ಪತ್ನಿಯ ತಂಗಿಯನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಆರೋಪಿಯ ಬಂಧನ
Update: 2022-01-24 14:46 GMT
ಬೆಂಗಳೂರು, ಜ.24: ಪತ್ನಿಯ ತಂಗಿಯನ್ನು ಅಪಹರಣ ಮಾಡಿ, ಮದುವೆಗೆ ಒತ್ತಾಯಿಸಿದ ಆರೋಪ ಸಂಬಂಧ ಮೂವರನ್ನು ಇಲ್ಲಿನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದೇವರಾಜ್ ಪ್ರಮುಖ ಆರೋಪಿಯಾಗಿದ್ದು, ಈತನ ಸಹಚರ ನವೀನ್ ಕುಮಾರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಡಿಗೆಹಳ್ಳಿ ನಿವಾಸಿ ದೇವರಾಜ್ ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದು, ಇದೀಗ ಪತ್ನಿಯ ತಂಗಿ(ನಾದಿನಿ)ಯನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಆದರೆ, ಇದನ್ನು ನಾದಿನಿ ನಿರಾಕರಿಸಿದ್ದಳು. ಇದರಿಂದ ವಿಚಲಿತಗೊಂಡಿದ್ದ ಆರೋಪಿ ದೇವರಾಜ್ ನಾದಿನಿಯನ್ನು ಶನಿವಾರ ತನ್ನ ಸಹಚರರ ಜೊತೆ ಕಾರಿನಲ್ಲಿ ಅಪಹರಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.