×
Ad

ಬೆಳ್ತಂಗಡಿ; ತಂದೆಯ ಕೊಲೆಗೈದ ಪುತ್ರನ ಆರೋಪ ಸಾಬೀತು

Update: 2022-03-31 19:25 IST

ಮಂಗಳೂರು : ಬೆಳ್ತಂಗಡಿಯಲ್ಲಿ  ಒಂದು ವರ್ಷದ ಹಿಂದೆ ತಂದೆಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ಮಂಗಳೂರಿನ 4ನೇ ಜಿಲ್ಲಾ  ಮತ್ತು ಸತ್ರ ನ್ಯಾಯಾಲಯದಲ್ಲಿ  ನಡೆದಿದ್ದು, ಪುತ್ರನ ಮೇಲಿನ ಆರೋಪ ಸಾಬೀತಾಗಿದೆ.

2021 ಜನವರಿ 18 ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು  ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್ ಪೂಜಾರಿ (28) ಕೊಲೆ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.

ಆರೋಪಿ ಹರೀಶ್ ಪೂಜಾರಿ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದು, ಅವರ ಮದುವೆಗೆ ಮನೆಯವರಿಂದ ವಿರೋಧವಿತ್ತು. ಪುತ್ರಿಯ  (ಹರೀಶನ ಸಹೋದರಿ) ಮದುವೆ ಆಗದೆ ಪುತ್ರನ ಮದುವೆ ಮಾಡುವುದಿಲ್ಲ  ಎಂದು ತಂದೆ ಶ್ರೀಧರ ಪೂಜಾರಿ ತಿಳಿಸಿದ್ದರು. ಇದರಿಂದ ಮನೆ ಮಂದಿಯ ಜತೆ ಮನಸ್ತಾಪ ಹೊಂದಿದ್ದ ಹರೀಶ್ 2021 ಜನವರಿಯಲ್ಲಿ  ತನ್ನ ಪ್ರೇಯಸಿ ಜತೆಗೆ ಮನೆ ಬಿಟ್ಟು  ಹೋಗಿದ್ದ. ಆದರೆ 3 ವಾರಗಳ ಬಳಿಕ ವಾಪಸ್ ಬಂದಾಗ ಪುತ್ರನಿಗೆ ಆತನ ಪ್ರೇಯಸಿಯ ಜತೆ  ಮನೆಗೆ ಸೇರಿಸಲು ತಂದೆ ಆಕ್ಷೇಪಿಸಿದ್ದರು. ಜ. 18 ರಂದು ಮಧ್ಯಾಹ್ನ ಇದೇ ವಿಚಾರದಲ್ಲಿ  ಪಕ್ಕದ ಮನೆಯ ಸಮೀಪ ತಂದೆ ಮತ್ತು ಮಗನ  ಮಧ್ಯೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿ ಅವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದನು. ಬಳಿಕ ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದಾಗ ಪುತ್ರ ಹರೀಶ್ ಮರದ ಪಕ್ಕಾಸಿನಿಂದ ತಂದೆಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ  ಶ್ರೀಧರ್ ಪೂಜಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ  ಸಾವನ್ನಪ್ಪಿದ್ದರು ಎಂದು ದೂರು ದಾಖಲಾಗಿತ್ತು.

ಈ ಬಗ್ಗೆ  ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿ ಇನ್ಸ್‌ಪೆಕ್ಟರ್ ಸಂದೇಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು  ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 4ನೇ ಜಿಲ್ಲಾ  ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ  ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸ ಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News