‘ಜೋ ವಾದಾ ಕಿಯಾ...!’

Update: 2022-01-14 09:16 GMT

‘ಕೇಂದ್ರ ಸಾಹಿತ್ಯ ಅಕಾಡಮಿ’ಯ ಇತಿಹಾಸದಲ್ಲಿ, ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದಿರುವ ಬೊಳುವಾರು ಮಹಮದ್ ಕುಂಞಿಯವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಕುವೆಂಪು ಬಂಗಾರದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತಕರ ಪದವೀಧರರು. ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಗೌರವ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿಗಳನ್ನು ಗಳಿಸಿದ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದಲೂ ಸನ್ಮಾನಿತರು. ಕೊಲ್ಕತ್ತಾದ ಭಾರತೀಯ ಭಾಷಾ ಸನ್ಮಾನ್, ದೆಹಲಿಯ ಕಥಾ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕಾರಂತ ಬಾಲವನ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರಶಸ್ತಿ..., ಹೀಗೆ ಹತ್ತಾರು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟವರು. ಆರು ಕಥಾ ಸಂಕಲನಗಳು, ಐದು ಕಾದಂಬರಿಗಳು, ಎರಡು ನಾಟಕಗಳು, ಎರಡು ಅನುವಾದಿತ ಕೃತಿಗಳು, ಒಂದು ಚಾರಿತ್ರಿಕ ದಾಖಲೆಯ ಕೃತಿ, ಮೂರು ಮಕ್ಕಳ ಪದ್ಯ ಸಂಪುಟಗಳ ಸಹಿತ ಎಂಟು ಕೃತಿಗಳನ್ನು ಸಂಪಾದಿಸಿದವರು. ಇವರ ಕತೆ, ಚಿತ್ರಕತೆಗಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ.

ಬೊಳುವಾರು ಮಹಮದ್ ಕುಂಞಿ

ಸಂಜೆಯಾಗುವಷ್ಟರಲ್ಲಿ ಈ ಆವೇಶಗಳು ದೆಹಲಿಯ ಕೆಲವು ಶಾಖೆಗಳಿಗೂ ತಲುಪಿತ್ತು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ, ನಮ್ಮ ದೇಶದ ಮೊತ್ತ ಮೊದಲ ಗ್ರಾಮೀಣ ಬ್ಯಾಂಕ್ ಆಗಿ ದಾಖಲೆ ಬರೆದ ‘ಪ್ರಥಮಾ ಬ್ಯಾಂಕ್’ ಅಧ್ಯಕ್ಷರಾದ ಡಾ. ದಿನಕರ ರಾಯರ ಕಿವಿಗೂ ಬಿದ್ದಿತ್ತು. ಆ ದಿನಗಳಲ್ಲಿ ಅವರು ನಮ್ಮ ಬ್ಯಾಂಕಿನ ‘ಆಗ್ರಾ’ದ ವಿಭಾಗೀಯ ಕಚೇರಿ ಮುಖ್ಯಸ್ಥರು. ಪ್ರಧಾನ ಕಚೇರಿಯಲ್ಲಿದ್ದ ದಿನಗಳಲ್ಲಿ ಪರಿಚಯವಾಗಿದ್ದ ಹೃದಯವಂತ ಗೆಳೆಯ ಆ ದಿನಕರ ರಾವ್. 

