ವಿಟ್ಲ: ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Update: 2022-02-23 23:01 IST
ಬಂಟ್ವಾಳ: ವ್ಯಕ್ತಿಯೋರ್ವರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ ಬುಧವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕಾಂತಾಮೂಲೆ ನಿವಾಸಿ ದಿನೇಶ್(45) ಎಂದು ಗುರುತಿಸಲಾಗಿದೆ.
ದಿನೇಶ್ ಅವರ ಮೃತದೇಹವು ಅವರ ಮನೆಯ ರೂಮ್ ನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಿನೇಶ್ ಮತ್ತು ಅವರ ತಂದೆ ವಸಂತ ಗೌಡ ಇಬ್ಬರೇ ಮನೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಮನೆಯಲ್ಲಿ ತಂದೆ ಮಗ ಇಬ್ಬರೇ ವಾಸಮಾಡಿಕೊಂಡಿದ್ದು ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರಿಗೂ ಕುಡಿತದ ಚಟ ಇದ್ದು ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ಕೊಲೆಯಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.