ಸಚಿವ ಮುನಿರತ್ನ ಸೀರೆ ಹಂಚಿದ್ದನ್ನು ಕಂಡವರಿದ್ದಾರೆ: ಹೈಕೋರ್ಟ್ನಲ್ಲಿ ಸಾಕ್ಷ್ಯ ನುಡಿದ ಮುನಿರಾಜುಗೌಡ
ಬೆಂಗಳೂರು, ಎ.6: ತೋಟಗಾರಿಕಾ ಸಚಿವ ಮುನಿರತ್ನ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿ ಅವರ ಅಸಲಿ ಮತದಾರ ಚೀಟಿಗಳನ್ನು ಸಂಗ್ರಹಿಸಿ ಇಟ್ಟುಕೊಂಡ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ನನಗೆ ತಿಳಿಸಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಎಂ.ಮುನಿರಾಜುಗೌಡ ಅವರು ಹೈಕೋರ್ಟ್ಗೆ ಮುಂದೆ ಸಾಕ್ಷ್ಯ ನುಡಿದಿದ್ದಾರೆ.
ಸದ್ಯ ಬಿಜೆಪಿ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಪಿ.ಎಂ.ಮುನಿರಾಜುಗೌಡ, ಹೈಕೋರ್ಟ್ನ ಸಾಕ್ಷಿ ಕಟಕಟೆಯಲ್ಲಿ ನಿಂತು ಸಾಕ್ಷ್ಯ ನುಡಿದಿದ್ದಾರೆ.
ಮುನಿರತ್ನ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸುವಲ್ಲಿ ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು ಎಂದು ಕೋರಿ ವಿಧಾನಪರಿಷತ್ನ ಬಿಜೆಪಿ ಸದಸ್ಯರೂ ಆಗಿರುವ ಪಿ.ಎಂ.ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನಡೆಸಿತು. ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮುನಿರಾಜು ಗೌಡ, ಮುನಿರತ್ನ ಸೀರೆ ಹಂಚುತ್ತಿರುವ ಭಾವಚಿತ್ರಗಳನ್ನು ಅವರದೇ ಫೇಸ್ಬುಕ್ನಲ್ಲಿ ಹಾಕಿಕೊಂಡಿರುವುದನ್ನು ನಾನಿಲ್ಲಿ ಹಾಜರುಪಡಿಸುತ್ತಿದ್ದೇನೆ ಎಂದು ದೃಢೀಕೃತ ದಾಖಲೆಗಳನ್ನು ಸಲ್ಲಿಸಿದರು.
ಮುನಿರತ್ನ ಅವರು 2018ರಲ್ಲಿ ಮಹಾಶಿವರಾತ್ರಿ ದಿನದಂದು ಮಹಿಳಾ ಮತದಾರರಿಗೆ ಸೀರೆಗಳನ್ನು ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಮುನಿರತ್ನ, ಲಗ್ಗೆರೆಯ ನಾಮನಿರ್ದೇಶಿತ ಸದಸ್ಯ ಎಚ್.ಎಸ್.ಸಿದ್ದೇಗೌಡ, ಯಶವಂತಪುರದ ಬಿಬಿಎಂಪಿ ಸದಸ್ಯ ಜಿ.ಕೆ.ವೆಂಕಟೇಶ್ ಸೇರಿ ಹಲವರು ನೇರವಾಗಿ ಭಾಗಿಯಾಗಿ ಮಹಿಳಾ ಮತದಾರರಿಗೆ ಸೀರೆಯನ್ನು ಹಂಚಿದರು ಎಂದು ಮುನಿರಾಜುಗೌಡ ವಿವರಿಸಿದರು.
ಈ ಘಟನೆಗೆ ಸಾಕ್ಷಿಯಾಗಿ ಪಿ.ಪುರುಷೋತ್ತಮ್, ಆನಂದಕುಮಾರ್, ಜಿ.ಸಂತೋಷ್ ಕುಮಾರ್ ಮತ್ತು ಮಂಜುನಾಥ್ ಪ್ರತ್ಯಕ್ಷವಾಗಿ ಕಂಡಿರುತ್ತಾರೆ ಹಾಗೂ ಈ ಸಂಗತಿಯನ್ನು ಅವರು ನನಗೆ ತಿಳಿಸಿರುತ್ತಾರೆ ಎಂದು ಮುನಿರಾಜುಗೌಡ ತಿಳಿಸಿದರು. ಕಲಾಪದ ಅವಧಿ ಪೂರ್ಣಗೊಂಡ ಕಾರಣ ವಿಚಾರಣೆಯನ್ನು ಎ.11ಕ್ಕೆ ಮುಂದೂಡಲಾಗಿದೆ.