ಸಾರ್ವಜನಿಕ ಹಣದ ಉಸ್ತುವಾರಿ ನೋಡಿಕೊಳ್ಳುವ ಬ್ಯಾಂಕ್ ಅಧಿಕಾರಿಗಳಿಗೆ ಒಂದೇ ಊರಲ್ಲಿ ಹೆಚ್ಚು ದಿನ ಬದುಕುವ ಅಧಿಕಾರವಿರುವುದಿಲ್ಲ. ಮೂರು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಅವರೆಲ್ಲ ಸಂಸಾರ ಸಹಿತ ದೂರದೂರುಗಳಿಗೆ ಪೆಟ್ಟಿಗೆ ಕಟ್ಟಲೇಬೇಕು. ಆದರೆ, ಪ್ರಧಾನ ಕಚೇರಿಯ ‘ಪ್ರಚಾರ ವಿಭಾಗ’ದಲ್ಲಿದ್ದ ನಾನು, ಈ ವರ್ಗಾವಣೆಯ ಉರುಳಿನಿಂದ ಪ್ರತಿ ವರ್ಷವೂ ಹೇಗೋ ನುಸುಳಿಕೊಳ್ಳುತ್ತಿದ್ದೆ. ಆದರೆ, 1992ರಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದ್ದ ಹೊಸ ಬ್ಯಾಂಕಿಂಗ್ ನಿಯಮವೊಂದು, ನನ್ನ ನುಸುಳುವ ಶಕ್ತಿಯನ್ನೇ ನುಂಗಿಬಿಟ್ಟಿತ್ತು. ಕನಿಷ್ಠ ಮೂರು ವರ್ಷಗಳ ಸೇವಾವಧಿಯನ್ನು ಉತ್ತರ ಭಾರತದ ಯಾವುದಾದರೊಂದು ರಾಜ್ಯದಲ್ಲಿ ಪೂರೈಸಲೇಬೇಕು ಎಂಬ ಹೊಸ ರೂಲ್ಸ್ ಅದು. ಉಡುಪಿಯ ಸಾಂಸ್ಕೃತಿಕ ಜಗತ್ತನ್ನು ಬಿಟ್ಟು ಹೋಗಲು ನನಗೆ ಇಷ್ಟವಿಲ್ಲ. ಪ್ರೌಢ ಶಾಲೆಯ ಮೆಟ್ಟಲುಗಳ ಮೇಲೆ ಓಡಾಡುತ್ತಿದ್ದ ಮಕ್ಕಳಿಬ್ಬರಿಗೆ, ಅಪರಿಚಿತ ಊರಲ್ಲಿ ಓದು ಮುಂದುವರಿಸುವುದೂ ಕಷ್ಟ ಕಷ್ಟ. ಒಟ್ಟಾರೆ ಮಂಡೆಬಿಸಿ. ಅದೇ ದಿನಗಳಲ್ಲಿ ನನ್ನ ಬರಹಗಳ ಓದುಗರೂ, ಸುಪ್ರಸಿದ್ಧ ಆರ್ಥಿಕ ತಜ್ಞರೂ ಆಗಿದ್ದ ಡಾ. ಎನ್.ಕೆ. ತಿಂಗಳಾಯರು ಬ್ಯಾಂಕಿನ ನಿರ್ವಾಹಕ ನಿರ್ದೇಶಕ ಪಟ್ಟದಲ್ಲಿ ಕುಳಿತಿದ್ದರು. ‘ಸಾರ್, ಏನು ಮಾಡಲಿ?’ ಎಂದು ಪ್ರಶ್ನಿಸಿದಾಗ ಅವರು ನಗುತ್ತಾ ಹೇಳಿದ್ದು, ‘ನಾನಿರುವವರೆಗೆ ನಿಮ್ಮನ್ನು ಇಲ್ಲೇ ಉಳಿಸಿಕೊಳ್ಳಬಲ್ಲೆ. ಆದರೆ, ಆನಂತರ ಏನು ಮಾಡುತ್ತೀರಿ? ನಿಮಗೆ ಇನ್ನೂ ತುಂಬಾ ಸರ್ವಿಸ್ ಉಂಟು. ಒಂದಲ್ಲ ಒಂದು ದಿನ ನೀವು ಹೋಗಲೇಬೇಕು. ಆದ್ದರಿಂದ, ಈ ವರ್ಷವೇ ದೆಹಲಿಯ ರೆನಲ್ ಆಫೀಸಿನ ಪರ್ಸನಲ್ ಡಿಪಾರ್ಟ್‌ಮೆಂಟಿಗೆ ಹೋಗಿಬಿಡಿ. ಮೂರು ವರ್ಷಗಳ ಬಳಿಕ, ಮತ್ತೆ ಇಲ್ಲಿಗೇ ಕರೆಸಿಕೊಳ್ತೇನೆ. ನೀವು ಹೂಂ ಅಂದ್ರೆ, ನಿಮಗೊಂದು ಅಫೀಸರ್ ಕ್ವಾರ್ಟರ್ಸ್ ಕಾದಿರಿಸಲು ದೆಹಲಿಗೆ ಈವತ್ತೇ ಹೇಳಿಡ್ತೇನೆ.’ ನಾನು ‘ಹೂಂ’ ಎಂದಿದ್ದೆ. ‘ಗೀತಾ ಟ್ರಾನ್ಸ್ ಪೋರ್ಟ್’ನಲ್ಲಿ ಪುಸ್ತಕಗಳ ನಡುವೆ ಮನೆ ಸಾಮಾನುಗಳನ್ನು ತುಂಬಿಸಿ, ಹೆಂಡತಿ ಮಕ್ಕಳೊಂದಿಗೆ ದೆಹಲಿಗೆ ಹಾರಿದ್ದೆ. ಈ ‘ಗೀತಾ’ದವರ ಕರಾಮತ್ತಿನ ಬಗ್ಗೆ ಒಂದು ಮಾತು ಹೇಳಲೇಬೇಕು. ಬ್ಯಾಂಕಿನ ‘ಪರ್ಸನಲ್ ಡಿಪಾರ್ಟ್‌ಮೆಂಟ್’ ನಲ್ಲಿ, ಯಾವ ವರ್ಷದಲ್ಲಿ ಯಾರಿಗೆ, ಯಾವೂರಿಗೆ ವರ್ಗಾವಣೆ ಆದೇಶ ಟೈಪಾಗುತ್ತಿದೆ ಎಂಬ ಮಾಹಿತಿಯು ಅಧ್ಯಕ್ಷರಿಗೆ ತಲುಪುವ ಮೊದಲೇ, ‘ಗೀತಾ’ದ ಮಾಲಕರಿಗೆ ತಿಳಿದು ಬಿಡುತ್ತಿತ್ತು. ಹಾಗಾಗಿ, ಸಂತ್ರಸ್ತ ಅಧಿಕಾರಿಯೊಬ್ಬನಿಗೆ ‘ಟ್ರಾನ್ಸ್‌ಫರ್ ಆರ್ಡರ್’ ತಲುಪಿದ ಸ್ವಲ್ಪವೇ ಹೊತ್ತಿನಲ್ಲಿ ‘ಗೀತಾ’ದ ಪ್ರತಿನಿಧಿಯೂ ನಗುತ್ತಾ ಹಾಜರಾಗಿಬಿಡುತ್ತಿದ್ದ!

