ಪದೇ ಪದೇ ಬಿಎಂಟಿಸಿ ಬಸ್‍ಗಳಿಗೆ ಬೆಂಕಿ ಹಿನ್ನೆಲೆ: 186 ಲೈಲ್ಯಾಂಡ್ ಬಸ್ ಸಂಚಾರ ಸ್ಥಗಿತ

Update: 2022-04-14 16:26 GMT

ಬೆಂಗಳೂರು, ಎ.14: ಪದೇ ಪದೇ ಬಸ್‍ಗಳಿಗೆ ಬೆಂಕಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಸಂಸ್ಥೆ ಅಶೋಕ್ ಲೈಲ್ಯಾಂಡ್‍ನ 186 ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಕಳೆದ ಕೆಲವು ದಿನಗಳಲ್ಲಿ ಮೂರು ಬಿಎಂಟಿಸಿ ಬಸ್‍ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ಕಳೆದ ಜ.21 ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ ಒಂದು ಬಸ್ ಹಾಗೂ ಫೆ.1ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಪ್ರಯಾಣಿಕರಿದ್ದ ಸಂದರ್ಭದಲ್ಲೇ ಎರಡು ಬಸ್‍ಗಳಿಗೆ ಬೆಂಕಿ ಬಿದ್ದಿತ್ತು. ಬೆಂಕಿಗೆ ಆಹುತಿಯಾದ ಎರಡು ಬಸ್‍ಗಳು ಒಂದೇ ಬ್ಯಾಚ್‍ನಲ್ಲಿ ಖರೀದಿಸಿದ್ದ ಅಶೋಕ್ ಲೈಲ್ಯಾಂಡ್‍ನ ಸಂಸ್ಥೆಯ ಬಸ್‍ಗಳಾಗಿದ್ದವು.

ಹೀಗಾಗಿ, ಲೈಲ್ಯಾಂಡ್ ಸಂಸ್ಥೆಯ ತಜ್ಞರನ್ನು ಕರೆಸಿ ಲೋಪದೋಷ ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು. ತಜ್ಞರು ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿ ಲೋಪದೋಷ ಸರಿಪಡಿಸಿ ಎಲ್ಲ ಓಕೆ ಎಂದು ತೆರಳಿದ್ದರು. ಆದರೆ, ತಜ್ಞರು ಬಂದು ಹೋದ ಒಂದು ತಿಂಗಳೊಳಗೆ ಅಂದರೆ ಎ.9ರಂದು ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್ ಬೆಂಕಿಗೆ ಆಹುತಿಯಾಗಿತ್ತು.

ನಗರದಲ್ಲಿ ಹೆಚ್ಚಿರುವ ತಾಪಮಾನದಿಂದ ಬಸ್‍ಗಳಿಗೆ ಬೆಂಕಿ ಬೀಳುತ್ತಿರಬಹುದೆಂದು ಭಾವಿಸಿದ್ದೆವು. ಆದರೆ, ಒಂದೇ ಬ್ಯಾಚ್‍ನಲ್ಲಿ ಖರೀದಿಸಿದ್ದ ಲೈಲ್ಯಾಂಡ್ ಸಂಸ್ಥೆಯ ಬಸ್‍ಗಳಿಗೆ ಬೆಂಕಿ ಬೀಳುತ್ತಿರುವುದು ಖಾತ್ರಿಯಾಗಿರುವ ಹಿನ್ನಲೆಯಲ್ಲಿ ಲೈಲ್ಯಾಂಡ್ ಬಸ್‍ಗಳ ಸಂಚಾರ ರದ್ದುಗೊಳಿಸಲು ತೀರ್ಮಾನಿಸಲಾಯಿತು ಎಂದು ವೆಂಕಟೇಶ್ ವಿವರಣೆ ನೀಡಿದ್ದಾರೆ.

ಅಶೋಕ್ ಲೈಲ್ಯಾಂಡ್ ಬಸ್ ಸಂಚಾರ ರದ್ದುಗೊಳಿಸಿರುವ ಬಗ್ಗೆ ಎಲ್ಲ ಡಿಪೋಗಳಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಬಸ್ ಸಂಚಾರ ನಡೆಸಿ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News