ಬಿಜೆಪಿ-ಜೆಡಿಎಸ್‍ಗೆ ಯಾವುದೇ ರಾಜಕೀಯ ಸಿದ್ಧಾಂತವಿಲ್ಲ: ಸಿದ್ದರಾಮಯ್ಯ

Update: 2022-01-21 14:55 GMT

ಬೆಂಗಳೂರು, ಜ.21: ಜೆಡಿಎಸ್‍ಗೆ ಯಾವುದೇ ಸಿದ್ಧಾಂತವಿಲ್ಲ. ಅದೊಂದು ಅವಕಾಶವಾದಿ ಪಕ್ಷ. ಇಂದು ದೇಶದಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷ ಆರೆಸ್ಸೆಸ್ ನ ರಾಜಕೀಯ ಮುಖವಾಡ ಮಾತ್ರ. ಇವರಿಗೂ ಯಾವುದೇ ರಾಜಕೀಯ ಸಿದ್ಧಾಂತವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಿದ್ದೇನೆ ಎಂದು ಕಾಂತರಾಜು ಅವರು ಹೇಳಿದ್ದಾರೆ, ಬಹಳ ಸಂತೋಷ. ಸಿದ್ಧಾಂತವಿಲ್ಲದೆ ರಾಜಕೀಯ ಪಕ್ಷ ಹೆಚ್ಚು ಕಾಲ ಉಳಿಯಲ್ಲ.
ಧರ್ಮ, ದೇವರು ಮುಂತಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸಮಾಜ ಒಡೆದು, ಮತಾಂಧರನ್ನು ಸೃಷ್ಟಿಸಿ ತನ್ಮೂಲಕ ತಮ್ಮ ಗುಪ್ತ ಅಜೆಂಡಾವನ್ನು ಸಾಧಿಸುವುದು ಬಿಜೆಪಿ ಕೆಲಸ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯದ ಬಿಜೆಪಿಯಂತ ಭ್ರಷ್ಟ ಸರಕಾರವನ್ನು ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಯಾವುದೇ ನೇಮಕಾತಿ, ವರ್ಗಾವಣೆಗಳು ಲಂಚ ಇಲ್ಲದೆ ಆಗಲ್ಲ. ಗುತ್ತಿಗೆ ಕೆಲಸಗಳಲ್ಲಿ ಶೇ.40ರಷ್ಟು ಕಮಿಷನ್ ಕೊಡದೆ ವರ್ಕ್ ಆರ್ಡರ್ ಸಿಗಲ್ಲ. ನಾನು ಹದಿಮೂರು ಬಜೆಟ್ ಮಂಡಿಸಿದ್ದೇನೆ. ನಮ್ಮ ಕಾಲದಲ್ಲಿ ಯಾವುದಾದರೂ ಕೆಲಸಕ್ಕೆ ಎನ್.ಒ.ಸಿ ಪಡೆಯಲು ಸಿದ್ದರಾಮಯ್ಯಗೆ ಒಂದು ರೂಪಾಯಿ ಲಂಚ ಕೊಟ್ಟಿದ್ದೀನಿ ಎಂದು ಒಬ್ಬ ಕಂಟ್ರಾಕ್ಟರ್ ಹೇಳಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಆಗುತ್ತಿದೆ. ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದೆಯ? ನೀರಾವರಿ ಯೋಜನೆ ಅನುಷ್ಠಾನ ಮಾಡಿದೆಯಾ? ಇಲ್ಲ. ಹೀಗಾಗಿಯೇ ನಾವು ಮೇಕೆದಾಟು ಯೋಜನೆ ಜಾರಿ ಮಾಡಿ ಎಂದು ಪಾದಯಾತ್ರೆ ಆರಂಭ ಮಾಡಿದ್ದು, ಸುಪ್ರೀಂ ಕೋರ್ಟ್‍ನಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಬಂದಿದೆ. ಯೋಜನೆಗೆ ವಿರೋಧ ಮಾಡಲು ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ ಎಂದು ಅವರು ಹೇಳಿದರು.

