ದ.ಕ. ಜಿಲ್ಲೆ: ಇಂದು ರಾತ್ರಿ 10ರಿಂದ ಜ.17ರ ಮುಂಜಾನೆಯವರೆಗೆ ವೀಕೆಂಡ್ ಕರ್ಫ್ಯೂ

Update: 2022-01-14 14:55 GMT

ಮಂಗಳೂರು, ಜ.14: ಒಮೈಕ್ರಾನ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಶುಕ್ರವಾರ (ಜ.14) ರಾತ್ರಿ 10ರಿಂದ ಆರಂಭಗೊಳ್ಳಲಿದ್ದು, ಸೋಮವಾರ (ಜ.17) ಮುಂಜಾನೆ 5ರವರೆಗೆ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ (ಶನಿವಾರ ಮತ್ತು ರವಿವಾರ) ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಒಳಾಂಗಣದಲ್ಲಿ 100 ಮತ್ತು ಹೊರಾಂಗಣದಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಪೂರ್ವನಿಗದಿತ ಹರಕೆ ಯಕ್ಷಗಾನ, ಯಕ್ಷಗಾನ, ದೇವ- ದೈವಾರಾಧನೆಯನ್ನು 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮವಾಗಿ ನಡೆಸಬಹುದಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದ್ದು, ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಆದರೆ ಬಸ್, ರಿಕ್ಷಾ ಮತ್ತಿತರ ವಾಹನಗಳ ಓಡಾಟಕ್ಕೆ ಅವಕಾಶವಿದೆ. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಮಾಲ್‌ಗಳು ಬಂದ್ ಆಗಲಿವೆ. ಹೊರ ಊರುಗಳಿಗೆ ಬಸ್, ರೈಲು, ವಿಮಾನಯಾನದ ಟಿಕೆಟ್‌ನೊಂದಿಗೆ ಸಂಚರಿಸಬಹುದಾಗಿದೆ. ಹಾಲು, ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು ಕೂಡ ತೆರೆಯಬಹುದಾಗಿದೆ.

►ಪ್ರಾರ್ಥನಾ ಕೇಂದ್ರಗಳು ಬಂದ್: ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಭಕ್ತರ ಪ್ರವೇಶ ನಿರ್ಬಧಿಸಲಾಗಿದೆ. ಅರ್ಚಕರು, ಧರ್ಮಗುರುಗಳ ಸಹಿತ ಸೀಮಿತ ಸಂಖ್ಯೆಯ ಸಿಬ್ಬಂದಿ ವರ್ಗ ಮಾತ್ರ ಪ್ರಾರ್ಥನಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ.

►ಹೊಟೇಲ್, ರೆಸ್ಟೋರೆಂಟ್‌ಗಳನ್ನು ತೆರೆಯಬಹುದು. ಆದರೆ ತಿನ್ನಲು ಅವಕಾಶವಿಲ್ಲ ಮತ್ತು ಪಾರ್ಸೆಲ್‌ಗಳನ್ನು ಮಾತ್ರ ಕೊಂಡೊಯ್ಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News