ಉಪ್ಪಿನಂಗಡಿಯಲ್ಲಿ `ಅಮೃತ ಸಂಗಮ' ಉದ್ಘಾಟನೆ

Update: 2022-05-01 10:44 GMT

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಅಮೃತ ಮಹೋತ್ಸವ ವರ್ಷಾಚರಣೆಯಂಗವಾಗಿ ವರ್ಷಪೂರ್ತಿ ನಡೆಯಲಿರುವ `ಅಮೃತ ಸಂಗಮ' ಕಾರ್ಯಕ್ರಮದ ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಇಲ್ಲಿನ ಸಂಗಮ ಕೃಪಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ, ಸ್ವಾತಂತ್ರ್ಯ ಭಾರತದ ಪೂರ್ವದಲ್ಲೇ ಸಹಕಾರಿ ಭಾವನೆ ನಮ್ಮ ದೇಶದಲ್ಲಿತ್ತು. ಅದರಿಂದಲೇ ಸಹಕಾರ ಸಂಘಗಳು ಸ್ಥಾಪನೆಯಾಯಿತು. ರೈತ ದೇಶದ ಬೆನ್ನೆಲುಬು. ಆದರೆ ತಾನು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಆತನಿಂದು ಕೃಷಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ. ರೈತನಿಗೆ ಮಾರುಕಟ್ಟೆ ವ್ಯವಸ್ಥೆ ರೂಪಿಸಲು ಸಾಧ್ಯವಾಗದಿರುವುದರಿಂದ ರೈತ ಕಷ್ಟಪಟ್ಟು ಬೆಳೆದ ಬೆಳೆಯಿಂದ ದಲ್ಲಾಳಿಗಳು ಆರ್ಥಿಕವಾಗಿ ಲಾಭ ಮಾಡಿಕೊಳ್ಳುವಂತಾಗಿದೆ. ಆದ್ದರಿಂದ ರೈತರು ಬೆಳೆ ಬೆಳೆಯಲು ಮಾತ್ರ ಸೀಮಿತವಾಗದೇ ಸಣ್ಣ ಸಣ್ಣ ತಂಡಗಳನ್ನು ರಚಿಸಿಕೊಂಡು ಸಹಕಾರಿ ಸಂಘಗಳ ಮೂಲಕ ತಾವು ಬೆಳೆದ ಬೆಳೆಯನ್ನು ತಾವೇ ಉತ್ತಮ ಬೆಳೆಗೆ ಮಾರಾಟ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಇದಕ್ಕೆ ಉತ್ತೇಜನ ನೀಡುತ್ತಿದ್ದು, ಆತ್ಮ ನಿರ್ಭರ ಭಾರತದ ಕಲ್ಪನೆಯಡಿ ಸಣ್ಣ ಸಣ್ಣ ಗುಂಪುಗಳಿಗೂ ಆರ್ಥಿಕ ಸ್ವಾವಲಂಭಿಗಳಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಬೇಕು ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದ್ದು, ಸಮಾಜದ ಕಟ್ಟ ಕಡೆಯ ರೈತ, ಕೂಲಿ ಕಾರ್ಮಿಕನನ್ನು ತಲುಪುವ ವ್ಯವಸ್ಥೆಯಿರುವುದು ಅದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ. ಸ್ಥಳೀಯ ಜನರ ಮನೋಸ್ಥಿತಿಯನ್ನು ಅರಿತುಕೊಂಡು ಕೆಲಸ ಮಾಡುವ ಸ್ಥಳೀಯರೇ ಆದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಇರುವುದೇ ಇದಕ್ಕೆ ಕಾರಣ. ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಶಕ್ತಿಯುತವಾಗಿದ್ದು, ರೈತರ ಏಳಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣಾಗದೇ ಇರುವ ಜಿಲ್ಲೆಯೆಂದರೆ ಅದು ದೇಶದಲ್ಲಿಯೇ ದ.ಕ. ಜಿಲ್ಲೆ ಮಾತ್ರ. ಉಪ್ಪಿನಂಗಡಿಯ ಸಹಕಾರಿ ಸಂಘವು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕ ಪತ್ತಿನ ಸಂಸ್ಥೆಯೊಂದು ಫ್ಯಾಕ್ಟ್ಸ್ ಗೊಬ್ಬರ ಸಂಸ್ಥೆಯ ನೇರ ಡೀಲರ್ ಶಿಪ್ ಪಡೆದಿದೆಯೆಂದರೆ ಅದು ಉಪ್ಪಿನಂಗಡಿಯ ಸಹಕಾರಿ ಸಂಘ ಮಾತ್ರ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜಕಾರಣಗಿಂತ ಸಹಕಾರ ಕ್ಷೇತ್ರ ಭಿನ್ನ.  ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ತತ್ತ್ವದಡಿ ರೂಪುಗೊಂಡಿರುವ ಸಹಕಾರಿ ಸಂಘಗಳಿಂದ ಇಂದು ಗ್ರಾಮಗಳ ಅಭಿವೃದ್ಧಿಯಾಗಿದೆ. ಈ ಮೂಲಕ ಸರಕಾರ ಮಾಡದ್ದನ್ನು ಸಹಕಾರ ಮಾಡಿದೆ. ಕೇಂದ್ರದಿಂದ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸ ಆಗಿದೆ. ಸ್ವಾತಂತ್ರ್ಯದ 75ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೇಂದ್ರದಲ್ಲಿ ಸಹಕಾರಿ ಇಲಾಖೆ, ಸಹಕಾರ ಸಚಿವರನ್ನು ಪ್ರಧಾನಿ ಮೋದಿಯವರು ನೀಡಿದ್ದಲ್ಲದೆ, ಹೈನುಗಾರರಿಗೆ ರಾಸುಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡಿದ್ದಾರೆ. ಸಹಕಾರಿ ಸಂಘಗಳಲ್ಲಿ ನಿಂತು ಹೋಗಿದ್ದ ಯಶಸ್ವಿನಿ ವಿಮೆಯನ್ನು ಪುನರ್ ಪ್ರಾರಂಭಿಸಲಾಗಿದೆ. ಆದ್ದರಿಂದ ರೈತರು ಇವುಗಳ ಪ್ರಯೋಜನ ಪಡೆದುಕೊಂಡು ಹಡೀಲು ಬಿದ್ದ ಗದ್ದೆಯನ್ನು ಉಳುಮೆ ಮಾಡಿ ಆಹಾರ ಧಾನ್ಯದಲ್ಲಿ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು ಎಂದರು.