ದೆಹಲಿ ತಲುಪಿದವನಿಗೆ ಹಳೆಯ ಪರಿಚಯದ ನನ್ನೂರ ಗೆಳೆಯ ಹಾಗೂ ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀ ಸರವು ಕೃಷ್ಣ ಭಟ್ಟರ ಕೃಪೆಯಿಂದ, ‘ಸಂಘ’ದ ಗೆಸ್ಟ್ ಹೌಸ್‌ನಲ್ಲಿ ತಾತ್ಕಾಲಿಕ ನಿವಾಸಿಯಾಗಲು ಕಷ್ಟವೇನೂ ಆಗಿದ್ದಿರಲಿಲ್ಲ. ಮರುದಿನವೇ, ದೆಹಲಿಯ ನಿಗಮ ಕಚೇರಿಯಲ್ಲಿ ಹಾಜರು ಹಾಕಿ ಬ್ಯಾಂಕ್ ಅಧ್ಯಕ್ಷರ ಆದೇಶವನ್ನು ಪರಿಪಾಲಿಸುವ, ಐಆರ್‌ಡಿ ಅಧಿಕಾರಿ ಶ್ರೀ ಪ್ರೇಮಾನಂದ ಶೆಟ್ಟರ ಕಾರಲ್ಲಿ ಕುಟುಂಬ ಸಹಿತ ಹೊರಟು, ದೆಹಲಿಯ ರಾಜೇಂದ್ರ ನಗರದ ಬ್ಯಾಂಕ್ ಕ್ವಾರ್ಟರ್ಸ್‌ನ ಬಳಿ ತಲುಪುವಾಗ ಮಧ್ಯಾಹ್ನದ ಬಿಸಿ ಬಿಸಿಲು ಸುಡುತ್ತಿತ್ತು. ಮನೆಯ ಮುಂಭಾಗವನ್ನು ಹಾದು ಹಿತ್ತಲಿಗೆ ನುಸುಳಿ ಮಹಡಿಯೇರುತ್ತಿದ್ದ ಶೆಟ್ಟರು, ‘‘ಇಲ್ಲಿ ಸಿಗುವ ಬಾಡಿಗೆ ಮನೆಗಳೇ ಹೀಗೇ ಸ್ವಾಮಿ. ಎದುರಿಗೆ ಓನರ್ ಮನೆ. ಹಿತ್ತಲ ಬಾಗಿಲು ಪಕ್ಕದ ಮೆಟ್ಟಲೇರಿದರೆ ಬಾಡಿಗೆ ಮನೆಯ ಹೊಸ್ತಿಲು. ಇದು ಬ್ಯಾಂಕ್ ಕ್ವಾರ್ಟರ್ಸ್ ಆಗಿ ಹತ್ತು ವರ್ಷ ದಾಟಿದೆ. ನಾವಿಲ್ಲಿ ಎರಡು ವರ್ಷ ಇದ್ದೆವು. ಓನರ್ ಪಂಜಾಬಿ. ತುಂಬಾ ಒಳ್ಳೆಯವರು. ಯಾವ ರಗಳೆಗೂ ಬರುವುದಿಲ್ಲ. ನನ್ನ ಮಗನ ಹೊಸ ಸ್ಕೂಲಿಗೆ ದೂರ ಆಗ್ತದೆ ಅಂತ, ಕಳೆದ ವಾರ ಮನೆ ಖಾಲಿ ಮಾಡಿದೆ. ಅಷ್ಟರಲ್ಲಿ ನಮ್ಮ ತಿಂಗಳಾಯರ ಫೋನ್ ಬಂತು. ಬೇರೆಯವರಿಗೆ ಅಲಾಟ್ ಮಾಡದೆ ಹಾಗೆಯೇ ಉಳಿಸಿಕೊಂಡೆವು. ನೀವಿಲ್ಲಿ ಆರಾಮವಾಗಿರಬಹುದು’’ ಎಂದರು ಶೆಟ್ಟರು. ಡಬಲ್ ಬೆಡ್ ರೂಮ್ ಮನೆ ಚಿಕ್ಕದಾಗಿದ್ದರೂ ಚೊಕ್ಕದಾಗಿತ್ತು.

