ಬೆಂಗಳೂರು: ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ; ಮೆಸೇಜ್ ಕಳುಹಿಸಿ ಪ್ರಚೋದನೆಗೆ ಯತ್ನಿಸಿದ ಆರೋಪಿಯ ಬಂಧನ

Update: 2022-01-21 12:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.21: ತಮಿಳುನಾಡು ಕ್ರಿಕೆಟ್ ಲೀಗ್‍ನ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗುವಂತೆ ಐವರು ಕ್ರಿಕೆಟಿಗರಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಮೆಸೇಜ್ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  

ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಯನ್ನು ಬಾಗೇಪಲ್ಲಿ ಮೂಲದ ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಸಾಲ ತೀರಿಸಲು ಕ್ರಿಕೆಟಿಗರಿಗೆ ಬ್ಲ್ಯಾಕ್ ಮೇಲ್ ಮಾಡಲು ತಂತ್ರ ರೂಪಿಸಿದ್ದ ಎಂಬುವುದು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ತಮಿಳುನಾಡಿನ ಖ್ಯಾತ ಆಲ್‍ರೌಂಡರ್ ಸತೀಶ್ ರಾಜಗೋಪಾಲ್ ಎಂಬುವರಿಗೆ ಇದೇ ತಿಂಗಳು 3ರಂದು ಆರೋಪಿ ಇನ್ ಸ್ಟ್ರಾಗ್ರಾಮ್ ಮೂಲಕ ಮುಂಬರುವ ಟಿಎನ್‍ಪಿಎಲ್‍ನ ಫಿಕ್ಸಿಂಗ್‍ನಲ್ಲಿ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್‍ಗೆ ಒಪ್ಪಿದ್ದಾರೆ. ನೀವು ಭಾಗಿಯಾದರೆ ಪ್ರತಿ ಪಂದ್ಯಕ್ಕೆ 40 ಲಕ್ಷ ನೀಡುವುದಾಗಿ ಆಫರ್ ನೀಡಿದ್ದಾನೆ.

ಇದೇ ಮೆಸೇಜ್ ಅನ್ನು ತಮಿಳುನಾಡು ಆಟಗಾರರಾದ ಆ್ಯಂಟೋನಿ ದಾಸ್, ಸಂಜಯ್ ಯಾದವ್, ಅಶ್ವಿನ್ ಕ್ರಿಸ್ಟ್, ಎಂ.ಸಿದ್ದಾರ್ಥ್ ಎಂಬುವರಿಗೂ ಫಿಕ್ಸಿಂಗ್‍ನಲ್ಲಿ ಭಾಗಿಯಾಗುವಂತೆ ಪ್ರಚೋದನಾತ್ಮಕ ಸಂದೇಶ ಕಳುಹಿಸಿದ್ದ. ಐವರ ಪೈಕಿ ರಾಜಗೋಪಾಲ್ ಸತೀಶ್ ಮಾತ್ರ ಮೆಸೇಜ್ ರಿಫ್ಲೈ ಮಾಡಿದ್ದರು. ಆರೋಪಿ ಫಿಕ್ಸಿಂಗ್ ಆಮಿಷವೊಡ್ಡಿರುವುದನ್ನು ಈ ಆಟಗಾರರು ಬಿಸಿಸಿಐ ಗಮನಕ್ಕೆ ತಂದಿದ್ದರು. ಬಿಸಿಸಿಐನಿಂದ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಅಂಡ್ ಇಂಟಿಗ್ರಿಟಿ ಯೂನಿಟ್ ತಂಡ ದೂರಿನ ಮೇರೆಗೆ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

ಅತಿಯಾಗಿ ಫ್ಯಾಂಟಸಿ ಕ್ರಿಕೆಟ್ ಆಡುವ ಶೋಕಿ ಹೊಂದಿದ್ದ ಈತ 4 ರಿಂದ 5 ಲಕ್ಷ ರೂ. ಸಾಲ ಮಾಡಿಕೊಂಡು ಹೈರಾಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News