ಉತ್ತರ ಪ್ರದೇಶ: ದಲಿತ ಬಾಲಕನಿಗೆ ಥಳಿಸಿ ಪಾದವನ್ನು ನೆಕ್ಕಿಸಿದ ದುಷ್ಕರ್ಮಿಗಳು!

Update: 2022-04-19 05:37 GMT
Photo: ndtv

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಅಪ್ರಾಪ್ತ ದಲಿತ ಬಾಲಕನೊಬ್ಬನಿಗೆ ಗುಂಪೊಂದು ಥಳಿಸಿದ್ದೇ ಅಲ್ಲದೆ ಆತನಿಂದ ಬಲವಂತವಾಗಿ ಆರೋಪಿಗಳಲ್ಲೊಬ್ಬನ ಪಾದವನ್ನು ನೆಕ್ಕಿಸಲಾಗಿದೆ. ಈ ಘಟನೆ ಕುರಿತಾದ 2 ನಿಮಿಷ 30 ಸೆಕೆಂಡ್ ಅವಧಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕ ಅದರಲ್ಲಿ ಕೈಗಳನ್ನು ಕಿವಿಗೆ ಹಿಡಿದು ನೆಲದಲ್ಲಿ ಕುಳಿತಿರುವುದು ಕಾಣಿಸುತ್ತದೆ. ಆತ ಭಯದಿಂದ ನಡುಗುತ್ತಿರುವುದನ್ನು ಕಂಡು ಮೋಟಾರ್ ಸೈಕಲ್‍ಗಳಲ್ಲಿ ಕುಳಿತಿರುವ ಆರೋಪಿಗಳು ನಗುತ್ತಿರುವುದೂ ಕಾಣಿಸುತ್ತದೆ. ಆರೋಪಿಗಳಲ್ಲೊಬ್ಬಾತ ಬಾಲಕನಿಗೆ ಠಾಕುರ್ ಎಂದು ಹೇಳು ಎಂದು ಹೇಳಿ ನಂತರ  ಆತನಿಗೆ ನಿಂದಿಸಿ "ಮತ್ತೆ ಇಂತಹ ತಪ್ಪು ಮಾಡುತ್ತೀಯಾ?'' ಎಂದು ಹೇಳುವುದು ಕೇಳಿಸುತ್ತದೆ ಎಂದು ndtv.com ವರದಿ ಮಾಡಿದೆ.

ಬಾಲಕ ಗಾಂಜಾ ಮಾರಾಟ ಮಾಡಿದ್ದಾನೆ ಎಂದು ಆರೋಪಿಗಳು ದೂರಿದ್ದಾರೆ ಎನ್ನಲಾಗಿದೆ.

ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಘಟನೆ ಎಪ್ರಿಲ್ 10ರಂದು ನಡೆದಿದೆಯೆನ್ನಲಾಗಿದ್ದು ಸಂತ್ರಸ್ತ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ. ಆರೋಪಿಗಳಲ್ಲಿ ಕೆಲವರು ಮೇಲ್ವರ್ಗಕ್ಕೆ ಸೇರಿದವರು ಎಂದು ಹೇಳಲಾಗಿದೆ.

ಸಂತ್ರಸ್ತ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು ತನ್ನ ವಿಧವೆ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಆತನ ತಾಯಿ ಕೆಲ ಆರೋಪಿಗಳ ತೋಟಗಳಲ್ಲಿ ಕೆಲಸ ಮಾಡಿದ್ದು ಆಕೆ ಮಾಡಿದ ಕೆಲಸಕ್ಕೆ ಹಣ ನೀಡುವಂತೆ ಬಾಲಕ ಕೇಳಿದ್ದಕ್ಕೆ ಆತನ ವಿರುದ್ಧ ಆರೋಪ ಹೊರಿಸಿ ಆತನಿಗೆ ಅವರು ಥಳಿಸಲು ಕಾರಣವೆನ್ನಲಾಗಿದೆ.

ಆದರೆ ಪೊಲೀಸರು ದಾಖಲಿಸಿರುವ ಎಫ್‍ಐಆರ್ ನಲ್ಲಿ ಪ್ರಕರಣದ ಸೂಕ್ಷ್ಮ ವಿಚಾರಗಳನ್ನು ಉಲ್ಲೇಖಿಸಿಲ್ಲವೆನ್ನಲಾಗಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News