×
Ad

ಮುಸ್ಲಿಂ ಮಹಿಳೆಯರನ್ನು ಅವಮಾನಗೊಳಿಸುವುದರ ಹಿಂದೆ ಹಿಂದುತ್ವ ಗುಂಪುಗಳ ಪಿತೂರಿ ಇದೆ: ಕ್ಯಾಂಪಸ್ ಫ್ರಂಟ್ ಆರೋಪ

Update: 2022-02-05 19:30 IST

ಬೆಂಗಳೂರು, ಫೆ.5: ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಅವಮಾನಗೊಳಿಸಲು ಬಲಪಂಥೀಯ ಹಿಂದುತ್ವ ಗುಂಪುಗಳು ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿವೆ. ಸರಕಾರ ಸೇರಿದಂತೆ ಸಮಾಜದಲ್ಲಿ ಶಿಸ್ತನ್ನು ಮೂಡಿಸಬೇಕಾದ ಪೊಲೀಸರ ಪ್ರತಿಕ್ರಿಯೆಯು ಈ ಅನುಮಾನವನ್ನು ಇನ್ನಷ್ಟು ಬಲಪಡಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್‍ನ ರಾಷ್ಟ್ರೀಯ ಸಮಿತಿ ಸದಸ್ಯೆ ಕೆ.ಪಿ ಫಾತಿಮಾ ಶೆರಿನ್ ಆರೋಪಿಸಿದ್ದಾರೆ. 

ಶನಿವಾರದಂದು ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಮುಸ್ಲಿಂ ಮಹಿಳಾ ಹೋರಾಟಗಾರ್ತಿಯರನ್ನು ಆನ್‍ಲೈನ್ ವೇದಿಕೆಗಳಲ್ಲಿ ಹರಾಜು ಹಾಕಲಾಗುತ್ತಿದೆ. ಇದು ಗಂಭೀರ ಅಪರಾಧದ ಹಿಂದಿನ ಸಂಘಟಿತ ಜಾಲವನ್ನು ಸಾಬೀತುಪಡಿಸುತ್ತದೆ. ಮಹಾರಾಷ್ಟ್ರ ಪೊಲೀಸರು ಪಿತೂರಿಯಲ್ಲಿ ಭಾಗಿಯಾಗಿದ್ದ ಕೆಲವರನ್ನು ಬಂಧಿಸುವವರೆಗೂ ಈ ಗಂಭೀರ ಅಪರಾಧದ ವಿರುದ್ಧ ಪೊಲೀಸರು ನಿಷ್ಕ್ರಿಯರಾಗಿದ್ದರು. ಆನ್‍ಲೈನ್ ಹರಾಜಿನ ಸಂಚುಕೋರರು ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಾಖಂಡಕ್ಕೆ ಸೇರಿದವರಾಗಿದ್ದು, ಬಂಧಿತರೆಲ್ಲರೂ ಹಿಂದುತ್ವ ಸಂಘಟನೆಗಳ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು.
   
ಕರ್ನಾಟಕ ಮತ್ತು ಕೇರಳದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಉಡುಪಿ ಕಾಲೇಜಿನಲ್ಲಿ ಏಕಾಏಕಿ ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವಂತೆ ಆದೇಶಿಸಿದ್ದು, ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥರು ಬಿಜೆಪಿ ಶಾಸಕರಾಗಿರುವುದರಿಂದ ಬಿಜೆಪಿಯ ಒತ್ತಡದಿಂದ ಈ ರೀತಿ ಮಾಡಲಾಗಿದೆ. ಈ ಘಟನೆಗೆ ಮುನ್ನ ಹಿಜಾಬ್ ಧಾರಣೆ ಯಾವುದೇ ಸಮಸ್ಯೆಯನ್ನು ಸೃಷ್ಟಿಸಲಿಲ್ಲ ಎಂದು ಅವರು ಮಾಹಿತಿ ನೀಡಿದರು. 

ಹುಡುಗಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ವಿರೋಧಿಸಿ ಸಂಘಪರಿವಾರದಿಂದ ಪ್ರೇರಣೆಗೊಂಡ ಯುವಕರ ಗುಂಪು ಕೇಸರಿ ಶಾಲು ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದಾರೆ. ಈಗ ಅದೇ ತಂತ್ರವನ್ನು ಬಲಪಂಥೀಯ ಹಿಂದುತ್ವವಾದಿಗಳು ರಾಜ್ಯದ ಇತರ ಕಾಲೇಜುಗಳಿಗೆ ಹರಡುತ್ತಿದ್ದಾರೆ. ಇದು ಮುಸ್ಲಿಂ ಮಹಿಳೆಯರನ್ನು ಹಾಗೂ ಅವರ ಧಾರ್ಮಿಕ ಭಾವನೆಗಳನ್ನು ದೂಷಿಸಲು ನಡೆಸಲಾಗುತ್ತಿರುವ ಸಂಘಟಿತ ಪಿತೂರಿ ಆಗಿದೆ. ಈ ಸಮಸ್ಯೆಗಳ ನ್ಯಾಯಯುತ ತನಿಖೆಯನ್ನು ನಡೆಸಿ, ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್‍ನ ಪದಾಧಿಕಾರಿಗಳಾದ ಝೀಬಾ ಶಿರೀನ್, ಆಯಿಶಾ ಮುರ್ಷಿದಾ, ಫಾತಿಮಾ ಉಸ್ಮಾನ್, ಮುದ್ದಸಿರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News