ಬಿಡಿಎದಿಂದ ಪಾರ್ಕ್ ಜಾಗದಲ್ಲಿದ್ದ ಅನಧಿಕೃತ ಶೆಡ್ ಗಳ ತೆರವು

Update: 2022-02-05 17:54 GMT

ಬೆಂಗಳೂರು, ಫೆ.5: ನಗರದ ಕೂಡ್ಲು ಮತ್ತು ಸಿಂಗಸಂದ್ರದಲ್ಲಿ ಉದ್ಯಾನಗಳಿಗೆಂದು ಮೀಸಲಿಟ್ಟಿದ್ದ ಜಾಗದಲ್ಲಿ ನಿರ್ಮಾಣಗೊಂಡಿದ್ದ 15ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‍ಗಳನ್ನು ಶನಿವಾರ ಬಿಡಿಎ ತೆರವುಗೊಳಿಸಿದೆ.

ಬೆಂಗಳೂರು ದಕ್ಷಿಣ ತಾಲೂಕು ಮತ್ತು ಆನೇಕಲ್ ತಾಲೂಕಿನ ಕೂಡ್ಲು ಮತ್ತು ಸಿಂಗಸಂದ್ರದಲ್ಲಿ ಏರ್ ಕ್ರಾಫ್ಟ್ ಎಂಪ್ಲಾಯೀಸ್ ಹೌಸಿಂಗ್ ಸೊಸೈಟಿ ಬಿಡಿಎದಿಂದ ಜಾಗವನ್ನು ಪಡೆದು ಬಡಾವಣೆ ನಿರ್ಮಾಣ ಮಾಡಿತ್ತು. ನಿಯಮದ ಪ್ರಕಾರ ಈ ಬಡಾವಣೆಗಳಲ್ಲಿ ಒಟ್ಟು 39 ಉದ್ಯಾನಗಳ ನಿರ್ಮಾಣಕ್ಕೆ ಜಾಗವನ್ನು ಮೀಸಲಿಟ್ಟು, ಈ ಪೈಕಿ 2015 ರಲ್ಲಿ 16 ಉದ್ಯಾನಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿತ್ತು.

ಆದರೆ, ಮೀಸಲಿಟ್ಟಿದ್ದ ಉಳಿದ 18 ಸ್ಥಳಗಳಲ್ಲಿ ಅನಧಿಕೃತವಾಗಿ ಶೆಡ್‍ಗಳು ಮತ್ತು ಆರ್‍ಸಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು. ಶನಿವಾರ ಬಿಡಿಎ ವಿಶೇಷ ಕಾರ್ಯನಿರತ ಪಡೆಯ ಡಿವೈಎಸ್ಪಿ ರವಿಕುಮಾರ್ ಮತ್ತು ಕಾರ್ಯಪಾಲಕ ಅಭಿಯಂತರ ಕೆ.ಮಹದೇವಗೌಡ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 15 ತಾತ್ಕಾಲಿಕ ಶೆಡ್‍ಗಳು, 4 ಅಂಗಡಿಗಳು, 20ಕ್ಕೂ ಹೆಚ್ಚು ಮನೆಗಳು, ಪ್ರಾರ್ಥನಾ ಮಂದಿರದಿಂದ ಒತ್ತುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡ ಸೇರಿದಂತೆ 30ಕ್ಕೂ ಹೆಚ್ಚು ಶೆಡ್‍ಗಳನ್ನು ತೆರವುಗೊಳಿಸಿದ್ದಾರೆ.

ಈ ಒತ್ತುವರಿಯನ್ನು ತೆರವುಗೊಳಿಸಿದ ಜಾಗ ಸೇರಿದಂತೆ 18 ಉದ್ಯಾನಗಳಿಗೆ ಸೇರಿದ ಒಟ್ಟು 25 ಎಕರೆ 6 ಗುಂಟೆ ಜಾಗವನ್ನು ಬಿಡಿಎ ಅಧಿಕಾರಿಗಳು ಮರುವಶಕ್ಕೆ ಪಡೆದಿದ್ದಾರೆ. ಸದರಿ ಜಾಗವನ್ನು ಉದ್ಯಾನ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಸದ್ಯದಲ್ಲೇ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎಗೆ ಸೇರಿರುವ ಸಾವಿರಾರು ಎಕರೆಯಷ್ಟು ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುತ್ತಿದೆ. ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತರಾಗಿ ಬಿಡಿಎ ಜಾಗವನ್ನು ವಾಪಸ್ ನೀಡಬೇಕು. ಇಲ್ಲವಾದರೆ, ಬಿಡಿಎ ಜಾಗವನ್ನು ವಶಪಡಿಸಿಕೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News