ಹಿಜಾಬ್ ಕುರಿತು ಸಚಿವರ ಹೇಳಿಕೆ ಹೈಕೋರ್ಟ್ ತೀರ್ಪಿನ ಉಲ್ಲಂಘನೆ: ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್
Update: 2022-03-31 15:04 GMT
ಬೆಂಗಳೂರು, ಮಾ.31: ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಧರಿಸಲು ಅನುಮತಿಸುವುದಿಲ್ಲ ಎಂಬ ಸಚಿವರ ಹೇಳಿಕೆಯು ಸರಕಾರದ ಆದೇಶ ಮತ್ತು ಹೈಕೋರ್ಟ್ನ ತೀರ್ಪಿಗೆ ವಿರುದ್ಧವಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೊಸಿಯೇಷನ್ ಫಾರ್ ಜಸ್ಟೀಸ್(ಎಐಎಲ್ಎಜೆ) ಆರೋಪಿಸಿದೆ.
ಈ ಕುರಿತು ಬಿ.ಸಿ.ನಾಗೇಶ್ ಅವರಿಗೆ ಪತ್ರವನ್ನು ಬರೆದಿದ್ದು, ಹಿಜಾಬ್ ಧರಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ಗೆ ಪ್ರವೇಶ ನೀಡುವುದನ್ನು ನಿರಾಕರಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದು, ಸಮವಸ್ತ್ರದ ಕುರಿತ ನಿಯಮಗಳು ಮತ್ತು ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಮಾಹಿತಿ ನೀಡಿದೆ.
ಸಚಿವರ ಹೇಳಿಕೆಗಳು ಕರ್ನಾಟಕ ಹೈಕೋರ್ಟಿನ ತೀರ್ಪಿನ ಮತ್ತು ಸಂಬಂಧಿತ ಸರಕಾರಿ ಆದೇಶಗಳಿಗೆ ವಿರುದ್ಧವಾಗಿದ್ದು, ತಮ್ಮ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದ್ದು, ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆಯೂ ಸಚಿವರಿಗೆ ಅಸೋಸಿಯೇಷನ್ ಪತ್ರದಲ್ಲಿ ಕೇಳಲಾಗಿದೆ.