ರಾಷ್ಟ್ರಪತಿ ಚುನಾವಣೆ: ಜಂಟಿ ಅಭ್ಯರ್ಥಿ ಕಣಕ್ಕಿಳಿಸಲು ವಿಪಕ್ಷ ಚಿಂತನೆ

Update: 2022-04-08 02:04 GMT
(ಫೋಟೊ - PTI)

ಹೊಸದಿಲ್ಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‍ಡಿಎ) ಅಭ್ಯರ್ಥಿಯ ವಿರುದ್ಧ ಜಂಟಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಚಿಂತನೆ ನಡೆಸಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ವಿರೋಧ ಪಕ್ಷಗಳ ಆಯ್ಕೆಯು, ಎನ್‍ಡಿಎ ಅಭ್ಯರ್ಥಿ ಆಯ್ಕೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ ಅವರು, ಆಡಳಿತಾರೂಢ ಮೈತ್ರಿಕೂಟದ ರಾಜಕೀಯ ಅಥವಾ ಸಾಮಾಜಿಕ ಮಾನದಂಡಗಳನ್ನು ಸರಿಹೊಂದುವಂಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆ ಮುಂದಿನ ಜುಲೈನಲ್ಲಿ ನಡೆಯಲಿದ್ದು, ಬಳಿಕ ಆಗಸ್ಟ್ ನಲ್ಲಿ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಾಜಿ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದವು. ಆಡಳಿತಾರೂಢ ಪಕ್ಷಕ್ಕೆ 6,61,278 ಮತಗಳು ಸಿಕ್ಕಿದರೆ, ಮೀರಾ ಅವರಿಗೆ 4,34,241 ಮತ ದೊರಕಿತ್ತು.

ವಿರೋಧ ಪಕ್ಷಗಳು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯ ವಿರುದ್ಧ ನಿಶ್ಚಿತವಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿವೆ" ಎಂದು ಹೇಳಿದರು. ಆದರೆ ವಿರೋಧ ಪಕ್ಷಗಳ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಕ್ಷೀಣ. ಎನ್‍ಡಿಎಗೆ ಬಹುಮತಕ್ಕೆ ಅಗತ್ಯ ಇರುವ 9000 ಮತದಾರರ 549452 ಮತಗಳ ಕೊರತೆ ಇದ್ದರೂ, ಬಿಜು ಜನತಾದಳ ಮತ್ತು ವೈಎಸ್‍ಆರ್ ಕಾಂಗ್ರೆಸ್‍ನಂಥ ಪಕ್ಷಗಳು ಬಿಜೆಪಿಯನ್ನು ಬೆಂಬಿಸುವ ಸಾಧ್ಯತೆ ಇದೆ. ಅಂತೆಯೇ ಎಲ್ಲ ಪಕ್ಷಗಳೂ ಒಪ್ಪುವಂಥ ಅಭ್ಯರ್ಥಿಯನ್ನು ಸೂಚಿಸುವುದು ಕಾಂಗ್ರೆಸ್ ಪಕ್ಷಕ್ಕೆ ಕೂಡಾ ಕಷ್ಟದ ಕೆಲಸ.

ಇತ್ತೀಚಿನ ಇತಿಹಾಸದಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಮಾತ್ರ ಬಹುತೇಕ ಅವಿರೋಧ ಆಯ್ಕೆಯಾಗಿದ್ದರು. ಆಡಳಿತ ಪಕ್ಷ ಹಾಗೂ ಬಹುತೇಕ ವಿರೋಧ ಪಕ್ಷಗಳು ಅವರನ್ನು ಬೆಂಬಲಿಸಿದ್ದವು. ಆದರೆ ಎಡಪಕ್ಷಗಳು ಮಾತ್ರ ಎನ್‍ಐಎ ಮಾಜಿ ಸೈನಿಕರಾದ ಲಕ್ಷ್ಮಿ ಸೆಹಗಲ್ ಅವರನ್ನು ಕಣಕ್ಕೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News