ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಗೌರವಧನ ಹೆಚ್ಚಳಕ್ಕೆ ಆಗ್ರಹ: ವಿಧಾನ ಪರಿಷತ್ ಸದಸ್ಯರಿಂದ ಸಿಎಂಗೆ ಮನವಿ
ಬೆಂಗಳೂರು, ಮಾ.10: ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಳ ಮತ್ತು ಇತರ ಸೌಲಭ್ಯ ಒದಗಿಸುವ ಕುರಿತು 25 ವಿಧಾನ ಪರಿಷತ್ ಶಾಸಕರ ನಿಯೋಗವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ದೇಶದ ಅಭಿವೃದ್ಧಿಯಲ್ಲಿ ಹಳ್ಳಿಗಳ ಪಾತ್ರ ಬಹಳ ಪ್ರಮುಖವಾಗಿದ್ದು ಹಳ್ಳಿಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಗಳ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಇಲ್ಲಿ ಗ್ರಾಮವನ್ನು ಪ್ರತಿನಿಧಿಸುವ ಪಂಚಾಯತ್ ಸದಸ್ಯರಿಗೆ ಯಾವುದೇ ರೀತಿಯಾದಂತಹ ಸಮರ್ಪಕ ಸೌಲಭ್ಯ ಇರುವುದಿಲ್ಲ. ಅವರ ವೇತನವೂ ಸಹ ಬಹಳ ಕಡಿಮೆ ಇರುತ್ತದೆ. ಅಲ್ಲದೆ ಬೇರೆ ಯಾವುದೇ ಸೌಲಭ್ಯವು ಇವರಿಗೆ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರ ನೆರವಿಗೆ ಸರ್ಕಾರ ಧಾವಿಸಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಸ್ಥಳೀಯ ಆಡಳಿತವು ತನ್ನದೇ ಆದ ಒಂದು ಮಹತ್ವವನ್ನು ಪಡೆದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತದ ಚುನಾವಣೆಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮೀಸಲಾತಿ ಕ್ಷೇತ್ರಗಳಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯ ಕಾರಣವೆನೆಂದರೆ ಚುನಾಯಿತರಾದ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಸವಲತ್ತುಗಳಾಗಲಿ ಅಥವಾ ನಿರೀಕ್ಷೆ ಮಟ್ಟದಲ್ಲಿರುವ ಗೌರವ ಧನ ಸಿಗುತ್ತಿಲ್ಲವೆಂದು. ಇದರಲ್ಲಿ ಅತೀ ಮುಖ್ಯವಾಗಿ ಗ್ರಾಮ ಪಂಚಾಯತಿಗಳಲ್ಲಿ ಮೀಸಲಾತಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಆರ್ಥಿಕವಾಗಿ ಬಹಳ ಹಿಂದುಳಿದಿರುತ್ತಾರೆ. ಅವರ ದೈನಂದಿನ ಚಟುವಟಿಕೆಗಳಿಗೆ ಕೂಲಿ ಕೆಲಸವನ್ನು ನಂಬಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವುಗಳು ಅವರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಉತ್ತಮ ಆಡಳಿತ ನಿರೀಕ್ಷಿಸಲಾಗುವುದಿಲ್ಲ. ಹಾಗಾಗಿ ಅವರನ್ನು ಸ್ವಾವಲಂಭಿಗಳಾಗಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತ್ಯವ್ಯವಾಗಿರುತ್ತದೆ.
ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನವು ಕಳೆದ 5 ವರ್ಷಗಳಿಂದ ಹೆಚ್ಚಳವಾಗಿರುವುದಿಲ್ಲ. ಈಗ ಅವರಿಗೆ ಸಿಗುವ ಗೌರವ ಧನ ಕೇವಲ 1000 ರೂ. ನೀಡಲಾಗುತ್ತಿದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಶೇಕಡ 100ರಷ್ಟು ಗ್ರಾಮೀಣ ಪ್ರದೇಶದವರಾಗಿದ್ದು ಅವರಿಗೆ ಯಾವುದೇ ಇತರ ಮೂಲ ಆದಾಯ ಇರುವುದಿಲ್ಲ. ಒಂದು ಬಾರಿ ಚುನಾಯಿತರಾಗಿ ಆಯ್ಕೆಯಾದ ನಂತರ ಸದಸ್ಯರು ತಮ್ಮ ಇತರ ಉದ್ಯೋಗ ಅಥವಾ ಕೆಲಸ ಕಾರ್ಯಗಳಿಂದ ವಂಚಿತರಾಗಿ ಅವರ ಆರ್ಥಿಕ ಪರಿಸ್ಥಿತಿ ಅತ್ಯಂತ ದುಸ್ತರವಾಗುತ್ತದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಸದ್ರಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಲ್ಲಿ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಈ ಬೇಡಿಕೆಗಳನ್ನು ಈಡೇರಿಸುವಂತೆ ವಿಧಾನ ಪರಿಷತ್ ಶಾಸಕರ ನಿಯೋಗವು ಮುಖ್ಯಮಂತ್ರಿಯವರಲ್ಲಿ ಕೋರಿಕೊಂಡಿದೆ.