ಮಹಡಿಯಿಳಿದು ಮನೆಯೆದುರಿನ ಅಂಗಳಕ್ಕೆ ಬಂದೆವು. ಬಾಗಿಲು ಮುಚ್ಚಿತ್ತು. ಬೆಲ್ ಮಾಡಿದಾಗ ಸುಮಾರು ನಲುವತ್ತರ ಮಹಿಳೆಯೊಬ್ಬರು ಹೊರ ಬಂದರು. ಶೆಟ್ಟರನ್ನು ಕಂಡು ಮುಖವರಳಿಸಿದರು, ‘ಇವರಾ ಇಲ್ಲಿಗೆ ಬರುವವರು?’ ಎನ್ನುತ್ತಾ ನನ್ನ ಕುಟುಂಬ ಸದಸ್ಯರನ್ನು ನೋಡುತ್ತಾ ಮುಖ ತುಂಬಾ ನಕ್ಕರು. ‘ಬನ್ನಿ ಒಳಗೆ’ ಎಂದರು. ಹೊಸಿಲು ದಾಟುತ್ತಿದ್ದ ನನ್ನ ಕಿರಿ ಮಗಳ ಕೆನ್ನೆ ಹಿಂಡುತ್ತಾ, ‘ಟೂ ಕ್ಯೂಟ್’ ಎಂದರು. ನಮ್ಮನ್ನು ಚಾವಡಿಯ ಸೋಫಾದ ಮೇಲೆ ಕುಳ್ಳಿರಿಸಿ ಒಳಗೆ ಹೋದರು. ಸ್ವಲ್ಪವೇ ಹೊತ್ತಲ್ಲಿ ಸುಮಾರು ಎಂಭತ್ತು ದಾಟಿದ್ದಿರಬಹುದಾದ ಬಹಳ ಚಂದದ ಎತ್ತರದ ಮುದುಕಿಯೊಬ್ಬರು ಹೊರಬಂದರು. ಶೆಟ್ಟರು ಎದ್ದು ನಿಂತರು. ನಾವೂ ನಿಂತೆವು. ಹಾಗೆ ಬಂದಿದ್ದ ಅವರು ಒಮ್ಮೆಲೆ ಬೆಚ್ಚಿಬಿದ್ದವರಂತೆ ಮಮತಾಜಳನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡತೊಡಗಿದ್ದರು. ಸ್ವಲ್ಪಹೊತ್ತು ಹಾಗೆಯೇ ನಿಂತಿದ್ದವರು, ಒಮ್ಮೆಲೆ ಮುಂದಕ್ಕೆ ನುಗ್ಗಿ ಬಂದು ಮಮತಾಜಳನ್ನು ಬಾಚಿ ತೊಡೆಗಂಟಿಸಿಕೊಂಡು ಕಲ್ಲಿನಂತೆ ನಿಂತುಬಿಟ್ಟರು! ನಾನು ಮುಜುಗರ ಪಡುತ್ತಿದ್ದಂತೆಯೇ, ಅಪ್ಪಿಕೊಂಡಿದ್ದ ಹುಡುಗಿಯನ್ನು ಒಮ್ಮೆಲೆ ದೂರ ತಳ್ಳಿದ ಅವರು, ಬಿರಬಿರನೆ ಹೆಜ್ಜೆ ಹಾಕುತ್ತಾ ಒಳಗೆ ಹೋಗಿಬಿಟ್ಟರು! ಆ ಹಿರಿಜೀವದ ಅನಿರೀಕ್ಷಿತ, ಅಸಹಜ ಮತ್ತು ಅಚ್ಚರಿಯ ವರ್ತನೆಯನ್ನು ಅರಗಿಸಿಕೊಳ್ಳಲಾಗದೆ ನಾವು ಗಲಿಬಿಲಿ ಗೊಳ್ಳುತ್ತಿರುವಂತೆಯೇ, ಒಳಕೋಣೆಯಿಂದ ಹೆಂಗಸರಿಬ್ಬರ ಸಣ್ಣದೊಂದು ಜಗಳವೂ ಅಸ್ಪಷ್ಟವಾಗಿ ಕೇಳಿಸಿತ್ತು. ನಾವು ಪರಸ್ಪರ ಮುಖ ನೋಡಿಕೊಂಡೆವು. ನಾವು ಮಾಡಬಹುದಾಗಿದ್ದದ್ದು ಅಷ್ಟು ಮಾತ್ರ. ಟ್ರೇಯೊಂದರಲ್ಲಿ ನಾಲ್ಕು ಗ್ಲಾಸ್ ಕೆಂಬಣ್ಣದ ‘ರೂ ಅಬ್ಝಾ’ ಪಾನೀಯವನ್ನು ಎತ್ತಿಕೊಂಡು ಹೊರಗೆ ಬಂದ ನಲುವತ್ತರ ಮಹಿಳೆ, ಅದನ್ನು ಟೀಪಾಯಿ ಮೇಲಿಟ್ಟು, ‘ಕುಡಿಯಿರಿ’ ಎಂದರು. ಕುಡಿದೆವು. ಮಕ್ಕಳ ‘ಹೆಸರು’ ಕೇಳಿದರು. ‘ವಯಸ್ಸು ಎಷ್ಟು’ ಎಂದು ವಿಚಾರಿಸಿದರು. ‘ಯಾವ ಕ್ಲಾಸ್’ ಎಂದು ಪ್ರಶ್ನಿಸಿದರು. ಎಲ್ಲದಕ್ಕೂ ಉತ್ತರಿಸಿದ ನಾವು ಅವರಿಗೆ ಮತ್ತೊಮ್ಮೆ ನಮಸ್ಕರಿಸಿ ಮರಳಿದೆವು.