ಅರಣ್ಯ ಇಲಾಖೆ ಅನುಮತಿ ಪಡೆಯಲು ಇವರಿಗೆ ಬಂದಿರೋದೇನು? ಇದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಸುಳ್ಳು ಮೊಕದ್ದಮೆ ಹೂಡಿದ್ದಾರೆ. ನನ್ನ ಮೇಲೆ ಮೂರು, ಡಿ.ಕೆ.ಶಿವಕುಮಾರ್ ಮೇಲೆ ನಾಲ್ಕು ಕೇಸ್ ಹಾಕಿದ್ದಾರೆ. ಬಿಜೆಪಿಯವರು ಕೊರೋನ ನಿಬಂಧನೆಗಳನ್ನು ಮೀರಿದ್ದರೂ ಅವರ ವಿರುದ್ಧ ಯಾವ ಕೇಸ್ ಹಾಕಿಲ್ಲ. ಮಕ್ಕಳಿಗೆ ಹಾಯ್ ಎಂದಿದ್ದಕ್ಕೂ ಕೇಸ್ ಹಾಕಿದ್ದಾರೆ. ಇದು ಯಾವ ಅಪರಾಧ ಎಂದು ನನಗಂತೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷ ಸೇರಲು ಸುಮಾರು ಅರ್ಜಿಗಳು ನನ್ನ ಹಾಗೂ ಪಕ್ಷದ ಸಮಿತಿ ಮುಂದೆ ಇವೆ. ಈ ಅರ್ಜಿಗಳ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಸ್ಥಳೀಯ ನಾಯಕರ ಒಮ್ಮತ ಇರುವ ಕಡೆ ಮೊದಲು ತೀರ್ಮಾನ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಯಾರೇ ಕಾಂಗ್ರೆಸ್ ಸೇರಬೇಕಾದರೂ ಬೇಷರತ್ ಬರಬೇಕು. ಜತೆಗೆ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಬೇಕು ಎಂದರು.

ಕಾಂತರಾಜು ತುಮಕೂರಿನಿಂದ ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಹಾಗೂ ಮುಖಂಡರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೊಡ್ಡ ಸಮಾರಂಭ ಮಾಡುವ ಇಚ್ಛೆ ಇತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮತ್ತೊಂದು ದಿನ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ಇರಾದೆ ಇದೆ ಎಂದು ಶಿವಕುಮಾರ್ ತಿಳಿಸಿದರು.

ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಇಂದು ಹಾಗೂ ನಾಳೆ ದಿಲ್ಲಿಯಿಂದ ತರಬೇತಿ ಸಭೆ ಇದೆ. ಆನ್‍ಲೈನ್ ಹಾಗೂ ಆಫ್ ಲೈನ್‍ನಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 12 ವರ್ಷಗಳ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಅವಕಾಶ ಮಾಡಿಕೊಟ್ಟಿದ್ದು, ಎಲ್ಲರೂ ಈ ಅವಕಾಶ ಬಳಸಿಕೊಳ್ಳಬೇಕಿದೆ ಎಂದು ಶಿವಕುಮಾರ್ ಕರೆ ನೀಡಿದರು.

ಕೇವಲ ನಾನು, ಸಿದ್ದರಾಮಯ್ಯ, ಪರಮೇಶ್ವರ್ ಅವರೇ ಪಕ್ಷ ಕಟ್ಟುತ್ತೇವೆ ಎಂಬುದು ಸುಳ್ಳು. ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿ ಹೊರಬೇಕು. ನಾವು ಯಾರಿಗೂ ಟಿಕೆಟ್ ನೀಡುವ ಭರವಸೆಯನ್ನು ಈಗಲೇ ನೀಡಿಲ್ಲ. ಈ ವಿಚಾರದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ನಮ್ಮ ಗುರಿ ತಲುಪುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಬೆಮೆಲ್ ಕಾಂತರಾಜು, ‘ಇಂದು ನಾನು ಕಾಂಗ್ರೆಸ್ ಪಕ್ಷ ಸೇರಲು ಪಕ್ಷದ ಸಿದ್ಧಾಂತ ಕಾರಣ. ಪಕ್ಷದ ನಾಯಕತ್ವ ಒಪ್ಪಿ ಸೇರಿದ್ದೇನೆ. ಎಲ್ಲ ಮುಖಂಡರು ನನ್ನನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವುದು ನನ್ನ ಶಕ್ತಿ ಹೆಚ್ಚಿಸಿದ್ದು, ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ನಿಮ್ಮ ನಂಬಿಕೆಗೆ ಎಲ್ಲಿಯೂ ಕಪ್ಪು ಚುಕ್ಕೆಯಾಗದಂತೆ ಪಕ್ಷ ಸಂಘಟಿಸುತ್ತೇನೆ ಎಂದರು.

ದೇಶದಲ್ಲಿ ಏನಾದರೂ ಪ್ರಗತಿ ಮಾಡಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ರಾಜ್ಯ ಹಾಗೂ ದೇಶದಲ್ಲಿ ಸಮಾಜದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಜತೆ ನಾನು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News