ಮಹಾಲಿಂಗ ನಾಯಕ್‌ ರಿಗೆ ಸನ್ಮಾನ: ಇದೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಅಮೈ ಮಹಾಲಿಂಗ ನಾಯ್ಕ್‍ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಪ್ರಶಸ್ತಿಗಾಗಿ ದುಡಿದವನು ಅಲ್ಲ, ನಿಮ್ಮೆಲ್ಲರ ಆಶೀರ್ವಾದದಿಂದ ಅದು ಬಂದಿದೆ ಎಂದು ತಾನು ಮಾಡಿರುವ ಸಾಧನೆಯ ಅನುಭವವನ್ನು ಹಂಚಿಕೊಂಡರಲ್ಲದೆ, ನಾವು ನೀರಿಂಗಿಸೋಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗಾದರೆ ಮಾತ್ರ ಮಂದೆ ನೀರಿನ ಸಮಸ್ಯೆ ಎದುರಾಗಲಾರದು ಎಂದು ಹೇಳಿದರು.

ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ, ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪೌರಕಾರ್ಮಿಕರಿಗೆ ಗೌರವಾರ್ಪಣೆ ನಡೆಯಿತು. ಅಟಲ್ ಪಿಂಚಣಿ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಕ್ಲೇರಿ ವೇಗಸ್ ಉಪಸ್ಥಿತರಿದ್ದರು.

ಭಾಗ್ಯಶ್ರೀ ಪ್ರಾರ್ಥಿಸಿದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಸ್ವಾಗತಿಸಿ ದರು. ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಉಪನ್ಯಾಸಕರಾದ ರವೀಂದ್ರ ದರ್ಬೆ ಹಾಗೂ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಮತ್ತು ಗಣ್ಯರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಾಗತಿಸಲಾಗಿ ಅಲ್ಲಿಂದ ಸಂಘದ ಸಭಾಂಗಣ ತನಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಚೆಂಡೆ, ವಾದ್ಯ ಮೊಳಗಿದರೆ, ಸಹಕಾರಿ ಧ್ವಜ ಹಿಡಿದು, ಶಾಲು ಧರಿಸಿ ಪುರುಷರು, ವನಿತೆಯರು ಸಾಗಿ ಬಂದರು.

ಟ್ಯಾಕ್ಟರ್ ಹಸ್ತಾಂತರ: ಸಭಾ ಕಾರ್ಯಕ್ರಮಕ್ಕೆ ಮುನ್ನ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೊಡ ಮಾಡಲಾದ 2 ಟ್ಯಾಕ್ಟರ್‌ ಗನ್ನು ಸಂಘಕ್ಕೆ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News