ಕಾಯಕ ರೂಪದಲ್ಲಿ ತ್ರಿವಿಧ ದಾಸೋಹ : ಸಿಎಂ ಬಸವರಾಜ ಬೊಮ್ಮಾಯಿ

Update: 2022-01-21 04:41 GMT

ಬೆಂಗಳೂರು : ಅನ್ನ, ಆಶ್ರಯ ಹಾಗೂ ಅಕ್ಷರವೆಂಬ ತ್ರಿವಿಧ ದಾಸೋಹವನ್ನು  ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ' ದಾಸೋಹ ದಿನ' ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದಗಂಗಾ ಮಠ ದಾಸೋಹದ ಬಹಳ ದೊಡ್ಡ ಪರಂಪರೆಯನ್ನೇ ಕರ್ನಾಟಕದಲ್ಲಿ ಹುಟ್ಟುಹಾಕಿದೆ. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸಿದವರು ಶಿವಕುಮಾರಸ್ವಾಮಿಗಳು. ದಾಸೋಹ ದಿನವನ್ನು ಸಿದ್ದಗಂಗಾ ಮಠದಲ್ಲಿ ಆಚರಣೆ ಮಾಡಬೇಕೆಂದು ಸರ್ಕಾರ ತೀರ್ಮಾನಿಸಿದೆ. ನಮ್ಮ ಸರ್ಕಾವೂ ಅದೇ ದಾರಿಯಲ್ಲಿ ನಡೆಯುತ್ತಿದೆ. 4 ಕೆ.ಜಿ ನೀಡಲಾಗುತ್ತಿದ್ದ  ಅಕ್ಕಿಯನ್ನು 5 ಕೆ.ಜಿಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ಧತಿ ಅನುಗುಣವಾಗಿ ರಾಗಿ, ಜೋಳ ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ವಿದ್ಯಾ ದಾಸೋಹವನ್ನೂ ಸರ್ಕಾರ ಕೈಗೊಂಡಿದ್ದು, ಕಾರ್ಮಿಕರ ಹಾಗೂ ರೈತರ  ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ವಾರಾಂತ್ಯ ಕರ್ಫ್ಯೂ: ವಾರಾಂತ್ಯ ಕರ್ಫ್ಯೂ ಕುರಿತಂತೆ ಇಂದು ತಜ್ಞರೊಂದಿಗೆ ಸಭೆ ನಡೆಯಲಿದ್ದು, ಅವರ ಅಭಿಪ್ರಾಯ ಪಡೆಯಲಾಗುವುದು. ಹಲವಾರು ಸಂಘ ಸಂಸ್ಥೆಗಳು,  ಶಾಸಕರು ಮತ್ತು ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ವಿಶೇಷವಾಗಿ ತಜ್ಞರ ವರದಿ, ಅಭಿಪ್ರಾಯ ಪಡೆಯಲಾಗುವುದು. ಮುಂಬರುವ ದಿನಗಳಲ್ಲಿ ಮೂರನೇ ಅಲೆಯ ರೂಪಾಂತರ ಯಾವ ರೀತಿಯಲ್ಲಿ  ಆಗಬಹುದೆಂಬ ಬಗ್ಗೆ ಚರ್ಚಿಸಿ, ಎಲ್ಲಾ ಆಯಾಮಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News