‘ಗೀತಾ ಟ್ರಾನ್ಸ್ ಪೋರ್ಟ್ ಯಾವಾಗ ಬರಬಹುದು?’ ಕಾರು ಚಲಾಯಿಸುತ್ತಾ ಪ್ರಶ್ನಿಸಿದ್ದರು ಶೆಟ್ಟರು.

‘ಇನ್ನೂ ನಾಲ್ಕು ದಿನ ಹೋದೀತು. ಶುಕ್ರವಾರ ಗ್ಯಾರಂಟಿ ಅಂದಿದ್ದಾರೆ’ ಎಂದೆ. ‘ಲೋಡ್ ಫುಲ್ ಉಂಟಾ?’ ಮತ್ತೊಂದು ಪ್ರಶ್ನೆ.

‘ಮುಕ್ಕಾಲು ಲೋಡು ಪುಸ್ತಕಗಳೇ’ ಜುಬೇದಾ ನಕ್ಕಿದ್ದಳು.

‘ನೀವು ನಾಲ್ಕು ದಿನ ಕರ್ನಾಟಕ ಸಂಘದಲ್ಲೇ ಇದ್ದುಬಿಡಿ. ಗೂಡ್ಸ್ ಬಂದ ಮೇಲೆ ಇಲ್ಲಿಗೆ ಬರಬಹುದು’ ಎಂದರು ಶೆಟ್ಟರು. ನಾನು ತಲೆಯಾಡಿಸಿದೆ. ಆರ್.ಕೆ. ಪುರಂನಲ್ಲಿರುವ ಕರ್ನಾಟಕ ಸಂಘದ ಬಾಗಿಲ ಬಳಿ ನಮ್ಮನ್ನು ಇಳಿಸಿದ ಶೆಟ್ಟರು ತನ್ನ ಮನೆಗೆ ಹೋದರು. ಮರುದಿನ ಮಂಗಳವಾರ. ನಾನು ಕಚೇರಿಯಲ್ಲಿದ್ದೆ. ಹನ್ನೊಂದು ದಾಟಿದ್ದಿರಬಹುದು. ಐಆರ್‌ಡಿ ವಿಭಾಗದ ಅಟೆಂಡರ್ ಬಂದವನು, ‘ಸರ್ ಹೇಳಿದ್ರು. ನೀವೊಮ್ಮೆ ಕ್ಯಾಬಿನ್‌ಗೆ ಬರಬೇಕಂತೆ’ ಎಂಬ ಸಂದೇಶ ನೀಡಿದ್ದ. ಅವನ ಬೆನ್ನು ಹಿಡಿದು ಶೆಟ್ಟರ ಕ್ಯಾಬಿನ್ ಹೊಕ್ಕೆ. ಶೆಟ್ಟರ ಮುಖದಲ್ಲಿ ಗೆಲುವು ಕಾಣಿಸುತ್ತಿರಲಿಲ್ಲ. ಮೌನವಾಗಿ ಕುಳಿತಿದ್ದರು. ಅವರೆದುರು ಪಂಜಾಬಿ ಪೇಟ ಧರಿಸಿದ್ದ ನಡು ವಯಸ್ಸು ದಾಟಿದ್ದ ಧಡೂತಿಯಾದ ವ್ಯಕ್ತಿಯೊಬ್ಬರು ತಲೆ ತಗ್ಗಿಸಿ ಕುಳಿತಿದ್ದರು. ನನಗೆ ಕುಳಿತುಕೊಳ್ಳಲು ಹೇಳಿದ ಶೆಟ್ಟರು, ಕ್ಯಾಂಟೀನ್‌ಗೆ ಫೋನ್ ಮಾಡಿ ‘ಮೂರು ಟೀ’ ಎಂದರು. ನಾನು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತೆ.

‘ಇವರು ಆ ಮನೆ ಓನರು. ನಿಮ್ಮಂದಿಗೆ ಇವರಿಗೇನೋ ಮಾತನಾಡಬೇಕಂತೆ.’ ‘ನಮಸ್ತೆ ಸರ್’ ನಾನು ಕೈ ಮುಗಿದೆ.

ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ, ನನ್ನ ಕೈಗಳನ್ನು ತನ್ನೆರಡೂ ಕೈಗಳಿಂದ ಜೋಡಿಸಿಕೊಂಡು ಹಿಡಿದ ಅವರು, ‘ಮಾಫ್ ಕರ್ನಾ...’ ಎಂದರು. ನಾನು ಗಲಿಬಿಲಿಗೊಂಡೆ. ‘ಅರ್ಥವಾಗಲಿಲ್ಲ ಸರ್’ ಎಂದೇನೋ ಹೇಳಿದ್ದೆ. ‘ನನ್ನನ್ನು ಸರ್ ಎಂದು ದಯವಿಟ್ಟು ಹೇಳಬೇಡಿ’ ಎನ್ನುತ್ತಿದ್ದಂತೆಯೇ ಅವರು ಬಿಕ್ಕಳಿಸಲಾರಂಭಿಸಿದ್ದರು. ತಿದ್ದಿ ತೀಡಿದ್ದ ಅವರ ಹುಬ್ಬುಗಳ ತಳದ ಕಣ್ಣುಗಳ ಸಂದಿಯಿಂದ ಜಾರುತ್ತಿದ್ದ ನೀರ ತುಣುಕುಗಳು, ಒಪ್ಪವಾಗಿ ಬಾಚಿಕೊಂಡಿದ್ದ ಅವರ ಗಡ್ಡದ ಕೂದಲುಗಳಲ್ಲಿ ಮುತ್ತಿನಂತೆ ಕಾಣಿಸಿದ್ದವು. ನನ್ನ ಗೊಂದಲವನ್ನು ಗ್ರಹಿಸಿದ ಶೆಟ್ಟರು, ‘ಕತೆ’ ಹೇಳಲಾರಂಭಿಸಿದರು.

ಆ ಕತೆಯ ಒಟ್ಟು ಸಾರಾಂಶ ಇಷ್ಟು: ಒಟ್ಟಿನಲ್ಲಿ ನನಗೆ ಆ ಮನೆ ಸಿಗುವುದಿಲ್ಲ. ಅದಕ್ಕೆ ಕಾರಣ ನಾನು ಮುಸ್ಲಿಮನಾಗಿರುವುದು ಅಲ್ಲ. ಅವರು ಹಿಂದೂ ಆಗಿರುವುದೂ ಅಲ್ಲ. ಪಕ್ಕದ ಕುರ್ಚ

Writer - ಬೊಳುವಾರು ಮಹಮದ್ ಕುಂಞಿ

contributor

Editor - ಬೊಳುವಾರು ಮಹಮದ್ ಕುಂಞಿ

contributor

Similar News

ಬೀಗ