ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪದೇಪದೇ ಹಿಂಸಾಚಾರ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಗಣ್ಯರು

Update: 2022-01-26 15:02 GMT

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಗಣ್ಯರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಂಟಿ ಬಹಿರಂಗ ಪತ್ರ ಬರೆದಿದ್ದಾರೆ.

"ನಾವು ಹಿರಿಯ ವಿಜ್ಞಾನಿಗಳು, ಬರಹಗಾರರು, ಶಿಕ್ಷಣ ತಜ್ಞರು, ಕಲಾವಿದರು ಮತ್ತು ವಕೀಲರ ಗುಂಪಾಗಿದ್ದು, ಕರ್ನಾಟಕದ ಹದಗೆಡುತ್ತಿರುವ ಆಡಳಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪದೇಪದೇ ನಡೆಯುತ್ತಿರುವ ಹಿಂಸಾಚಾರದ ಕುರಿತು ಕಳವಳದಿಂದ ಈ ಪತ್ರವನ್ನು ಬರೆಯುತ್ತಿದ್ದೇವೆ" ಎಂದು ಪತ್ರದ ಆರಂಭದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದಲ್ಲಿ, "ಕಳೆದ ಕೆಲವು ತಿಂಗಳುಗಳಲ್ಲಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಯುವಕರ ಕ್ರೂರ ಹತ್ಯೆಗಳು, ಅತಿರೇಕದ ʼದ್ವೇಷ ಭಾಷಣಗಳು', ಸಾರ್ವಜನಿಕ ಬೆದರಿಕೆಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪೂಜಾ ಕಾರ್ಯಗಳಿಗೆ ಅಡ್ಡಿಪಡಿಸುವಿಕೆ, ʼಮರ್ಯಾದಾ ಹತ್ಯೆಗಳು', ʼನೈತಿಕ ಪೋಲೀಸ್‌ಗಿರಿ, ಶಾಸಕರ ಸ್ತ್ರೀದ್ವೇಷದ ಹೇಳಿಕೆಗಳು ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವಿನ ಹಗೆತನ ಮತ್ತು ಹಿಂಸಾತ್ಮಕ ಎನ್ಕೌಂಟರ್ಗಳ ಘಟನೆಗಳು ವರದಿಯಾಗಿವೆ. ಖುದ್ದು ಶಾಸಕರೇ ಮಾಡಿರುವ ದ್ವೇಷಪೂರಿತ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳು ಸಮಾಜವಿರೋಧಿ ಗುಂಪುಗಳನ್ನು ಉತ್ತೇಜಿಸುವಂತಿದೆ." ಎಂದು ಬರೆಯಲಾಗಿದೆ.

ಬಹುಸಂಖ್ಯಾತ ಸಮಾಜದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಉತ್ತಮಪಡಿಸಿದ ಮತ್ತು ಎಲ್ಲಾ ವರ್ಗದ ಜನತೆಗಾಗಿ ಯಾವುದೇ ತಾರತಮ್ಯವಿಲ್ಲದೇ ಮಾದರಿ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸಿದ ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕದ ಸುದೀರ್ಘ ಇತಿಹಾಸದ ವಿರುದ್ಧ ಇಂತಹ ಪ್ರವೃತ್ತಿಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಧಾರ್ಮಿಕ ಸಹಿಷ್ಣುತೆಯ ನಿಟ್ಟಿನಲ್ಲಿ ಹಿಂದಿನಿಂದಲೂ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ ಮತ್ತು ಶಿಶುನಾಳ ಷರೀಫ, ಬೇಂದ್ರೆಯಿಂದ ಹಿಡಿದು ಕುವೆಂಪುವರೆಗಿನ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಅಸ್ಮಿತೆಯ ಆಧಾರದ ಮೇಲೆ ಕರ್ನಾಟಕತ್ವವನ್ನು ಆಚರಿಸಿದ್ದಾರೆ. ಅದು ಸಾಮರಸ್ಯವನ್ನುಂಟು ಮಾಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News