಂವಿಧಾನಕ್ಕೆ ಕುಂದುಂಟಾದರೆ ಈ ಸಮುದಾಯಗಳ ಅಸ್ತಿತ್ವಕ್ಕೆ ಅಪಾಯ ಎದುರಾಗುತ್ತದೆ. ಜನಪರವಾದ ಎಲ್ಲ ಹೋರಾಟಗಳೂ ಸಂವಿಧಾನದ ಬಲದಿಂದಲೇ ಗೆಲುವು ಸಾಧಿಸಿವೆ. ಈಗ ಸಂವಿಧಾನವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳುವುದಕ್ಕೆ ಬಲವಾದ ಹೋರಾಟ ರೂಪಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅದೆಲ್ಲವನ್ನೂ ಸಂಘಟಿತವಾಗಿ ವಿರೋಧಿಸುವುದು ಈ ಆಂದೋಲನದ ಗುರಿ’ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸಂವಿಧಾನದ ಬಲದಲ್ಲೇ ಭಾರತ ನಿಂತಿದೆ. ಈಗ ಶಿಕ್ಷಣ, ಉದ್ಯೋಗ ಮತ್ತು ಇತರ ಹಕ್ಕುಗಳನ್ನು ದಮನಿಸುವ ಮೂಲಕ ಬಹುಸಂಖ್ಯಾತ ಜನರನ್ನು ಅಂಚಿಗೆ ತಳ್ಳುವ ಪ್ರಯತ್ನ ನಡೆದಿದೆ. ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ಈ ಜನರ ಹಕ್ಕುಗಳನ್ನು ರಕ್ಷಿಸಲು ಸಾಧ್ಯ. ಅದಕ್ಕಾಗಿ ಪ್ರತಿರೋಧ ರೂಪಿಸಲಾಗುವುದು ಎಂದು ಹೇಳಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಶ್ರೀ ಮಾತನಾಡಿ, ಸಂವಿಧಾನ ಮತ್ತು ಅದರ ಆಶಯಗಳಿಗೆ ವಿರುದ್ಧವಾದ ಕಾನೂನುಗಳನ್ನು ತರಲಾಗುತ್ತಿದೆ. ಇಂಥ ಪ್ರಯತ್ನಗಳನ್ನು ಬಲವಾಗಿ ವಿರೋಧಿಸಲೇಬೇಕಾಗಿದೆ ಎಂದರು.

ಸಂಚಾಲನಾ ಸಮಿತಿ ರಚನೆ: ಕರ್ನಾಟಕದಲ್ಲಿ ಸಂವಿಧಾನ ಸುರಕ್ಷಾ ಆಂದೋಲನವನ್ನು ಮುನ್ನಡೆಸುವುದಕ್ಕಾಗಿ ಸಂಚಾಲನಾ ಸಮಿತಿಯನ್ನು ರಚಿಸಲಾಯಿತು. ಡಾ.ಸಿ.ಎಸ್.ದ್ವಾರಕಾನಾಥ್ ಸೇರಿ 21 ಸದಸ್ಯರು ಸಮಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News