ನನ್ನ ವಿರುದ್ಧ ಆಧಾರ ರಹಿತ ಆರೋಪವನ್ನು ಮಾಡಿದ್ದಾರೆ: ಸಚಿವ ಅಶ್ವತ್ಥ ನಾರಾಯಣ

Update: 2022-05-02 17:04 GMT
ಫೈಲ್ ಚಿತ್ರ- ಸಚಿವ ಅಶ್ವತ್ಥ ನಾರಾಯಣ 

ಬೆಂಗಳೂರು, ಮೇ 2: `ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು. ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸತೀಶ್ ಅವರು ನನ್ನ ಅಣ್ಣ ಎನ್ನುವುದು ನಿಜ. ಆದರೆ, ಈ ದರ್ಶನ್ ಗೌಡ ಯಾರೆನ್ನುವುದೂ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಯೂ ಇಲ್ಲ. ನನ್ನ ಸಾಧನೆಗಳನ್ನು ಸಹಿಸಿಕೊಳ್ಳಲು ವಿರೋಧಿಗಳಿಗೆ ಆಗುತ್ತಿಲ್ಲ. ಹೀಗಾಗಿ ಮಸಿ ಮೆತ್ತುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ತಿರುಗೇಟು ನೀಡಿದರು.

`ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆಂದು ಹೇಳುವವನು ನಾನು. ಪಿಎಸ್ಸೈ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಈಗಾಗಲೇ ವಿಚಾರಣೆ ಆರಂಭವಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಮಾಧ್ಯಮಗಳು ಇದರತ್ತ ಗಮನ ಹರಿಸಬೇಕು’ ಎಂದು ಹೇಳಿದರು. 

`ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು ಈಗ ಮಾಡುತ್ತಿರುವ ಆರೋಪವನ್ನು ಒಪ್ಪುವುದಾದರೆ, ತಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರರನ್ನೇ ಕಡುಭ್ರಷ್ಟ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದ ಉಗ್ರಪ್ಪರ ಹೇಳಿಕೆಯನ್ನೂ ಸತ್ಯ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಹಲವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಕಟ್ಟುಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವುಗಳನ್ನು ಆಳವಾಗಿ ಪರಿಶೀಲಿಸಿದರೆ, ಇವೆಲ್ಲ ಎಲ್ಲಿ ಸೃಷ್ಟಿಯಾಗುತ್ತಿದೆ ಎನ್ನುವುದೆಲ್ಲ ಗೊತ್ತಾಗುತ್ತದೆ’ ಎಂದು ಅವರು ಛೇಡಿಸಿದರು. 

`ಕುಟುಂಬದವರ ಹೆಸರನ್ನು ತೇಲಿಬಿಟ್ಟು ಈಗ ಹೀನ ರಾಜಕೀಯ ಮಾಡಲಾಗುತ್ತಿದೆ. ಎಂತಹ ಸ್ಥಿತಿಯಲ್ಲೂ ನಾವು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಪದ್ಧತಿ ನಮಗೆ ಗೊತ್ತಿಲ್ಲ. ನಾವು ಜನಸೇವೆ ಮಾಡಲೆಂದು ಈ ಕ್ಷೇತ್ರಕ್ಕೆ ಬಂದಿರುವವರು. ವಿರೋಧಿಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಸಾಕ್ಷ್ಯಾಧಾರಗಳ ಸಮೇತ ಸಾಬೀತುಪಡಿಸಬೇಕು. ಇಲ್ಲದೆ ಹೋದರೆ ನಾನು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಂತೂ ನಿಶ್ಚಿತ' ಎಂದು ಅವರು ಎಚ್ಚರಿಕೆ ನೀಡಿದರು.

`ನಮ್ಮ ಕುಟುಂಬದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಕೆಲವರು ರಾಜಕೀಯಕ್ಕೆ ಬಂದು ಮನುಷ್ಯತ್ವದ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪಗಳನ್ನು ಮಾಡುವ ಇವರಿಗೆ ನಾಚಿಕೆ ಅನ್ನೋದೇ ಇಲ್ಲವಾ?’ ಪಿಎಸ್ಸೈ ಪರೀಕ್ಷೆ ಸಂಬಂಧ ತನಿಖೆ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅವರು ಹೇಳಿದಂತೆ ತನಿಖೆ ನಡೆದರೆ ಒಳ್ಳೆಯದು. ಈ ಆರೋಪದ ಹಿಂದೆ ಏನು ಮ್ಯಾಚ್ ಫಿಕ್ಸಿಂಗ್ ಆಗಿದೆ, ಹುನ್ನಾರ ಏನು, ಷಡ್ಯಂತ್ರ ಏನು ಎಲ್ಲ ಗೊತ್ತಾಗಲಿ' ಎಂದು ಅಶ್ವತ್ಥ ನಾರಾಯಣ ಸವಾಲು ಹಾಕಿದರು. 

`ಪಿಎಸ್ಸೈ ನೇಮಕಾತಿ ಪರೀಕ್ಷೆ ಕುರಿತ ತನಿಖೆಗೆ ಯಾರನ್ನಾದರೂ ವಿಚಾರಣೆಗೆ ಕರೆದಿದ್ದರು ಎನ್ನುವ ವಿವರವನ್ನು ಬೇಕಾದರೆ ಸಿಐಡಿಯಿಂದಲೇ ಪಡೆದುಕೊಳ್ಳಲಿ. ‘ಉಪ್ಪು ತಿಂದವರು ಯಾರೇ ಆಗಿದ್ದರೂ ನೀರು ಕುಡಿಯಲೇ ಬೇಕು’ ಎನ್ನುವವನು ನಾನು. ನನ್ನ ಹೆಸರಿಗೆ ಮಸಿ ಬಳಿಯಲು ನೂರು ಜನ್ಮ ಬಂದರೂ ಸಾಲಲ್ಲ' ಎಂದು ಅವರು ಸಮರ್ಥಿಸಿಕೊಂಡರು. 

ಅಭ್ಯರ್ಥಿ ಪರವಾಗಿ ಶಿಫಾರಸು ಮಾಡಿಲ್ಲ 

`ಪಿಎಸ್ಸೈ ನೇಮಕಾತಿ ವಿಷಯದಲ್ಲಿ ಯಾವುದೇ ಅಭ್ಯರ್ಥಿ ಪರವಾಗಿ ಶಿಫಾರಸು ಮಾಡಿಯೇ ಇಲ್ಲ. ಆಪಾದನೆ ಮಾಡುತ್ತಿರುವವರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಮಾಡಿರಬಹುದು, ಹೋಗಿರಬಹುದು ಎಂಬ ರೀತಿಯಲ್ಲಿ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನಾನು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಭ್ರಷ್ಟಾಚಾರಿಗಳಾದ ಅವರಿಗೆ ಒಳಗೆ ಚುಚ್ಚುತ್ತಿರುತ್ತದೆ. ಅದನ್ನು ತಡೆಯಲಾಗದೇ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು'
-ಡಾ.ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News