ಗ್ರಾಮೀಣ ಭಾರತದ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು: ಡಾ.ಮಿರ್ಜಾ ಬಶೀರ್

Update: 2022-04-24 18:08 GMT

ಬೆಂಗಳೂರು, ಎ. 24: ಗ್ರಾಮೀಣ ಭಾರತದ ಕನಸುಗಳು ಮುರುಟಿ ಹೋಗುತ್ತಿರುವ ಈ ಸಮಯದಲ್ಲಿ ಅದರ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು ಎಂದು ಸಾಹಿತಿ ಹಾಗೂ ವೈದ್ಯ ಡಾ. ಮಿರ್ಜಾ ಬಷೀರ್ ಅವರು ಅಭಿಪ್ರಾಯಪಟ್ಟರು.

ರವಿವಾರ ‘ಬಹುರೂಪಿ' ಪ್ರಕಾಶನ ನಗರದಲ್ಲಿ ಅವಧಿ ಪುಸ್ತಕ ವತಿಯಿಂದ ಸರೋಜಿನಿ ಪಡಸಲಗಿ ಅವರ ‘ಡಾಕ್ಟರ್ ಹೆಂಡತಿ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತದಲ್ಲಿಯೇ ಸೇವೆ ಮಾಡಬೇಕು ಎಂದು ಆಯ್ಕೆ ಮಾಡಿಕೊಂಡು ಹೊರಟ ವೈದ್ಯರ ಅನುಭವ, ಹಾಗೆಯೇ ಅವರ ಕುಟುಂಬದ ಆತಂಕ, ತಲ್ಲಣಗಳು ಇದರಲ್ಲಿ ಮಡುಗಟ್ಟಿವೆ ಎಂದು ತಿಳಿಸಿದರು.

ಲೇಖಕಿ ವಾಸಂತಿ ಪ್ರಭಾಕರ ನಾಯಕ್ ಮಾತನಾಡಿ, ವೈದ್ಯ-ವೃತ್ತಿ ಇಂದು ವ್ಯಾಪಾರವಾಗಿರುವ ಸಂದರ್ಭದಲ್ಲಿ ಗ್ರಾಮೀಣ ಜನರ ಬದುಕು ಉಳಿಸಲು ಹೊರಟಿರುವ ವೈದ್ಯ ಕುಟುಂಬದ ತಲ್ಲಣಗಳನ್ನು ಈ ಕೃತಿ ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಆರೋಗ್ಯದ ಬೆಳಕಿನ ಕಿರಣಗಳು ಇಂದು ಎಲ್ಲರಿಗೂ ಸಿಗದ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಈ ಕೃತಿ ಭರವಸೆ ಮೂಡಿಸುತ್ತದೆ ಎಂದು ಅವರು ಹೇಳಿದರು.

ಕೃತಿಯ ಲೇಖಕಿ ಸರೋಜಿನಿ ಪಡಸಲಗಿ ಮಾತನಾಡಿ, ಈ ಕೃತಿ ನನ್ನ ಒಳಗನ್ನು ಕಲಕಿದೆ. ಇಲ್ಲಿ ನನ್ನ ಸಂಭ್ರಮ ಮತ್ತು ತಲ್ಲಣ ಎರಡೂ ಮಡುಗಟ್ಟಿದೆ ಎಂದರು. ‘ಬಹುರೂಪಿ'ಯ ಮುಖ್ಯಸ್ಥ ಜಿ.ಎನ್.ಮೋಹನ್, ವೈದ್ಯ ಸುರೇಶ್ ಪಡಸಲಗಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News