ದೇಹ ಸೌಖ್ಯದ ಕಾಳಜಿಯಿಂದ ಆತ್ಮಸ್ಥೈರ್ಯ ಹಾಳು: ಲಕ್ಷ್ಮೀಶ ತೋಳ್ಪಾಡಿ

Update: 2022-03-15 16:23 GMT

ಬೆಂಗಳೂರು, ಮಾ.15: ಮನಸ್ಸು ದೇಹ ಕೇಂದ್ರಿಕೃತವಾಗಿದೆ. ದೇಹದ ಬಗ್ಗೆ ಆಸಕ್ತಿ ತೊರೆದು ತನುವಿನ ಅಂತರದಲ್ಲಿರುವ ಅರಿವಿನ ಶೋಧನೆ ಮಾಡಿದಾಗ ಮಾತ್ರ ಅದರ ಸತ್ಯ ಗೋಚರವಾಗಲಿದೆ ಎಂದು ಆಧ್ಯಾತ್ಮಿಕ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ಬಸವ ಭವನದಲ್ಲಿ ಬಸವರಾಜಸ್ವಾಮಿ ಅವರು ಬರೆದ ಸಿದ್ದರಾಮ ಶಿವಯೋಗಿಗಳ ವಚನಾನುಭಾವ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಂತರಮುಖಿ ಸತ್ಯದ ವ್ಯಾಖ್ಯಾನ ಈ ಪುಸ್ತಕದಲ್ಲಿ ಅನಾವರಣವಾಗಿದೆ. ಪ್ರತಿ ವಚನದಲ್ಲಿಯೂ ಒಂದು ಸೂತ್ರವಿದೆ, ಮನುಷ್ಯನ ದೇಹದಲ್ಲಿ ಅಡಗಿದ ಅರಿವಿನ ಅರಿವು ಮನುಷ್ಯನಿಗೆ ಆಗಬೇಕಾದರೆ ಅಂತರ ಶೋಧವಾಗಬೇಕು. ಆಧುನಿಕ ಸಮಾಜದಲ್ಲಿ ದೇಹ ಸೌಖ್ಯದ ಕಾಳಜಿಯೇ ಹೆಚ್ಚಾಗಿದೆ. ಅದು ಮನುಷ್ಯನ ಆತ್ಮಸ್ಥೈರ್ಯವನ್ನೇ ಹಾಳು ಮಾಡಿದೆ ಎಂದರು.

ಯಾವುದು ಗೊತ್ತಾಗಬೇಕು ಅದು ಗೊತ್ತಾಗುತ್ತಿಲ್ಲ, ಆದರೆ ಗೊತ್ತಾಗಬಾರದ್ದು ಗೊತ್ತಾದರೆ ಏನು ಪ್ರಯೋಜನ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು ದೇಹದ ಮೇಲೆ ಆಸೆ ಬಿಟ್ಟರೆ ಅರಿವಿನ ಪರಿಚಯವಾಗುತ್ತದೆ. ಆ ದಿಶೆಯಲ್ಲಿ ನಾವು ಸಾಗಬೇಕು ಎಂದರು.

ಲೇಖಕ ಬಸವರಾಜಸ್ವಾಮಿ ಮಾತನಾಡಿ, ಉಪಜೀವನಕ್ಕಾಗಿ ಬದುಕುವ ಈ ಸಮಾಜದಲ್ಲಿ ಕಲ್ಲಿನ ಮೂರ್ತಿಗೆ ನಮಸ್ಕರಿಸುವ ಪ್ರವೃತ್ತಿ ಇದೆ, ಮನುಷ್ಯನ ದೇಹದಲ್ಲಿಯೇ ಅಗಾಧ ಶಕ್ತಿ ಅರಿವಿನ ಶಕ್ತಿ ಇದ್ದರೂ ಅದನ್ನು ತಿಳಿಯುವ ಮತ್ತು ಅದರ ಜ್ಞಾನ ಪಡೆಯಬೇಕೆಂದರೆ ಅರಿವೇ ಗುರುವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಪ್ರತಿಯೊಬ್ಬರಿಗೂ ಭೌತಿಕ ಸಂಪತ್ತಿನ ಕಡೆ ಹೆಚ್ಚು ಒಲವು ಇದೆ, ಜ್ಞಾನದ ಸಂಪತ್ತಿನ ಕಡೆ ಆಸಕ್ತಿ ಇಲ್ಲ. ಕಲ್ಯಾಣ ಕ್ರಾಂತಿ ಅರಿವಿನ ಕ್ರಾಂತಿಯಾಗಿತ್ತು. ಸಮಾಜದಲ್ಲಿ ಸಮಾನತೆ ಸಾರಲು ಬಸವಣ್ಣನ ಕೊಡುಗೆ ಅಪಾರವಾಗಿದೆ. ಬಸವ ಸಮಿತಿ 40 ವರ್ಷಗಳಿಂದ ಬಸವ ತತ್ವದ ಪ್ರಚಾರಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News