ಸುದ್ದಿಯೊಂದಿಗೆ ಅಭಿಪ್ರಾಯ ಸೇರಿ ನೈಜತೆ ಮರೆಮಾಚಿದೆ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
ಬೆಂಗಳೂರು, ಎ. 24: ಸದಾ ತಮ್ಮ ಅಭಿಪ್ರಾಯದೊಂದಿಗೆ ಸುದ್ದಿಗಳನ್ನು ಸೇರಿಸುವುದನ್ನು ಕಾಣುತ್ತಿದ್ದು, ಇದರಿಂದ ನೈಜ ಚಿತ್ರಣಗಳನ್ನೆ ಮರೆಮಾಚಿಸಲಾಗುತ್ತಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಬೆಂಗಳೂರು ಪ್ರೆಸ್ಕ್ಲಬ್ನ 50ನೆ ವಾರ್ಷಿಕೋತ್ಸವ ಅಂಗವಾಗಿ ಪ್ರೆಸ್ಕ್ಲಬ್ ಆವರಣದಲ್ಲಿ ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಕೆಲ ಮಾಧ್ಯಮಗಳು ಸದಾ ತಮ್ಮ ಅಭಿಪ್ರಾಯದೊಂದಿಗೆ ಸುದ್ದಿಗಳನ್ನು ಸೇರಿಸುವುದನ್ನು ಕಾಣುತ್ತಿದ್ದೇನೆ. ಇದು ಎಷ್ಟರಮಟ್ಟಿಗೆ ಎಂದರೆ ಪತ್ರಿಕೆಗಳಾಗಲಿ ಅಥವಾ ದೂರದರ್ಶನ ವಾಹಿನಿಗಳಾಗಲಿ ಕೆಲವು ಘಟನೆಗಳ ನೈಜ ಚಿತ್ರಣವನ್ನೆ ನೀಡುವುದಿಲ್ಲ ಎನ್ನುವಷ್ಟು ಭಾವಿಸುವಂತಾಗಿದೆ ಎಂದು ಹೇಳಿದರು.
ಸಂಸತ್ತು ಮತ್ತು ಸರಕಾರವು ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿಗಳ ವಿಷಯವನ್ನು ಪರಿಶೀಲಿಸಬೇಕು. ಜತೆಗೆ, ಸುಳ್ಳು ಸುದ್ದಿಗಳನ್ನು ಎದುರಿಸಲು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮುಕ್ತ, ಸ್ವಾತಂತ್ರ ಮತ್ತು ನಿರ್ಭೀತ ಪತ್ರಿಕಾ ಮಾಧ್ಯಮವಿಲ್ಲದೆ ಸದೃಢ ಮತ್ತು ಸಕ್ರಿಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು ಭಾರತಕ್ಕೆ ಸದೃಢ, ಸ್ವತಂತ್ರ ಮತ್ತು ಸಕ್ರಿಯ ಮಾಧ್ಯಮದ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದರು.
ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಜೀವಂತವಿರಬೇಕು. ಅದರಲ್ಲೂ ಪ್ರಮುಖವಾಗಿ ಸುದ್ದಿಯನ್ನು ಅಭಿಪ್ರಾಯಗಳೊಂದಿಗೆ ಬೆರೆಸಬಾರದು ಎಂದ ಅವರು, ಸಾಂವಿಧಾನಿಕ ಕಾನೂನಿನ ನಿಯಮವನ್ನು ಬಲಪಡಿಸುವ ವಿಚಾರಕ್ಕೆ ಬಂದರೆ, ಮುಕ್ತ ಮತ್ತು ನ್ಯಾಯಸಮ್ಮತ ಮಾಧ್ಯಮ ಸ್ವತಂತ್ರ ನ್ಯಾಯಾಂಗಕ್ಕೆ ಪೂರಕವಾಗಿದೆ ಎಂದರು.
ಸಾರ್ವಜನಿಕ ಭಾಷಣಗಳಲ್ಲಿ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಅವರು, ಶಾಸನ ಸಭೆಗಳಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಸದಸ್ಯರಿಗೆ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವ ಮೂಲಕ ರಾಜಕೀಯ ಪಕ್ಷಗಳು ತಮ್ಮನ್ನು ತಾವು ಸ್ವಯಂ ನಿಬರ್ಂಧಿಸಿಕೊಳ್ಳುವಂತೆ ಮಾಡಬೇಕೆಂದರು.
ತಮ್ಮ ರಾಜಕೀಯ ಎದುರಾಳಿಗಳ ಮೇಲೆ ವೈಯಕ್ತಿಕ ದಾಳಿ ಮಾಡದಂತೆ ಸಾರ್ವಜನಿಕ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಯಾವುದೇ ಲೋಪ ದೋಷಗಳನ್ನು ನಿವಾರಿಸಲು ಪಕ್ಷಾಂತರ ವಿರೋಧಿ ಕಾನೂನನ್ನು ಮರು ಪರಿಶೀಲಿಸುವಂತೆಯೂ ಅವರು ಕರೆ ನೀಡಿದರು.
ಮಾಧ್ಯಮಗಳು ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ನಡೆಸುವ ರಚನಾತ್ಮಕ ಭಾಷಣಗಳನ್ನು ಪ್ರಮುಖವಾಗಿ ಪ್ರಸಾರ ಮಾಡಬೇಕೇ ಹೊರತು ಅಡ್ಡಿಪಡಿಸುವ ಪ್ರಸಂಗಗಳನ್ನಲ್ಲ ಎಂದು ವೆಂಕಯ್ಯನಾಯ್ಡು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಉಪಾಧ್ಯಕ್ಷ ಎಸ್. ಶ್ಯಾಮ್ ಪ್ರಸಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.