ಬೆಂಗಳೂರು: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಇನ್ಸ್ಪೆಕ್ಟರ್
Update: 2022-04-21 10:04 IST
ಬೆಂಗಳೂರು: ಗ್ಯಾಸ್ ಪೈಪ್ಲೈನ್ ಗೆ ರಸ್ತೆ ಅಗೆಯುವುದಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಚಿಕ್ಕಜಾಲ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಹಂಸವೇಣಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್ ಗ್ಯಾಸ್ ಕಂಪೆನಿ ವತಿಯಿಂದ ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಲು ಮುಂದಾಗಿದ್ದರು. ಈ ಬಗ್ಗೆ ಅನುಮತಿ ಪಡೆಯಲು ಸಂಚಾರ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ ಇನ್ಸ್ಪೆಕ್ಟರ್ ಹಂಸವೇಣಿ ಪರ್ಮಿಷನ್ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಹಂಸವೇಣಿ ಅವರು ಬುಧವಾರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ.